Saturday, 24 February 2018

ದಿ ಜೆನರಲ್(1926)





  ಸ್ಲ್ಯಾಪ್ ಸ್ಟಿಕ್ ಕಾಮಿಡಿ ಚಿತ್ರಗಳ ಬಗ್ಗೆ ಯಾರಾದರೂ ಕೇಳಿದರೆ ಥಟ್ಟನೆ ಹೊಳೆಯುವುದು ಚಾರ್ಲಿ ಚ್ಯಾಪ್ಲಿನ್. ಆದರೆ ಆತನಷ್ಟೇ ಖ್ಯಾತಿ ಹೊಂದಿದ್ದ ಮತ್ತು ಅಷ್ಟೇ ಪ್ರತಿಭಾವಂತನಾಗಿದ್ದ ಮತ್ತೊಬ್ಬ ಕಲಾವಿದನೇ ಬಸ್ಟರ್ ಕೀಟನ್(Buster Keaton). ತನ್ನ ವೃತ್ತಿ ಜೀವನದಲ್ಲಿ ಮಾಡಿಕೊಂಡ ಕೆಲವು ತಪ್ಪು ನಿರ್ಧಾರಗಳಿಂದ ಚ್ಯಾಪ್ಲಿನ್ ನಷ್ಟು ಅವಕಾಶಗಳು ಸಿಗದೆ ಹಾಗೇ ಕಣ್ಮರೆಯಾದ ಕಲಾವಿದ ಈತ. ಚ್ಯಾಪ್ಲಿನ್ ತನ್ನ ಚಿತ್ರಗಳಲ್ಲಿ ತನ್ನ ಮುಖದಲ್ಲಿ ತೋರುತ್ತಿದ್ದ ಭಾವನೆಗಳಿಂದ ಎಲ್ಲರನ್ನೂ ನಗಿಸುತ್ತಿದ್ದರೆ, ಕೀಟನ್ ತನ್ನ ನಿರ್ಭಾವುಕ ಮುಖದಿಂದ ನಗಿಸುತ್ತಿದ್ದ. ಅದಕ್ಕಾಗಿಯೇ ಆತನ ಮುಖಕ್ಕೆ ಡೆಡ್ ಪ್ಯಾನ್ ಫೇಸ್ ಎಂದು ಕರೆಯುವುದುಂಟು. ಆತನು ನಟಿಸಿದ ಅನೇಕ ಚಿತ್ರಗಳಲ್ಲಿ ಮಾಡಿರುವ ಸಾಹಸ ದೃಶ್ಯಗಳು ನಿಜಕ್ಕೂ ಬಹಳ ಅಪಾಯಕಾರಿಯಾದವು. ಆದರೂ ಯಾವುದೇ ಸ್ಟಂಟ್ ಡಬಲ್ ಗಳನ್ನು ಉಪಯೋಗಿಸದೆ ತಾನೇ ಆ ಸಾಹಸಗಳನ್ನು ಮಾಡುತ್ತಿದ್ದುದು ಆಶ್ಚರ್ಯಕರ. ನೋಡುವವರಿಗೆ ನಗು ತರಿಸಿದರೂ ಆತ ಆ ದೃಶ್ಯಗಳಿಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೀಟನ್ ನ ಈ ದೃಶ್ಯಗಳ ವಿಶಿಷ್ಟತೆ ಮತ್ತು ಆತನಿಗೆ ಅವು ಹೇಗೆ ಮೂಡಿಬರಬೇಕು ಎನ್ನುವ ಬಗ್ಗೆ ಇದ್ದ ಕಲ್ಪನೆಯ ಬಗ್ಗೆ ವಿಸ್ತೃತವಾಗಿ ಈ ಕೆಳಗಿನ ಯುಟ್ಯೂಬ್ ವಿಡಿಯೋದಲ್ಲಿ ಬಹಳ ಚೆನ್ನಾಗಿ ವಿವರಿಸಲಾಗಿದೆ.

  ಆತನ ಚಿತ್ರಗಳಲ್ಲಿ ಇಂದಿಗೂ ಬಹಳ ಮಾತಾಡಲ್ಪಡುವ ಚಿತ್ರ ‘ದಿ ಜೆನರಲ್’. 1926ರಲ್ಲಿ ತೆರೆಕಂಡ ಈ ಚಿತ್ರ ಕೀಟನ್ ಗೆ ಲಾಭ ತರಲಿಲ್ಲ. ಯುದ್ಧ ಚಿತ್ರವನ್ನು ಹಾಸ್ಯಮಯವಾಗಿ ತೋರಿಸುವ ಬಗೆ ಅಂದಿಗೆ ಹೊಸದು. ಈ ಚಿತ್ರ ಇರುವುದು ಬೇರೆ ಅಮೆರಿಕನ್ ಸಿವಿಲ್ ವಾರ್ ನ ಬಗ್ಗೆ. ಅಮೆರಿಕನ್ ಸಿವಿಲ್ ವಾರ್ ಅಂದಿನ ಮಟ್ಟಿಗೆ ಬಹಳ ಸೂಕ್ಷ್ಮವಾದ ವಿಷಯ. ಕೀಟನ್ ಇದರಲ್ಲಿ ಯಾರನ್ನೂ ಗೇಲಿಮಾಡದಿದ್ದರೂ ಸಿವಿಲ್ ವಾರ್ ನಲ್ಲಿ ಗೆದ್ದ ಯೂನಿಯನ್ ಪಡೆಯನ್ನು ಖಳರಂತೆ ತೋರಿಸಿರುವುದೂ ಈ ಚಿತ್ರ ಸೋಲಲು ಕಾರಣವಿರಬಹುದು. ಅದೇನೇ ಇದ್ದರೂ ಇದೆಲ್ಲದರಿಂದ ಹೊರಗೆ ನಿಂತು ನೋಡುವ ನಮಗೆ ಇದೊಂದು ಅದ್ಭುತ ಚಿತ್ರ ಎನಿಸುವುದರಲ್ಲಿ ಎರಡು ಮಾತಿಲ್ಲ.

  ಕಥೆ ಬಹಳ ಸರಳವಾದದ್ದು. ಜಾನಿ ಗ್ರೇ(ಬಸ್ಟರ್ ಕೀಟನ್) ಎಂಬ ಟ್ರೇನ್ ಲೋಕೋಪೈಲಟ್ ಅಥವಾ ಎಂಜಿನಿಯರ್ ಗೆ ಜೀವನದಲ್ಲಿ ಎರಡು ವಿಷಯ ಅತ್ಯಂತ ಪ್ರಿಯವಾದದ್ದು. ತಾನು ಓಡಿಸುವ ರೈಲು, ‘ದಿ ಜೆನರಲ್’ ಮತ್ತು ತಾನು ಪ್ರೀತಿಸುವ ಹುಡುಗಿ ಆನಾಬೆಲ್ ಲೀ. ಹೀಗೆ ಒಂದು ದಿನ ಜಾನಿ ಅವಳ ಮನೆಗೆ ಹೋದಾಗ, ಯೂನಿಯನ್ ಮತ್ತು ಸೌತ್ ನಡುವೆ ಯುದ್ಧ ಘೋಷಣೆಯಾಗುತ್ತದೆ. ಈ ಸುದ್ದಿ ತಿಳಿದ ಲೀ ತಂದೆ ಮತ್ತು ಅಣ್ಣ ಸೈನ್ಯಕ್ಕೆ ಸೇರಲು ಹೊರಡುತ್ತಾರೆ. ಜಾನಿಗೂ ಸೇರುವಂತೆ ಲೀ ಹೇಳಿದಾಗ ಜಾನಿ ಸೈನ್ಯಕ್ಕೆ ಸೇರಲು ಎಲ್ಲರಿಗಿಂತ ಮುಂಚೆ ಓಡಿಹೋಗಿ ಸರತಿಯಲ್ಲಿ ನಿಲ್ಲುತ್ತಾನೆ. ಆದರೆ ಈತ ರೈಲು ಎಂಜಿನಿಯರ್ ಎಂದು ತಿಳಿದ ಕೂಡಲೆ ಈತ ಸೈನ್ಯಕ್ಕಿಂತ ಸಾಮಾನು ಸಾಗಣೆಗೆ ಹೆಚ್ಚು ಮುಖ್ಯವಾಗಿ ಬೇಕಾದವನು ಎಂದು ಯೋಚಿಸಿ ಅಲ್ಲಿನ ಅಧಿಕಾರಿ ಈತನನ್ನು ಸೇರಿಸಿಕೊಳ್ಳದೆ ಕಳುಹಿಸುತ್ತಾನೆ. ಇದು ತಿಳಿಯದ ಜಾನಿ ತನಗಿಂತ ಪೇಲವ ಸ್ಥಿತಿಯಲ್ಲಿರುವವರನ್ನೆಲ್ಲ ಸೇರಿಸಿಕೊಳ್ಳುತ್ತಿದ್ದಾರೆ ಆದರೆ ತನ್ನನ್ನು ಮಾತ್ರ ಏಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಬಹಳ ಯೋಚಿಸಿ ವಿಧವಿಧವಾಗಿ ಸೈನ್ಯಕ್ಕೆ ಸೇರಲು ಬೇಕಿದ್ದ ಚೀಟಿ ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ಅಧಿಕಾರಿ ಈತನನ್ನು ಅಲ್ಲಿಂದ ಒದ್ದು ಕಳುಹಿಸುತ್ತಾನೆ. ಬೇಜಾರು ಮಾಡಿಕೊಂಡು ಅಲ್ಲಿಂದ ಹೊರಡುತ್ತಿದ್ದಾಗ ಲೀ ತಂದೆ ಮತ್ತು ಅಣ್ಣ ಜಾನಿಯನ್ನು ನೋಡಿ ಸರತಿಯಲ್ಲಿ ತಮ್ಮೊಂದಿಗೆ ನಿಲ್ಲಲು ಕರೆಯುತ್ತಾರೆ. ಆದರೆ ಆಗಷ್ಟೇ ಒದೆತ ತಿಂದು ಬಂದಿದ್ದ ಜಾನಿ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಲೀ ತಂದೆ ಮತ್ತು ಅಣ್ಣ ಆತ ಕರೆದರೂ ಸೈನ್ಯಕ್ಕೆ ಸೇರಲಿಲ್ಲ ಎಂದು ಲೀ ಬಳಿ ಹೇಳುತ್ತಾರೆ. ಇದರಿಂದ ಕೋಪಗೊಳ್ಳುವ ಲೀ, ಜಾನಿಗೆ ಆತ ಸೈನ್ಯದ ಸಮವಸ್ತ್ರ ತೊಡುವವರೆಗೂ ತನ್ನ ಬಳಿ ಮಾತನಾಡದಂತೆ ಹೇಳಿ ಕಳುಹಿಸುತ್ತಾಳೆ.

  ಕೆಲವು ದಿನಗಳ ನಂತರ ಲೀ ಯುದ್ಧದಲ್ಲಿ ಗಾಯಾಳುವಾಗಿದ್ದ ತನ್ನ ತಂದೆಯನ್ನು ನೋಡಲು ಜಾನಿಯ ರೈಲಿನಲ್ಲಿ ಪ್ರಯಾಣ ಮಾಡುತ್ತಾಳೆ. ಯೂನಿಯನ್ ಪಡೆಯ ಕೆಲವು ಗೂಢಚಾರಿಗಳು ಆ ರೈಲನ್ನು ಊಟಕ್ಕೆ ನಿಲ್ಲಿಸಿದಾಗ ಕದ್ದೊಯ್ದು ದಾರಿಯಲ್ಲಿ ಸಿಗುವ ಎಲ್ಲ ಸೇತುವೆಗಳನ್ನು ಧ್ವಂಸಮಾಡಿ ಸೌತ್ ಸೈನ್ಯದ ಸಾಮಾನು ಸಾಗಣೆಯ ದಾರಿಯನ್ನು ನಿಲ್ಲಿಸುವ ಹುನ್ನಾರ ಮಾಡಿ ರೈಲು ಹತ್ತಿರುತ್ತಾರೆ. ಹಾಕಿಕೊಂಡ ಉಪಾಯದಂತೆ ಬಿಗ್ ಶ್ಯಾಂಟಿ ಎಂಬ ಊರಲ್ಲಿ ರೈಲು ನಿಲ್ಲಿಸಿ ಎಲ್ಲರೂ ಊಟಕ್ಕೆ ಹೋದಾಗ ಈ ಗೂಢಚಾರಿ ಪಡೆ ರೈಲನ್ನು ಕದ್ದೊಯ್ಯುತ್ತಾರೆ. ಹಾಗೆ ಕದ್ದೊಯ್ಯುವಾಗ ಅಕಸ್ಮಾತಾಗಿ ಲೀ ತನ್ನ ಲಗೇಜ್ ಹುಡುಕಲು ಲಗೇಜ್ ಕಂಪಾರ್ಟ್ ಮೆಂಟಿನಲ್ಲಿದ್ದಾಗ ಆಕೆಯನ್ನು ನೋಡಿ ಗಾಬರಿಗೊಂಡ ಗೂಢಚಾರಿಗಳು ಆಕೆಯನ್ನೂ ಸೇರಿಸಿ ರೈಲನ್ನು ಕದ್ದೊಯ್ಯುತ್ತಾರೆ. ರೈಲನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ತಿಳಿದ ತಕ್ಷಣ ಜಾನಿ ಅದರ ಹಿಂದೆ ಓಡುತ್ತಾನೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಅದನ್ನು ಹಿಂಬಾಲಿಸುತ್ತಾನೆ. ಕೊನೆಗೆ ಮುಂದಿನ ನಿಲ್ದಾಣ ತಲುಪಿ ಅಲ್ಲಿದ್ದ ಇನ್ನೊಂದು ರೈಲು(ಟೆಕ್ಸಾಸ್ ಅದರ ಹೆಸರು) ತೆಗೆದುಕೊಂಡು ಕದ್ದೊಯ್ದ ರೈಲನ್ನು ಹಿಂಬಾಲಿಸುತ್ತಾನೆ. ರೈಲಿನ ಈ ಚೇಸ್ ದೃಶ್ಯವನ್ನು ಬಹುಶಃ ಬೇರೆ ಇನ್ಯಾವ ಚಿತ್ರದಲ್ಲಿಯೂ ಕಾಣಲಾರಿರಿ. ಒಂದು ರೈಲು ಇನ್ನೊಂದನ್ನು ಚೇಸ್ ಮಾಡುವುದು ಎಂದರೆ ಏನರ್ಥ? ಅವು ಓಡುವುದು ಹಳಿಯ ಮೇಲಲ್ಲವೇ? ಇಂತಹ ವಿಚಿತ್ರಗಳನ್ನು ಹೊತ್ತು ಮಾರ್ಗ ಮಧ್ಯೆ ಅನೇಕ ಗ್ಯಾಗ್ ಗಳನ್ನು(ದೈಹಿಕ ಹಾಸ್ಯ) ಮಾಡುತ್ತಾ ತನ್ನ ರೈಲು ಜೆನರಲ್ ಅನ್ನು ಹಿಂಬಾಲಿಸುತ್ತಾನೆ. ತಾನು ಕೊಂಡೊಯ್ದಿದ್ದ ರೈಲನ್ನು ಮಾರ್ಗ ಮಧ್ಯೆ ಬಿಟ್ಟು ಕಾಡೊಳಗೆ ಹೊಕ್ಕು ತನ್ನ ರೈಲನ್ನು ಕೊಂಡೊಯ್ದ ಕಡೆಗೆ ಮೆಲ್ಲಗೆ ಹೋಗುತ್ತಾನೆ. ಅಷ್ಟರಲ್ಲಿ ಮಳೆ ಬಂದು ಮಳೆಯಲ್ಲಿ ನೆನೆಯುತ್ತ ತನ್ನ ರೈಲು ಕದ್ದೊಯ್ದ ಗೂಢಚಾರರು ಹೋದ ಮನೆಗೆ ಹೋಗುತ್ತಾನೆ. ಯಾರು ಇಲ್ಲವೆಂದು ತಿಳಿದು ಅಲ್ಲಿದ್ದ ಊಟದ ಟೇಬಲ್ಲಿನ ಮೇಲಿನ ತಿಂಡಿಯನ್ನು ಎತ್ತಿಕೊಳ್ಳುತ್ತಿದ್ದಂತೆ ಅಲ್ಲಿಗೆ ಆ ಗೂಢಚಾರರು ಬರುತ್ತಾರೆ. ಅವರನ್ನು ನೋಡಿದ ಜಾನಿ ಅಲ್ಲಿಂದ ತಪ್ಪಿಸಿಕೊಳ್ಳಲಾಗದೆ, ಅದೇ ಟೇಬಲ್ಲಿನ ಕೆಳಗೆ ಅಡಗಿ ಕೂರುತ್ತಾನೆ. ಹಾಗೇ ಕೂತು ಅಲ್ಲಿದ್ದವರು ಯುದ್ಧದ ಮುಂದಿನ ನಡೆಯ ಬಗ್ಗೆ ಮಾತಾಡುವುದನ್ನೆಲ್ಲ ಕೇಳಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಅವರು ರೈಲು ತರುವಾಗ ಸೆರೆ ಹಿಡಿದ ಆನಬೆಲ್ ಲೀ ಳನ್ನು ಕರೆತರುತ್ತಾರೆ. ಇದನ್ನು ಟೇಬಲ್ಲಿಗೆ ಹೊದಿಸಿದ್ದ ಬಟ್ಟೆಯ ಮೇಲಾದ ಸಣ್ಣ ತೂತಿನಿಂದ ಜಾನಿ ನೋಡಿ ಆಶ್ಚರ್ಯಗೊಂಡು ಲೀ ಇವರ ಬಳಿ ಹೇಗೆ ಸಿಕ್ಕಿಹಾಕಿಕೊಂಡಳು ಎಂದು ಯೋಚಿಸುತ್ತ, ಆಕೆಯನ್ನು ಮತ್ತು ತನ್ನ ರೈಲನ್ನು ಅಲ್ಲಿಂದ ಹೇಗಾದರೂ ಮಾಡಿ ಕೊಂಡೊಯ್ಯಬೇಕು ಎಂದು ನಿರ್ಧರಿಸುತ್ತಾನೆ. ನೆರೆದಿದ್ದವರೆಲ್ಲ ಮಾತುಕತೆಯ ನಂತರ ತಮ್ಮ ತಮ್ಮ ಕೋಣೆಗಳಿಗೆ ತೆರಳಿದ ನಂತರ ಜಾನಿ ಸಮಯ ನೋಡಿ ಅಲ್ಲಿಂದ ಹೊರಬಂದು ಹೊರಗೆ ಕಾವಲಿದ್ದ ಸೈನಿಕನೊಬ್ಬನನ್ನು ಹೊಡೆದುರುಳಿಸಿ ಅವನ ಬಟ್ಟೆ ತೊಟ್ಟು ಲೀ ಳನ್ನು ಬಿಡಿಸಿ ಹೊರತರುತ್ತಾನೆ. ಇಬ್ಬರೂ ಹೊರಬಂದು ಕಾಡು ಸೇರಿ ವಿಶ್ರಾಂತಿ ಪಡೆಯುತ್ತಾರೆ. ಲೀಗೆ ತನ್ನ ಪ್ರಿಯತಮ ಜಾನಿ ತನ್ನನ್ನು ಕಾಪಾಡಲು ಬಂದಿದ್ದಾನೆ ಎಂದು ತಿಳಿದು ಬಹಳ ಸಂತೋಷಪಡುತ್ತಾಳೆ.

  ಮರುದಿನ ಬೆಳಗ್ಗೆ ಇಬ್ಬರೂ ಎಚ್ಚರಗೊಂಡ ನಂತರ ಜಾನಿ ತಾನು ಮತ್ತು ಲೀ ಉತ್ತರದ ಸೈನ್ಯದ ಒಂದು ದೊಡ್ಡ ಕ್ಯಾಂಪ್ ನಲ್ಲಿ ಇದ್ದಾರೆಂದು ತಿಳಿದು ಭಯಗೊಳ್ಳುತ್ತಾರೆ. ಆದರೂ ಜಾನಿ ಉಪಾಯದಿಂದ ಲೀ ಜೊತೆ ತನ್ನ ರೈಲು ‘ದಿ ಜೆನರಲ್’ ಓಡಿಸಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಇವನು ಅಲ್ಲಿಂದ ಹೊರಡುತಿದ್ದಂತೆ, ಉತ್ತರದ ಸೈನಿಕರು ಇವನನ್ನು ಇನ್ನೊಂದು ರೈಲಿನಲ್ಲಿ ಹಿಂಬಾಲಿಸುತ್ತಾರೆ. ಹಿಂದಿನ ದಿನ ಕೇಳಿಸಿಕೊಂಡ ಯುದ್ಧದ ಯೋಜನೆಗಳ ಪ್ರಕಾರ ಮುಂದೆ ಬರುವ ಸೇತುವೆ ಉತ್ತರದ ಸೈನ್ಯಕ್ಕೆ ಬಹಳ ಮುಖ್ಯವಾದದ್ದು ಎಂದು ಯೋಚಿಸುವ ಜಾನಿ ಆ ಸೇತುವೆಯನ್ನು ಧ್ವಂಸಮಾಡಲು ತನ್ನ ರೈಲನ್ನು ವೇಗವಾಗಿ ಓಡಿಸುತ್ತಾ ಹೋಗುತ್ತಾನೆ. ಹಾಗೆ ಹೋಗುತ್ತಾ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಇನ್ನೊಂದು ರೈಲಿಗೆ ಅನೇಕ ಅಡ್ಡಿಗಳನ್ನು ನಿರ್ಮಿಸುತ್ತಾ ಹೋಗುತ್ತಾನೆ. ಹೀಗೆ ಹೋಗುವಾಗ ಜಾನಿ ಪ್ರೇಯಸಿ ಲೀ ತನಗೆ ಆದಷ್ಟು ಸಹಾಯ ಮಾಡುತ್ತಾ ಹೋಗುತ್ತಾಳೆ. ಆದರೆ ಆಕೆ ಮಾಡುವ ಸಹಾಯ ಜಾನಿಯ ಉಪಯೋಗಕ್ಕೆ ಬಾರದು. ರೈಲನ್ನು ಓಡಿಸುವುದರಲ್ಲಿ ಮಗ್ನನಾಗಿದ್ದ ಜಾನಿ ಲೀಗೆ ಕಟ್ಟಿಗೆಯನ್ನು ಒಂದೊಂದಾಗಿ ಬಾಯ್ಲರ್ ಗೆ ಹಾಕು ಎಂದಾಗ ಆಕೆ, ಒಂದೊಂದೇ ಕಟ್ಟಿಗೆ ತೆಗೆದು ನೋಡಿ ಅದು ಚೆನ್ನಾಗಿ ಕತ್ತರಿಸಲ್ಪಟ್ಟಿದ್ದರೆ ಮಾತ್ರ ಹಾಕುತ್ತಿರುತ್ತಾಳೆ. ಕಟ್ಟಿಗೆಯಲ್ಲಿ ತೂತು ಅಥವಾ ಇನ್ನಿತರೇ ದೋಷಗಳಿದ್ದರೆ ಅದನ್ನು ಬಿಸಾಡುತ್ತಾಳೆ. ಅದು ಸಾಲದೆಂಬಂತೆ ಗೃಹಿಣಿಯ ತರಹ ಪೊರಕೆ ಹಿಡಿದು ಕಸ ಗುಡಿಸಲು ನಿಲ್ಲುತ್ತಾಳೆ. ಹೀಗೆ ತನ್ನ ಪ್ರೇಯಸಿಯ ಮುಗ್ಧತೆಯನ್ನು ನೋಡಿ ಸಿಟ್ಟು ಮಾಡಿಕೊಳ್ಳದೆ ಅವಳಿಗೆ ಮುತ್ತಿಟ್ಟು ಜಾನಿ ಮುಂದುವರೆಯುತ್ತಾನೆ. ಹಿಂದೆ ಬರುತ್ತಿದ್ದ ರೈಲನ್ನು ಸಾಕಷ್ಟು ಹಿಂದಿಕ್ಕಿದ ನಂತರ ಉತ್ತರದ ಸೈನಿಕರು ತಾವು ಇತರೆ ಸೈನಿಕರೊಂದಿಗೆ ಸಂಧಿಸಲು ಯೋಚಿಸಿದ್ದ ಸೇತುವೆ ತಲುಪಿ ಜಾನಿ ಅದಕ್ಕೆ ಬೆಂಕಿಯಿಡುತ್ತಾನೆ. ಅಲ್ಲಿಂದ ತನ್ನ ದಕ್ಷಿಣದ ಸೈನ್ಯದ ಕ್ಯಾಂಪ್ ತಲುಪಿ ಅಲ್ಲಿನ ಜೆನರಲ್ ಗೆ ಸೇತುವೆಯ ಬಳಿ ಉತ್ತರದ ಸೈನಿಕರು ಸೇರುತ್ತಿರುವ ಬಗ್ಗೆ ಮಾಹಿತಿ ಒದಗಿಸಿ ತಕ್ಷಣ ಅಲ್ಲಿಗೆ ಹೋಗುವಂತೆ ಕೋರುತ್ತಾನೆ. ಅವನು ಹೇಳಿದ್ದನ್ನು ಕೇಳಿ ಜೆನರಲ್ ತನ್ನ ಸೈನ್ಯದೊಂದಿಗೆ ಸೇತುವೆಯ ಬಳಿ ಉತ್ತರದ ಸೈನ್ಯವನ್ನು ಎದುರುಗೊಳ್ಳಲು ಹೋಗುತ್ತಾನೆ. ಅವರೊಡನೆ ಜಾನಿ ಕೂಡ ಹೋಗಿ ಜೆನರಲ್ ಸಹಾಯಕ್ಕೆ ನಿಲ್ಲುತ್ತಾನೆ.

  ಇಷ್ಟೆಲ್ಲಾ ಆಗುವುದರಲ್ಲಿ ಉತ್ತರದ ಸೈನಿಕರು ಜಾನಿ ಮಾಡಿಟ್ಟಿದ್ದ ಅಡೆಗಳನ್ನೆಲ್ಲ ದಾಟಿ ಸೇತುವೆ ಬಳಿ ಬಂದು ತಮ್ಮ ಇತರೆ ಸೈನಿಕ ಗುಂಪನ್ನು ಸಂಧಿಸುತ್ತಾರೆ. ಸೇತುವೆಗೆ ಬೆಂಕಿ ಬಿದ್ದಿರುವುದನ್ನು ನೋಡಿ ದಾಟುವುದೊ ಬೇಡವೋ ಎಂದು ಯೋಚಿಸುತ್ತಿದ್ದಾಗ, ಅವರಲ್ಲೇ ಒಬ್ಬ ಜೆನರಲ್ ಸೇತುವೆಯಿನ್ನೂ ಅಷ್ಟು ಸುಟ್ಟಿಲ್ಲ, ದಾಟಬಹುದು ಎಂದು ದಾಟಲು ಹೇಳುತ್ತಾನೆ. ಅದರಂತೆ ರೈಲು ದಾಟಲು ಹೋದಾಗ ರೈಲಿನ ಭಾರ ತಾಳಲಾರದೆ ಸುಟ್ಟು ದುರ್ಬಲಗೊಂಡಿದ್ದ ಸೇತುವೆ ಕುಸಿದು ರೈಲೂ ನದಿಯಲ್ಲಿ ಬೀಳುತ್ತದೆ. ಅಲ್ಲಿಗೆ ಉತ್ತರದ ಸೈನ್ಯದವರ ಸಾಮಾನು ಸಾಗಣೆಗೆ ಮಾಡಿಕೊಂಡ ದಾರಿ ಇನ್ನಿಲ್ಲದಾಗುತ್ತದೆ. ಆಶ್ಚರ್ಯದ ಸಂಗತಿಯೇನೆಂದರೆ ಈ ರೈಲು ಬೀಳುವ ದೃಶ್ಯವನ್ನು ಆಟಿಕೆ ರೈಲು ಮತ್ತು ಸೇತುವೆ ಬಳಸಿ ತೆಗೆದದ್ದಲ್ಲ. ಈ ದೃಶ್ಯಕ್ಕಾಗಿ ನಿಜವಾದ ರೈಲನ್ನು ಮತ್ತು ಸೇತುವೆಯನ್ನು ಬಳಸಿಕೊಳ್ಳಲಾಯಿತು. ಈ ಒಂದು ದೃಶ್ಯ ಮೂಕಿ ಚಿತ್ರಗಳ ಇತಿಹಾಸದಲ್ಲೇ ಅತ್ಯಂತ ದುಬಾರಿ ದೃಶ್ಯ. ಈ ದೃಶ್ಯಕ್ಕಾಗಿ ಕೀಟನ್ ಅಂದಿನ ದಿನಗಳಲ್ಲಿ ನಲವತ್ತೆರಡು ಸಾವಿರ ಡಾಲರ್(ಇಂದಿನ ಲೆಕ್ಕದಲ್ಲಿ ಐದು ಲಕ್ಷ ಡಾಲರ್) ಖರ್ಚು ಮಾಡಿದ್ದ. ಇದರ ಅಂದಾಜು ನಿಮಗೆ ಸಿಗಬೇಕೆಂದರೆ, ಅಂದಿಗೆ ಒಂದು ಹೊಚ್ಚ ಹೊಸ ಕಾರಿನ ಸರಾಸರಿ ಬೆಲೆ ಮುನ್ನೂರು ಡಾಲರ್ ಗಳು. ಚಿತ್ರ ಸೋತು ಕೀಟನ್ ಗೆ ಸಾಕಷ್ಟು ನಷ್ಟವಾಯಿತು. ಆದರೂ ಇಂತಹ ಒಂದು ದೃಶ್ಯ ಆಗಿನ ಕಾಲದಲ್ಲಿ ಅಷ್ಟು ಕರಾರುವಾಕ್ಕಾಗಿ ಮಾಡಿದ್ದು ನೋಡಿದರೆ, ಚಿತ್ರನಿರ್ಮಾಣದಲ್ಲಿ ಅಂದಿನ ವೃತ್ತಿಪರತೆ ಮತ್ತು ನೈಪುಣ್ಯತೆ ಎದ್ದು ಕಾಣುತ್ತದೆ. ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇರುತ್ತವೆ ಮತ್ತು ಚಿತ್ರ ನಿರ್ಮಾಣದ ಬಗೆ ಬದಲಾಗುತ್ತಲೇ ಇರುತ್ತದೆ, ಆದರೆ ಇಂತಹ ದೃಶ್ಯಗಳು ಸಿನೆಮಾ ಇತಿಹಾಸದಲ್ಲೇ ಕಾಲಾತೀತವಾಗಿ ನಿಲ್ಲುತ್ತವೆ.


  ರೈಲು ಬಿದ್ದ ನಂತರ ಸಾವರಿಸಿಕೊಂಡು ಮುಂದುವರೆಯುವ ಉತ್ತರದ ಸೈನ್ಯದ ಮೇಲೆ ದಕ್ಷಿಣದ ಸೈನ್ಯ ದಾಳಿ ಮಾಡುತ್ತದೆ. ದಾಳಿಗೆ ಉತ್ತರ ಕೊಡುತ್ತ ಉತ್ತರದ ಸೈನಿಕರು ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ವೇಳೆ, ಜಾನಿ ಅಚಾತುರ್ಯದಿಂದ ತೋಪು ಸಿಡಿಸಿ ನದಿಯ ನೀರನ್ನು ಹಿಡಿದಿಟ್ಟಿದ್ದ ಚಿಕ್ಕ ಅಣೆಕಟ್ಟನ್ನು ಒಡೆದು ಬಿಡುತ್ತಾನೆ. ಇದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ, ಉತ್ತರದ ಸೈನಿಕರು ಅಲ್ಲಿಂದ ಹಿಂದೆ ಸರಿದು ಯುದ್ಧಭೂಮಿಯಿಂದ ಓಡಿಹೋಗುತ್ತಾರೆ. ಯುದ್ಧ ಅಲ್ಲಿಗೆ ಮುಗಿಯುತ್ತದೆ. ಯುದ್ಧದಲ್ಲಿ ಜಯಶಾಲಿಗಳಾಗಿ ಮರಳಿದ ಎಲ್ಲರಿಗೂ ಊರಿನ ಜನ ಅಭಿನಂದಿಸುತ್ತಾರೆ. ತಾನು ಸೈನಿಕನಲ್ಲವಲ್ಲ ಎಂದು ಬೇಸರಪಟ್ಟುಕೊಂಡು ಜಾನಿ ತನ್ನ ರೈಲಿಗೆ ಮರಳಿದಾಗ ಅಲ್ಲಿ ಎದುರಾಳಿ ಸೈನ್ಯದ ಜೆನರಲ್ ಓರ್ವ ಜ್ಞಾನತಪ್ಪಿ ಬಿದ್ದದ್ದು ನೋಡಿ ಆತನನ್ನು ಎಬ್ಬಿಸಿ ತನ್ನ ಸೈನ್ಯದ ಜೆನರಲ್ ಬಳಿಗೆ ಶರಣಾಗತಿ ಮಾಡಿಸಲು ಕರೆದೊಯ್ಯುತ್ತಾನೆ. ಜಾನಿಯ ಶೌರ್ಯ ನೋಡಿದ ಜೆನರಲ್ ಆತನಿಗೆ ಸೈನ್ಯದಲ್ಲಿ ಕೊನೆಗೂ ಸೇರಿಸಿಕೊಂಡು ಅವನಿಗೆ ಲೆಫ್ಟಿನೆಂಟ್ ಹುದ್ದೆಯನ್ನು ಕೊಟ್ಟು ಕಳುಹಿಸುತ್ತಾನೆ. ತನ್ನ ಪ್ರಿಯತಮ ಸೈನ್ಯಕ್ಕೆ ಸೇರಲಿಲ್ಲ ಎಂದು ಬೇಸರಪಟ್ಟುಕೊಂಡಿದ್ದ ಲೀ ಕೊನೆಗೆ ಜಾನಿ ಆಫಿಸರ್ ಆಗಿ ಬಂದದ್ದನ್ನು ನೋಡಿ ಖುಷಿಪಡುತ್ತಾಳೆ. ಇಬ್ಬರೂ ಮತ್ತೆ ಒಂದಾಗುವುದರೊಂದಿಗೆ ಕಥೆ ಮುಗಿಯುತ್ತದೆ.

  ಇಲ್ಲಿ ಚಿತ್ರದಲ್ಲಿ ಬರುವ ಅನೇಕ ಹಾಸ್ಯದ ದೃಶ್ಯಗಳನ್ನು ನಾನು ವಿವರಿಸಲು ಹೋಗಿಲ್ಲ. ವಿವರಿಸುವುದು ಕಷ್ಟವೂ ಹೌದು. ಅವನು ಓಡಿಬಂದ, ಅವನು ಬಿದ್ದ ಎಂದೆಲ್ಲ ವಿವರಿಸಲು ಹೋದರೆ ಹಾಸ್ಯ, ಶಾಲೆಯ ವ್ಯಾಕರಣ ಪುಸ್ತಕದ ರೀತಿ ಅನಿಸುತ್ತದೆ. ಅದೃಷ್ಟವಶಾತ್ ಈ ಚಿತ್ರ ಯೂಟ್ಯೂಬ್ ನಲ್ಲಿ ನೋಡಲು ಲಭ್ಯವಿರುವುದರಿಂದ ಕೆಳಗೆ ಈ ಚಿತ್ರದ ಲಿಂಕ್ ಹಂಚಿಕೊಳ್ಳುತ್ತಿದ್ದೇನೆ. ಎರಡು ಬಗೆಯ ಹಿನ್ನಲೆ ಸಂಗೀತವಿರುವ ಚಿತ್ರಗಳು ಇವೆ. ನನಗೆ ಇಷ್ಟವಾದದ್ದನ್ನು( ಕಿನೋ ಇಂಟರ್ ನ್ಯಾಷನಲ್ ನ ಕಾಪಿ) ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಹಾಗೆ ಈ ಚಿತ್ರದ ಬಗೆಗಿನ ಇನ್ನಷ್ಟು ಸ್ವಾರಸ್ಯದ ಸಂಗತಿಗಳನ್ನು ಹೇಳುವ ಕೆಲವು ವೆಬ್ ಲಿಂಕ್ ಗಳನ್ನೂ ಹಂಚಿಕೊಂಡಿದ್ದೇನೆ.

ಚಿತ್ರದ ಲಿಂಕ್ - https://www.youtube.com/watch?v=x2X58JcO9G4

ರೈಲು ಬೀಳುವ ದೃಶ್ಯದ ಬಗ್ಗೆ ಇರುವ ಲಿಂಕ್ -  https://www.thevintagenews.com/2016/09/06/priority-train-scene-buster-keatons-general-expensive-scene-silent-film-history/

ದಿ ಜೆನರಲ್ ಚಿತ್ರಿಸಿದ ಜಾಗದ ಕುರಿತು - https://silentlocations.wordpress.com/2014/09/26/how-buster-keaton-filmed-the-general/

ರೈಲು ಬಿದ್ದ ನಂತರ ಏನಾಯಿತು ಎನ್ನುವುದರ ಬಗ್ಗೆ - http://offbeatoregon.com/H1002b_TheGeneral.html

-ವಿಶ್ವನಾಥ್


Tuesday, 30 January 2018

ಸ್ಪಿರಿಟೆಡ್ ಅವೇ (ಸೆನ್ ಟೊ ಚಿಹಿರೊ ನೊ ಕಾಮಿಕಾಕುಶಿ)





  ಜಾಪನೀಸ್ ಮಾಂಗ(Manga) ಚಿತ್ರಗಳು ಕಾಮಿಕ್ಸ್ ಓದುವವರಿಗೆ ಪರಿಚಿತ. ಕಾಮಿಕ್ಸ್ ಗಳ ಪ್ರಪಂಚದಲ್ಲಿ ಮಾಂಗ(Manga) ಗಳದ್ದೇ ಒಂದು ದೊಡ್ಡ ಸ್ಥಾನವಿದೆ. ಅದರಲ್ಲೂ ಜಪಾನಿ ಸಂಸ್ಕೃತಿಯನ್ನು ಬಿಂಬಿಸುವ ಕಾಮಿಕ್ಸ್ ಗಳು ಬಹಳ ಚಿತ್ತಾಕರ್ಷಕವಾಗಿರುತ್ತವೆ. ಆ ಬಣ್ಣಗಳು, ಪಾತ್ರಗಳ ಕಣ್ಣುಗಳು, ಕಣ್ಣುಗಳಲ್ಲೇ ಭಾವನೆಗಳನ್ನು ಹೆಚ್ಚಾಗಿ ತೋರ್ಪಡಿಸುವ ಕಲೆ ಈ ಕಾಮಿಕ್ಸ್ ವಿಧಕ್ಕೆ ಇಷ್ಟು ಪ್ರಖ್ಯಾತಿ ತಂದು ಕೊಟ್ಟಿದೆ. ಇದರ ಮುಂದುವರಿದ ಭಾಗವಾಗಿ ರೂಪುಗೊಂಡವೇ ಆನೀಮ್ ಚಿತ್ರಗಳು. ಆನೀಮ್ ಚಿತ್ರಗಳ ತಯಾರಿಕೆಯಲ್ಲಿ ಅತ್ಯಂತ ಪಳಗಿದ ಮತ್ತು ಆನೀಮ್ ಚಿತ್ರಗಳಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ನಿರ್ದೇಶಕ ಹಯಾಒ ಮಿಯಜಾಕಿ. ಈತನ ಚಿತ್ರಗಳ ಪ್ರತಿಯೊಂದು ಫ್ರೇಮ್ ಗಳು ಕೈಯಿಂದ ಚಿತ್ರಿತವಾದವು. ಚಿತ್ರ ನಿರ್ಮಾಣ ಮಾಡಲು ಕಂಪ್ಯೂಟರ್ ಬಳಕೆ ಮಾಡಿದರೂ ಅದು ಕೇವಲ ಚಿತ್ರ ಸಜ್ಜಿಕೆಯ ಕೊನೆಯ ಭಾಗದಲ್ಲಿ ಮಾತ್ರ. ಆತ ಚಿತ್ರ ನಿರ್ಮಾಣಕ್ಕೆ ಕೂತು ಚಿತ್ರ ಬಿಡಿಸುವ ಬಗೆಯ ಬಗ್ಗೆಯೇ ಹಲವಾರು ಡಾಕ್ಯುಮೆಂಟರಿಗಳು ಯುಟ್ಯೂಬ್ ನಲ್ಲಿ ಸಿಗುತ್ತವೆ. ನಿಮಗೆ ಸಮಯವಾದಾಗ ಖಂಡಿತ ಅವನ್ನು ನೋಡಲೇಬೇಕು. ಇಂತಹ ಚಿತ್ರಗಳ ಹಿಂದೆ ಇರುವ ಅಪಾರ ಶ್ರಮ ಇವು ಹಾಲಿವುಡ್ ಆನಿಮೇಶನ್ ಚಿತ್ರಗಳಿಗಿಂತ ಎಷ್ಟು ಭಿನ್ನ ಎಂದು ತೋರಿಸಿಕೊಡುತ್ತವೆ. ಮಿಯಜಾಕಿ ಚಿತ್ರಗಳಲ್ಲಿ ಪಾತ್ರಗಳು ಮಾನವ ಸಹಜ ಸಂಕೀರ್ಣ ಭಾವನೆಗಳನ್ನು ಅಷ್ಟೇ ನಾಜೂಕಾಗಿ ತೋರಿಸುವುದರಿಂದ ಆತನ ಚಿತ್ರಗಳು ಮಕ್ಕಳ ಚಿತ್ರವಾಗಿ ಕಂಡರೂ ಅದಕ್ಕೂ ಮೀರಿ ನಿಲ್ಲುತ್ತದೆ. ಹಾಲಿವುಡ್ ನಲ್ಲಿ ಡಿಸ್ನಿ ಚಿತ್ರ ಸಂಸ್ಥೆ ಹೇಗೆ ಆನಿಮೇಶನ್ ಚಿತ್ರಗಳಿಗೆ ಖ್ಯಾತಿಯನ್ನು ಪಡೆದಿದೆಯೋ ಹಾಗೆಯೇ ‘ಸ್ಟುಡಿಯೋ ಘಿಬ್ಲಿ’(Studio Ghibli) ಕೂಡ. ಇಂದು ನಾನು ಅಂತಹ ಅದ್ಭುತ ಆನೀಮ್ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಚಿತ್ರ ‘ಸ್ಪಿರಿಟೆಡ್ ಅವೇ’ ಬಗ್ಗೆ ಬರೆಯುತ್ತಿದ್ದೇನೆ.

  ಚಿಹಿರೊ ಎಂಬ ಹುಡುಗಿಗೆ ತನ್ನ ತಂದೆಗೆ ತಾವಿದ್ದ ಊರಿಂದ ಬೇರೆಡೆಗೆ ವರ್ಗವಾದಾಗ ತನ್ನ ಸ್ನೇಹಿತರನ್ನೆಲ್ಲಾ ಬಿಟ್ಟು ಹೋಗಬೇಕಲ್ಲ ಎಂದು ತುಂಬಾ ಬೇಸರ. ಆದರೆ ಆಕೆಯ ತಂದೆ ತಾಯಿ ಹೊಸ ಊರಿನಲ್ಲಿ ಹೊಸ ಗೆಳೆಯರನ್ನು ಮಾಡಿಕೊಳ್ಳಬಹುದು ಎಂದು ಸಮಾಧಾನಪಡಿಸುತ್ತ ವರ್ಗಾವಣೆಯಾದ ಊರಿನಲ್ಲಿ ತಮ್ಮ ಕಾರಿನಲ್ಲಿ ಹೊಸ ಮನೆಯನ್ನು ಹುಡುಕುತ್ತ ಹೋಗುತ್ತಿರುತ್ತಾರೆ. ಆದರೆ ದಾರಿ ತಪ್ಪಿ ಒಂದು ಹಳೆಯ ಮುಚ್ಚಿರುವ ಥೀಮ್ ಪಾರ್ಕ್ ಗೆ ಬರುತ್ತಾರೆ. ಕುತೂಹಲದಿಂದ ಚಿಹಿರೊಳ ತಂದೆತಾಯಿ ಇಬ್ಬರೂ ಒಳಗೆ ಹೋಗುತ್ತಾರೆ. ತನಗೆ ಒಳಗೆ ಹೋಗಲು ಇಷ್ಟವಿಲ್ಲದಿದ್ದರೂ ಒಬ್ಬಳೇ ಹಿಂದೆ ಉಳಿಯಲು ಭಯವಾಗಿ ಚಿಹಿರೊ ಅವರೊಡನೆ ಹೋಗುತ್ತಾಳೆ. ಪಾರ್ಕ್ ಮುಚ್ಚಿದೆ ಎಂದು ಭಾವಿಸಿ ಸುತ್ತಾಡುವ ಆಕೆಯ ತಂದೆತಾಯಿ ಕೊಂಚ ದೂರ ನಡೆದಾಗ ರುಚಿಯಾದ ಅಡಿಗೆ ವಾಸನೆ ಬರುತ್ತಿರುವುದನ್ನು ಗಮನಿಸಿ ಅದರ ಜಾಡು ಹಿಡಿದು ಅಡಿಗೆ ಇದ್ದ ಅಂಗಡಿಗೆ ಹೋಗುತ್ತಾರೆ. ಹೋಗಿ ನೋಡಿದಾಗ ಆಗಷ್ಟೇ ಮಾಡಿಟ್ಟ ವಿಧವಿಧವಾದ ಅಡಿಗೆಗಳು. ಆದರೆ ಅದನ್ನು ಗಮನಿಸಿಕೊಳ್ಳಲು ಯಾರೂ ಇಲ್ಲ. ಚಿಹಿರೊಗೆ ಅಲ್ಲಿ ಏನೋ ಸರಿ ಇಲ್ಲ ಅನ್ನಿಸಿ ವಾಪಸ್ ಹೋಗೋಣ ಎಂದು ಆಕೆಯ ತಂದೆತಾಯಿಯನ್ನು ಕರೆದಾಗ, ಆಕೆಯನ್ನು ಸಮಾಧಾನ ಪಡಿಸಿ, ಅಂಗಡಿಯವರು ಇಲ್ಲೇ ಎಲ್ಲೋ ಹೋಗಿರಬೇಕು, ಮೊದಲು ತಿನ್ನೋಣ ಆಮೇಲೆ ಅವರು ಬಂದ ಮೇಲೆ ದುಡ್ಡು ಕೊಡೋಣ ಎಂದು ಹೇಳಿ ಅಲ್ಲಿದ್ದ ಅಡಿಗೆಗಳಿಗೆ ಕೈ ಹಾಕಿ ತಿನ್ನಲು ತೊಡಗುತ್ತಾರೆ. ತನ್ನ ಕರೆಗೆ ಓಗೊಡದಿದ್ದಾಗ ಚಿಹಿರೊ ಅವರನ್ನು ಅಲ್ಲಿಯೇ ಬಿಟ್ಟು ಸುತ್ತಾಡಲು ಹೋಗುತ್ತಾಳೆ. ಹಾಗೆಯೇ ಸುತ್ತಾಡುತ್ತ ಒಂದು ಸ್ನಾನಗೃಹದ ಬಳಿಗೆ ಬರುತ್ತಾಳೆ. ಅದು ಇನ್ನೂ ಕೆಲಸ ಮಾಡುತ್ತಿರುವುದನ್ನು ನೋಡಿ ಅಚ್ಚರಿಗೊಳ್ಳುತ್ತಾಳೆ. ಆಕೆ ಇದನ್ನೆಲ್ಲಾ ನೋಡುತ್ತಾ ನಿಂತಿರುವಾಗ ಒಮ್ಮೆಲೇ ಒಂದು ಹುಡುಗ(ಹಾಕು) ಬಂದು ಆಕೆ ಅಲ್ಲಿ ಇರುವುದು ಸುರಕ್ಷಿತವಲ್ಲ ಮತ್ತು ಅಲ್ಲಿಂದ ಕತ್ತಲಾಗುವುದರೊಳಗೆ ನದಿ ದಾಟಿ ಹೊರಡುವಂತೆ ಹೇಳುತ್ತಾನೆ. ಹಾಗೆ ಹೇಳುತ್ತಿದ್ದ ಹಾಗೆ ನಿಧಾನವಾಗಿ ಸಂಜೆಯಾಗಿ ಸುತ್ತ ಮುತ್ತಲಿನ ಅಂಗಡಿಗಳ ದೀಪ ಹತ್ತಿಕೊಳ್ಳುತ್ತವೆ ಮತ್ತು ಭೂತದಂತ ಆಕೃತಿಗಳು ಓಡಾಡಲು ಪ್ರಾರಂಭಿಸುತ್ತವೆ. ಗಾಬರಿಗೊಂಡ ಚಿಹಿರೊ ತನ್ನ ತಂದೆತಾಯಿ ಹುಡುಕಿ ಅವರು ಕುಳಿತಿದ್ದ ಅಂಗಡಿಗೆ ಬರುತ್ತಾಳೆ. ಆದರೆ ಅವರಿದ್ದ ಜಾಗದಲ್ಲಿ ಎರಡು ದೊಡ್ಡ ಹಂದಿಗಳು ಕೂತಿದ್ದು ನೋಡಿ ಇನ್ನಷ್ಟು ಗಾಬರಿಗೊಂಡು ತನ್ನ ತಂದೆತಾಯಿಯನ್ನು ಕೂಗುತ್ತ ನದಿಯತ್ತ ಓಡುತ್ತಾಳೆ. ತಾವು ಒಳಬರುವಾಗ ಬತ್ತಿ ಬರಡಾಗಿದ್ದ ನದಿ ಈಗ ತುಂಬಿ ಹರಿಯುತ್ತಿದ್ದನ್ನು ನೋಡಿ ಆಕೆಗೆ ನದಿಯನ್ನು ದಾಟಲಾಗದೆ ಏನು ಮಾಡಬೇಕು ಎಂದು ತಿಳಿಯದೆ ಅಲ್ಲೇ ಅಳುತ್ತಾ ನಿಲ್ಲುತ್ತಾಳೆ. ಮತ್ತೆ ಆಕೆಯನ್ನು ಹುಡುಕಿ ಬರುವ ಹುಡುಗ ಆಕೆಗೆ ಸಮಾಧಾನ ಪಡಿಸಿ, ಆಕೆಯ ತಂದೆತಾಯಿ ಹಂದಿಯಾಗಿ ಮಾರ್ಪಾಡಾಗಿದ್ದು, ಆಕೆ ಸಿಕ್ಕಿಬಿದ್ದರೆ ಆಕೆಗೂ ಇದೆ ಗತಿಯಾಗುವುದು ಎಂದು ಹೇಳುತ್ತಾನೆ. ಇದನ್ನು ತಪ್ಪಿಸಿಕೊಂಡು ಆಕೆಯ ತಂದೆತಾಯಿ ಹುಡುಕಿ ಅಲ್ಲಿಂದ ಓಡಿಹೋಗಲು ಸಹಾಯ ಮಾಡುವುದಾಗಿಯೂ ಅಲ್ಲಿಯ ತನಕ ತಾನು ಹೇಳಿದಂತೆ ಕೇಳಲು ಹೇಳುತ್ತಾನೆ. ಚಿಹಿರೊ ಕೂಡ ಅವನು ಹೇಳಿದಂತೆ ಕೇಳುತ್ತಾಳೆ.

  ತನ್ನ ತಂದೆ ತಾಯಿಯನ್ನು ಕರೆದುಕೊಂಡು ಅಲ್ಲಿಂದ ತಪ್ಪಿಸಿಕೊಂಡು ಹೋಗುವವರೆಗೂ ಆ ಹುಡುಗ ಚಿಹಿರೊಗೆ ಸ್ನಾನಗೃಹದ ಬಾಯ್ಲರ್ ನೋಡಿಕೊಳ್ಳುವ ಕಮಾಜಿ ಬಳಿ ಕೆಲಸ ಮಾಡಿಕೊಂಡು ಇರಲು ಹೇಳುತ್ತಾನೆ. ಹಾಗೆ ಮಾಡದೆ ಸ್ನಾನಗೃಹದ ಒಡತಿ ಯುಬಾಬಾ ಕೈಯಲ್ಲಿ ಸಿಕ್ಕಿಬಿದ್ದರೆ, ಯುಬಾಬಾ ಆಕೆಯನ್ನು ಪ್ರಾಣಿಯನ್ನಾಗಿ ಮಾಡಿಬಿಡುತ್ತಾಳೆ ಎಂದು ಎಚ್ಚರಿಸುತ್ತಾನೆ. ಆತ ಹೇಳಿದಂತೆ ಕಮಾಜಿ ಹುಡುಕಿಕೊಂಡು ಹೋದಾಗ ಆತ ಆಕೆಗೆ ಕೊಡಲು ತನ್ನ ಬಳಿ ಏನೂ ಕೆಲಸವಿಲ್ಲ ಎಂದೂ, ಒಂದು ಕೆಲಸದ ಹುಡುಗಿಯ(ರಿನ್) ಜೊತೆ ಮಾಡಿ ಯುಬಾಬಾ ಬಳಿ ಕೆಲಸ ಕೇಳಿಕೊಳ್ಳಲು ಕಳಹುತ್ತಾನೆ. ಹೆದರಿಕೊಂಡೇ ಯುಬಾಬಾ ಕೋಣೆ ತಲುಪುವ ಚಿಹಿರೊ ಯುಬಾಬಾ ಬಳಿ ಕೆಲಸ ಕೇಳುತ್ತಾಳೆ. ಮೊದಲಿಗೆ ಇವಳನ್ನು ನೋಡಿ ಕೆಲಸ ಕೊಡಲಾಗದು ಎಂದು ನಿರಾಕರಿಸಿದರೂ ಚಿಹಿರೊಳ ಹಠ ನೋಡಿ ಮತ್ತು ಯುಬಾಬಾ ಕೆಲಸ ಕೇಳಿ ಬಂದವರಿಗೆ ತಾನು ಕೆಲಸ ಕೊಡುವುದಾಗಿ ತೆಗೆದುಕೊಂಡ ಪ್ರಮಾಣದ ಕಾರಣದಿಂದ ಕೆಲಸ ಕೊಡುತ್ತಾಳೆ. ಆದರೆ ಕೆಲಸದಲ್ಲಿ ಚಿಹಿರೊ ಮೇಲೆ ಯಾವುದೇ ದೂರು ಕೇಳಿಬಂದರೂ ಅವಳನ್ನು ಅವಳ ತಂದೆತಾಯಿಯಂತೆ ಹಂದಿಯಾಗಿ ಮಾಡುವುದಾಗಿ ಯುಬಾಬಾ ಕರಾರು ಮಾಡಿ ಅದಕ್ಕೆ ಚಿಹಿರೊಳಿಂದ ಸಹಿ ಪಡೆಯುತ್ತಾಳೆ. ಸಹಿಯಲ್ಲಿನ ಅಕ್ಷರಗಳನ್ನು ತನ್ನ ಮಂತ್ರಶಕ್ತಿಯಿಂದ ಬಂಧಿಸಿ ಚಿಹಿರೊಗೆ ಸೆನ್ ಎಂಬ ಹೊಸ ಹೆಸರು ಕೊಡುತ್ತಾಳೆ. ಯುಬಾಬಾ ಈಕೆಯ ಜವಾಬ್ದಾರಿಯನ್ನು ಚಿಹಿರೊಳನ್ನು ರಕ್ಷಿಸಿದ ಹುಡುಗ (ಹಾಕು) ನಿಗೆ ವಹಿಸುತ್ತಾಳೆ. ಚಿಹಿರೊಗೆ ಆಶ್ಚರ್ಯವಾದರೂ ಏನು ಹೇಳುವುದೋ ತಿಳಿಯದೆ ಸುಮ್ಮನೆ ಅವನ ಹಿಂಬಾಲಿಸುತ್ತಾಳೆ. ಹಾಕು ಚಿಹಿರೊಳನ್ನು ರಿನ್ ಜೊತೆ ಕೆಲಸಕ್ಕೆ ಕಳಹುತ್ತಾನೆ. ರಿನ್ ಚಿಹಿರೊಗೆ ಎಲ್ಲ ಕೆಲಸವನ್ನು ಪರಿಚಯ ಮಾಡಿಸಿ ಉಡಲು ಬಟ್ಟೆ ಕೊಟ್ಟು ಮಲಗುವ ಜಾಗ ತೋರಿಸುತ್ತಾಳೆ. ಇದೆಲ್ಲ ಆದ ನಂತರ ಚಿಹಿರೊ ತನ್ನ ತಂದೆತಾಯಿ ನೆನೆದು ಕಣ್ಣೀರಿಡುತ್ತ ಮಲಗುತ್ತಾಳೆ. ಸ್ನಾನಗೃಹದ ಮತ್ತೊಂದು ಭಾಗದಲ್ಲಿ ಯುಬಾಬಾ ಒಂದು ದೊಡ್ಡ ಹಕ್ಕಿಯಾಗಿ ಮಾರ್ಪಾಡುಗೊಂಡು ಎಲ್ಲಿಗೋ ಬೆಳಗ್ಗೆಯೇ ಹಾರಿ ಹೋಗಿ ಕತ್ತಲಾದ ಮೇಲೆ ಮರಳುತ್ತಾಳೆ. ಈ ನಡುವೆ ಹಾಕು ಚಿಹಿರೊಳನ್ನು ಗುಟ್ಟಾಗಿ ಆಕೆಯ ತಂದೆತಾಯಿಯನ್ನು ಇಟ್ಟಿದ್ದ ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಚಿಹಿರೊ ಎಷ್ಟು ಕೂಗಿಕರೆದರೂ ಅಲ್ಲಿದ್ದ ಹಂದಿಗಳಲ್ಲಿ ಆಕೆಯ ತಂದೆತಾಯಿ ಆಕೆಯ ಕೂಗಿಗೆ ಸ್ಪಂದಿಸುವುದಿಲ್ಲ. ಇದರಿಂದ ಬೇಸರಗೊಳ್ಳುವ ಚಿಹಿರೊ ಅಳುತ್ತ ಕೂರುತ್ತಾಳೆ. ಆಕೆಯನ್ನು ಸಮಾಧಾನಪಡಿಸುವ ಹಾಕು, ಆಕೆ ಅಲ್ಲಿಗೆ ಬಂದಾಗಿನ ಬಟ್ಟೆಗಳನ್ನು ಕೊಟ್ಟು ಅವನ್ನು ಗುಟ್ಟಾಗಿಡಲು ಹೇಳುತ್ತಾನೆ. ಆಗ ಅದರಲ್ಲಿನ ಒಂದು ಪತ್ರವನ್ನು ನೋಡಿ ಚಿಹಿರೊ ತನ್ನ ಹೆಸರು ಸೆನ್ ಅಲ್ಲ ಚಿಹಿರೊ ಎಂದು ಜ್ಞಾಪಿಸಿಕೊಳ್ಳುತ್ತಾಳೆ. ಅದಕ್ಕೆ ಹಾಕು, ಯುಬಾಬಾ ಮಂತ್ರ ಕೆಲಸ ಮಾಡುವುದೇ ಆಕೆಗೆ ಸೆರೆಸಿಕ್ಕವರ ಹೆಸರನ್ನು ಬಂಧಿಸಿ ಅವರು ಅಲ್ಲಿಗೆ ಹೇಗೆ ಬಂದರು ಎಂಬುದನ್ನೇ ಮರೆಸಿಬಿಡುವುದು. ತಾನೂ ಅಲ್ಲಿಗೆ ಹೇಗೆ ಬಂದೆ ಎಂಬುದನ್ನೇ ಮರೆತಿದ್ದು ತನ್ನ ಹೆಸರು ಎಷ್ಟು ಜ್ಞಾಪಿಸಿಕೊಂಡರೂ ನೆನಪಿಗೆ ಬಾರದು ಎಂದು ಬೇಸರಪಟ್ಟುಕೊಳ್ಳುತ್ತಾನೆ. ನಂತರ ಆಕೆಯನ್ನು ಆಕೆಯ ಕೋಣೆಗೆ ಮರಳಲು ಹೇಳಿ ತಾನು ಒಂದು ಡ್ರ್ಯಾಗನ್ ಆಗಿ ಪರಿವರ್ತನೆಗೊಂಡು ಹೊರಟುಹೋಗುತ್ತಾನೆ.

  ರಾತ್ರಿಯ ಹೊತ್ತಿಗೆ ಮರಳುವ ಯುಬಾಬಾ ಸ್ನಾನಗೃಹದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ರಿನ್ ಮತ್ತು ಚಿಹಿರೊ ಇಬ್ಬರಿಗೂ ಅಂದು ದೊಡ್ಡ ಸ್ನಾನದ ಕೋಣೆಯನ್ನು ಸ್ವಚ್ಛಗೊಳಿಸುವ ಕೆಲಸ ಕೊಡಲಾಗುತ್ತದೆ. ಈ ಮಧ್ಯೆ ಹೊರಗೆ ಸುರಿಯುತ್ತಿದ್ದ ಮಳೆಯಲ್ಲಿ ನೆನೆಯಬೇಡ ಎಂದು ಹೊರಗೆ ನಿಂತಿದ್ದ ಒಂದು ಭೂತಕ್ಕೆ ಚಿಹಿರೊ ಹೇಳಿ ಆ ಭೂತ ಒಳ ಬರಲು ಬಾಗಿಲನ್ನು ತೆರೆದಿತ್ತು ಹೋಗುತ್ತಾಳೆ. ಅಂದೇ ಒಂದು ಭೂತ ಬಹಳ ಕೆಟ್ಟ ವಾಸನೆ ಬೀರುತ್ತ ಸ್ನಾನದಕೋಣೆಗೆ ಬರುತ್ತದೆ. ಅದನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಇವರಿಬ್ಬರಿಗೆ ವಹಿಸುತ್ತಾರೆ. ಸ್ನಾನಕ್ಕೆ ಬೇಕಾಗುವ ಟೋಕನ್ ತರಲು ರಿನ್ ಚಿಹಿರೊಗೆ ಕಳಹುತ್ತಾಳೆ. ಆದರೆ ಚಿಹಿರೊಳ ಆನನುಭವ ನೋಡಿ ಅಲ್ಲಿನ ಮುಖ್ಯಸ್ಥ ಆಕೆಗೆ ಟೋಕನ್ ಕೊಡಲು ನಿರಾಕರಿಸುತ್ತಾನೆ. ಆದರೆ ಅಲ್ಲೇ ನಿಂತಿದ್ದ ಮಳೆಯಲ್ಲಿ ನೆನೆದಿದ್ದ ಭೂತ ಚಿಹಿರೊಗೆ ಸಹಾಯ ಮಾಡಿ ಆಕೆಗೆ ಟೋಕನ್ ಒಂದನ್ನು ಕೊಡುತ್ತದೆ. ಮತ್ತೆ ಆಕೆಯನ್ನು ಹಿಂಬಾಲಿಸುತ್ತಾ ಇನ್ನಷ್ಟು ಟೋಕನ್ ತಂದುಕೊಡುತ್ತದೆ. ತನಗೆ ಒಂದು ಟೋಕನ್ ಸಾಕು ಎಂದು ಚಿಹಿರೊ ಹೇಳಿದ ನಂತರ ಆ ಭೂತ ಮರೆಯಾಗುತ್ತದೆ. ಇಷ್ಟರಲ್ಲಿ ಚಿಹಿರೊ ಇದ್ದ ಕೋಣೆ ತಲಪುವ ಆ ಕೆಟ್ಟ ವಾಸನೆಯ ಭೂತ ಸ್ನಾನಕ್ಕೆ ಕೂರುತ್ತದೆ. ಅದನ್ನು ಸ್ವಚ್ಛ ಮಾಡುತ್ತಿದ್ದ ವೇಳೆ ಚಿಹಿರೋಗೆ ಆ ಭೂತದ ಮೈಯಲ್ಲಿ ಏನೋ ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆಗೆಯಲು ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಇದಕ್ಕೆ ಸ್ಪಂದಿಸುವ ಅಲ್ಲೇ ಇದ್ದ ಯುಬಾಬಾ ಸ್ನಾನದ ಮನೆಯ ಎಲ್ಲರಿಗೂ ಚಿಹಿರೊಗೆ ಸಹಾಯ ಮಾಡಲು ಆಜ್ಞೆ ನೀಡುತ್ತಾಳೆ. ಇದರಿಂದ ಆ ಭೂತ ಈ ಮುಂಚೆ ನುಂಗಿದ ಎಷ್ಟೋ ಕಸವನ್ನು ಚಿಹಿರೊ ಎಲ್ಲರ ಸಹಾಯದೊಂದಿಗೆ ಹೊರಗೆಳೆಯುತ್ತಾಳೆ. ಕೊನೆಗೆ ಯಶಸ್ವಿಯಾಗಿ ಆ ಭೂತವನ್ನು ಸ್ವಚ್ಛಗೊಳಿಸುವ ಚಿಹಿರೊಗೆ ಆ ಭೂತ ಒಂದು ಔಷಧಿಯ ಉಂಡೆಯನ್ನು ಉಡುಗೊರೆಯಾಗಿ ಕೊಟ್ಟು ಸ್ನಾನದ ಮನೆಯ ಸೇವೆಗೆ ಅಲ್ಲಿ ಕೊಂಚ ಬಂಗಾರವನ್ನು ಬಿಟ್ಟು ಒಂದು ಡ್ರ್ಯಾಗನ್ ಆಗಿ ಮಾರ್ಪಾಡಾಗಿ ಅಲ್ಲಿಂದ ಹೊರಟು ಹೋಗುತ್ತದೆ. ಚಿಹಿರೊ ಕೆಲಸವನ್ನು ಯುಬಾಬಾ ತುಂಬಾ ಮೆಚ್ಚಿ ಆಕೆಯನ್ನು ಕೊಂಡಾಡುತ್ತಾಳೆ.

 ಇನ್ನೊಂದು ದಿನ ಬೆಳಗ್ಗೆ ಚಿಹಿರೊಗೆ ಟೋಕನ್ ಕೊಟ್ಟು ಸಹಾಯ ಮಾಡಿದ ಭೂತ ತುಂಬಾ ಶ್ರೀಮಂತ ಭೂತವೆಂಬಂತೆ ಸ್ನಾನದ ಮನೆಗೆ ಬಂದು ತನಗೆ ತಿನ್ನಲು ಕೊಡುವ ಎಲ್ಲರಿಗೂ ಬಂಗಾರ ಕೊಡುವುದಾಗಿ ಹೇಳಿ ಎಲ್ಲರನ್ನೂ ಎಬ್ಬಿಸುತ್ತದೆ. ಎಲ್ಲರೂ ಬಂಗಾರ ಕೊಡುವ ಭೂತ ಬಂದಿದೆ ಎಂದು ಎದ್ದು ತಮಗೆ ಸಿಕ್ಕಿದ ತಿಂಡಿಯನ್ನೆಲ್ಲ ತಂದು ಆ ಭೂತಕ್ಕೆ ಕೊಟ್ಟು ಸ್ನಾನದ ಕೋಣೆಗೆ ಕರೆದೊಯ್ಯುತ್ತಾರೆ. ಈ ನಡುವೆ ಚಿಹಿರೊ ಈ ಭೂತದ ಗದ್ದಲದಲ್ಲಿ ಎಲ್ಲರಂತೆ ತೊಡಗದೆ ತನ್ನ ಕೋಣೆಯಲ್ಲಿ ಕಾಲ ಕಳೆಯುತ್ತಾ ಇದ್ದಾಗ, ಹಾಕು ಡ್ರ್ಯಾಗನ್ ಆಗಿ ಮೈಯೆಲ್ಲಾ ಗಾಯಮಾಡಿಕೊಂಡು ಆಕಾಶದಲ್ಲಿ ಹಾರಾಡುತಿದ್ದನ್ನು ಚಿಹಿರೊ ನೋಡುತ್ತಾಳೆ. ಅವನ ಹಿಂದೆ ಕೆಲವು ಪಕ್ಷಿಯಂತವು ಹಿಂಬಾಲಿಸುತ್ತಾ ಇರುತ್ತವೆ. ಹಾಕುನನ್ನು ಕೂಗಿ ತನ್ನ ಕೋಣೆಗೆ ಕರೆಯುತ್ತಾಳೆ. ಅವನು ಒಳ ಬರುತ್ತಿದ್ದಂತೆ ಬಾಗಿಲು ಮುಚ್ಚಿ ಆ ಪಕ್ಷಿಗಳನ್ನು ಹೊರಕ್ಕೆ ಉಳಿಯುವಂತೆ ಮಾಡುತ್ತಾಳೆ. ಆದರೆ ಹಾಗೂ ಒಳನುಗ್ಗುವ ಪಕ್ಷಿಗಳನ್ನು ನೋಡಿದಾಗ ಅವು ಕಾಗದದ ಪಕ್ಷಿಗಳು. ಇವು ಹೇಗೆ ಹಾಕುವಿಗೆ ಗಾಯ ಮಾಡಿದವು ಎಂದು ಯೋಚಿಸುತ್ತಿದ್ದಂತೆಯೇ, ಹಾಕು ಮತ್ತೆ ಹೊರಹೋಗಿ ಯುಬಾಬಾಳ ಕೋಣೆ ಸೇರುತ್ತಾನೆ. ಅದನ್ನು ಗಮನಿಸಿದ ಚಿಹಿರೊ ತಾನೂ ಗುಟ್ಟಾಗಿ ಯುಬಾಬಾ ಕೋಣೆಗೆ ಹೋಗುತ್ತಾಳೆ. ಹಾಗೆ ಹೋಗುವಾಗ, ಬಂಗಾರದ ಭೂತ ಸಿಕ್ಕಿ ಚಿಹಿರೊಗೆ ಬಂಗಾರದ ಆಸೆ ತೋರಿಸುತ್ತದೆ. ಆದರೆ ಚಿಹಿರೊ ಅದಕ್ಕೆ ಮಣಿಯದೆ ಯುಬಾಬಾ ಕೋಣೆಯ ಕಡೆ ಧಾವಿಸುತ್ತಾಳೆ. ಈ ನಡುವೆ ಕಾಗದದ ಪಕ್ಷಿಯೊಂದು ಆಕೆಗೆ ಗೊತ್ತಾಗದಂತೆ ಆಕೆಯ ಬೆನ್ನ ಮೇಲೆ ಕೂರುತ್ತದೆ. ಚಿಹಿರೊ ಅತ್ತ ಹೋಗುತ್ತಿದ್ದಂತೆ, ಆ ಭೂತ ಎಲ್ಲರನ್ನೂ ತಿನ್ನಲು ತೊಡಗುತ್ತದೆ.

  ಚಿಹಿರೊ ಯುಬಾಬಾಳಿಗೆ ಕಾಣದಂತೆ ಅಡಗಲು ಆಕೆಯ ಮಗನ ಕೋಣೆಗೆ ನುಗ್ಗಿ ಅಡಗಿಕೊಳ್ಳುತ್ತಾಳೆ. ಯುಬಾಬಾ ಗಾಯಗೊಂಡು ಬಂದ ಹಾಕುನನ್ನು ರಕ್ಷಿಸಲು ಇಷ್ಟಪಡದೆ ಆತನನ್ನು ಸಾಯಲು ಬಿಟ್ಟು ಹೋಗುತ್ತಾಳೆ. ಆಕೆ ಹೋದನಂತರ ಚಿಹಿರೊ ಕೋಣೆಯಿಂದ ಹೊರಬರಲು ಪ್ರಯತ್ನಿಸಿದಾಗ, ಯುಬಾಬಾಳ ಮಗ ಆಕೆಯನ್ನು ತನ್ನೊಡನೆ ಆಡಿಕೊಂಡಿರಲು ಹೇಳುತ್ತಾನೆ. ಯಾಕೆ ಆತ ಹೊರಗೆ ಹೋಗಿ ಆಡಬಾರದು ಎಂದು ಚಿಹಿರೊ ಕೇಳಿದಾಗ, ಹೊರಗೆ ಹೋದರೆ ಮೈ ಕೊಳಕಾಗಿ ಕ್ರಿಮಿಗಳಿಂದ ರೋಗ ಬರುತ್ತದೆ, ಹಾಗಾಗಿ ಕೋಣೆಯಲ್ಲೇ ಆಡುತ್ತೇನೆ ಎಂದು ಆತ ಹೇಳುತ್ತಾನೆ ಮತ್ತು ಅವನ ಮಾತಿಗೆ ಒಪ್ಪದಿದ್ದರೆ ಯುಬಾಬಾಳನ್ನು ಕೂಗಿ ಕರೆಯುವುದಾಗಿಯೂ, ಚಿಹಿರೊಳನ್ನು ಅಲ್ಲಿ ಕಂಡರೆ ಯುಬಾಬಾ ಆಕೆಯನ್ನು ಖಂಡಿತ ಕೊಲ್ಲುವುದಾಗಿಯೂ ಹೆದರಿಸುತ್ತಾನೆ. ಚಿಹಿರೊ ಕಡೆಗೆ ಏನೂ ದಾರಿ ಕಾಣದೆ, ತನ್ನ ಕೊಳಕಾದ ಕೈ ತೋರಿಸಿ ಆತನನ್ನು ಹೆದರಿಸಿ ಅಲ್ಲಿಂದ ಹೊರ ಬರುತ್ತಾಳೆ. ಹಾಕುನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ವೇಳೆ, ಯುಬಾಬಾಳ ಮಗ ಹೊರಬಂದು ಅಳಲು ಶುರುಮಾಡುತ್ತಾನೆ. ಇದನ್ನು ಕೇಳಲಾಗದೆ, ಕಾಗದದ ಪಕ್ಷಿ ಯುಬಾಬಾಳ ರೂಪ ಪಡೆಯುತ್ತದೆ. ಅದನ್ನು ನೋಡಿ ಆಶ್ಚರ್ಯಗೊಳ್ಳುವ ಚಿಹಿರೊಗೆ ತಾನು ಯುಬಾಬಾ ಅಲ್ಲ ಆಕೆಯ ಅವಳಿ ಸಹೋದರಿ ಜೆನಿಬಾ ಎಂದು ಪರಿಚಯ ಮಾಡಿಕೊಳ್ಳುತ್ತಾಳೆ. ಯುಬಾಬಾ ಹಾಕು ಬಳಸಿ ತನ್ನ ಬಳಿ ಇದ್ದ ಚಿನ್ನದ ಮಾಂತ್ರಿಕ ಮುದ್ರೆಯನ್ನು ಕದ್ದಿದ್ದಾಳೆ, ಅದನ್ನು ಹಿಂಪಡೆಯಲು ತಾನು ಬಂದಿರುವುದಾಗಿ ಹೇಳುತ್ತಾಳೆ. ಅಳುತ್ತ ನಿಂತ ಯುಬಾಬಾಳ ಮಗನನ್ನು ಜೆನಿಬಾ ಇಲಿಯಾಗಿ ಪರಿವರ್ತಿಸಿ, ಅಲ್ಲಿದ್ದ ಯುಬಾಬಾಳ ಕಾಗೆಯನ್ನು ಚಿಕ್ಕ ಪಕ್ಷಿಯನ್ನಾಗಿ ಪರಿವರ್ತಿಸಿ, ಯುಬಾಬಾಳ ಮೂರೂ ತಲೆಗಳ ಗೊಂಬೆಗಳನ್ನು ಕೂಡಿಸಿ ಯುಬಾಬಾ ಮಗನನ್ನಾಗಿ ಮಾಡುತ್ತಾಳೆ. ಇದನ್ನು ಯಾರಿಗೂ ತಿಳಿಸದಂತೆ ಚಿಹಿರೊಗೆ ಎಚ್ಚರಿಸುತ್ತಾಳೆ. ಹಾಕುನನ್ನು ಕೊಂದು ತನ್ನ ಮುದ್ರೆ ಪಡೆಯಲು ಮುಂದಾಗುವ ಜೆನಿಬಾಳನ್ನು ತಡೆಯುವ ಚಿಹಿರೊ ಹಾಕು ಒಳ್ಳೆಯ ಹುಡುಗನಾಗಿದ್ದು ಆತನನ್ನು ಬಿಟ್ಟುಬಿಡುವಂತೆ ಕೋರಿಕೊಳ್ಳುತ್ತಾಳೆ. ಅದಕ್ಕೆ ಜೆನಿಬಾ ಒಪ್ಪದಿದ್ದಾಗ, ಹಾಕು ಜೊತೆಗೆ ಚಿಹಿರೊ ತಪ್ಪಿಸಿಕೊಂಡು ಕಮಾಜಿ ಇದ್ದ ಕೋಣೆಗೆ ಬಂದು ಬೀಳುತ್ತಾರೆ. ಅಲ್ಲಿ ಹಾಕುವಿಗೆ ಹಿಂದೆ ಭೂತ ಕೊಟ್ಟಿದ್ದ ಔಷಧಿಯನ್ನು ತಿನ್ನಿಸಿ ಅವನನ್ನು ಬದುಕಿಸಿಕೊಳ್ಳುತ್ತಾಳೆ. ಔಷಧಿ ತಿಂದ ಬಳಿಕ ತಾನು ಕದ್ದು ತಂದಿದ್ದ ಚಿನ್ನದ ಮುದ್ರೆ ಉಗುಳುವ ಹಾಕು ಡ್ರ್ಯಾಗನ್ ರೂಪದಿಂದ ಮನುಷ್ಯ ರೂಪಕ್ಕೆ ಮರಳಿ ಅಲ್ಲೇ ಸುಸ್ತಾಗಿ ನಿದ್ರಿಸುತ್ತಾನೆ. ಕಮಾಜಿಯೊಡನೆ ಮಾತನಾಡಿ ಇದನ್ನು ಸರಿಪಡಿಸಲು ಆ ಮುದ್ರೆಯನ್ನು ಜೆನಿಬಾಳಿಗೆ ಮರಳಿಸುವುದೇ ದಾರಿ ಎಂದು ಆತನ ಬಳಿ ಆಕೆಯ ಮನೆ ತಲುಪಲು ದಾರಿ ಕೇಳಿ ಅಲ್ಲಿಗೆ ಹೋಗುವ ರೈಲಿಗೆ ಟಿಕೆಟ್ ಪಡೆದು ಹೊರಡಲು ಸಿದ್ಧವಾಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸುವ ರಿನ್, ಬಂಗಾರ ಕೊಡುವ ಭೂತ ಎಲ್ಲರನ್ನೂ ತಿನ್ನಲು ತೊಡಗಿದ್ದು, ಅದು ಚಿಹಿರೊಳನ್ನು ಕೇಳುತ್ತಿದೆ ಮತ್ತು ಯುಬಾಬಾ ಅದರಿಂದ ಬಹಳ ಸಿಟ್ಟಾಗಿದ್ದಾಳೆ ಎಂದು ಹೇಳುತ್ತಾಳೆ. ಅದಕ್ಕೆ ಚಿಹಿರೊ ತಾನೇ ಆ ಭೂತವನ್ನು ಎದುರಿಸಿ ಅದನ್ನು ಸ್ನಾನಗೃಹದಿಂದ ಹೊರಗೆ ಕಳಿಸುವೆ ಎಂದು ಹೋಗುತ್ತಾಳೆ. ಆ ಭೂತವಿದ್ದ ಜಾಗಕ್ಕೆ ಹೋಗಿ ನೋಡಿದಾಗ, ಅದು ಸೆನ್(ಚಿಹಿರೊ) ಬೇಕು ಎಂದು ಹಠ ಹಿಡಿದು ಕೂತಿರುತ್ತದೆ. ಆ ಭೂತ ಚಿಹಿರೊಗೆ ಬಂಗಾರದ ಆಸೆಯೂ ತೋರಿಸುತ್ತದೆ. ಆದರೆ ಇದಕ್ಕೆ ಮಣಿಯದ ಚಿಹಿರೊ ಉಪಾಯದಿಂದ ತನ್ನ ಬಳಿ ಉಳಿದಿದ್ದ ಔಷಧಿಯನ್ನು ಅದರ ಬಾಯಿಗೆ ತುರುಕುತ್ತಾಳೆ. ಔಷಧಿಯ ಪ್ರಭಾವದಿಂದ ಆ ಭೂತ ಒದ್ದಾಡಿ, ಅಲ್ಲಿಯ ತನಕ ತಿಂದದ್ದನ್ನೆಲ್ಲ ಕಕ್ಕುತ್ತ, ಸಿಟ್ಟಿಗೆದ್ದು ಚಿಹಿರೊಳನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ಭೂತವನ್ನು ಹಾಗೆಯೇ ಸ್ನಾನಗೃಹದಿಂದ ಹೊರಕ್ಕೆ ಕರೆತರುವ ಚಿಹಿರೊ ಬೇಗನೆ ಓಡಿ ಹೋಗಿ ತನಗಾಗಿ ನದಿಯ ಬಳಿ ದೋಣಿಯೊಂದಿಗೆ ಕಾಯುತ್ತಿದ್ದ ರಿನ್ ಸೇರುತ್ತಾಳೆ. ಆ ಭೂತವೂ ಮತ್ತೆ ಆಕೆಯನ್ನು ಹಿಂಬಾಲಿಸುತ್ತಾ ನಿಧಾನವಾಗಿ ಬರುತ್ತದೆ. ರಿನ್ ಆ ಭೂತಕ್ಕೆ, ಚಿಹಿರೊಗೆ ಏನಾದರೂ ಅಪಾಯ ಮಾಡಿದರೆ ಅದರ ಗ್ರಹಾಚಾರ ನೆಟ್ಟಗಿರುವುದಿಲ್ಲ ಎಂದು ಕೂಗಿ ಎಚ್ಚರಿಸಿ ಚಿಹಿರೊಳನ್ನು ರೈಲು ನಿಲ್ದಾಣಕ್ಕೆ ತಂದು ನಿಲ್ಲಿಸುತ್ತಾಳೆ. ಒಂಟಿತನದಿಂದ ಬೇಸತ್ತಿದ್ದ ಆ ಭೂತ ರೈಲು ಬಂದೊಡನೆ ಚಿಹಿರೊ ಜೊತೆ ಬರುವುದಾಗಿ ಹೇಳಿ ಆಕೆಯೊಡನೆ ರೈಲು ಹತ್ತುತ್ತದೆ.

  ಇತ್ತ ಸ್ನಾನದಗೃಹದಲ್ಲಿ ಯುಬಾಬಾ ಆ ಭೂತದಿಂದ ಆದ ನಷ್ಟ ಮತ್ತು ಅದು ಕೊಟ್ಟ ಬಂಗಾರ ಎಲ್ಲ ತಾಳೆ ಹಾಕಿ, ಲಾಭ ನಷ್ಟ ಲೆಕ್ಕ ಹಾಕುತ್ತ ಕೂತಿರುತ್ತಾಳೆ. ಕಮಾಜಿಯಿಂದ ಚಿಹಿರೊ ತನ್ನನ್ನು ಉಳಿಸಿದ ಬಗೆ ಮತ್ತು ತನಗಾಗಿ ಮಾಡಲು ಹೋಗಿರುವ ಕೆಲಸದ ಬಗ್ಗೆ ತಿಳಿದು ಹಾಕು ಯುಬಾಬಾ ಬಳಿ ಹೋಗಿ ತಾನು ಆಕೆಯ ಮಗನನ್ನು ಜೆನಿಬಾ ಬಳಿ ಬಿಟ್ಟಿರುವುದಾಗಿಯೂ, ಆತ ಮರಳಿ ಬೇಕಾದಲ್ಲಿ ಚಿಹಿರೊ ಮತ್ತು ಆಕೆಯ ತಂದೆತಾಯಿಯನ್ನು ಬಿಟ್ಟು ಕಳಿಸಲು ಒಪ್ಪುವಂತೆ ಷರತ್ತು ಹಾಕುತ್ತಾನೆ. ಅದಕ್ಕೆ ಒಪ್ಪುವ ಯುಬಾಬಾ, ಚಿಹಿರೊಗೆ ಒಂದು ಕೊನೆಯ ಪರೀಕ್ಷೆ ನಡೆಸುವುದಾಗಿಯೂ, ಅದರಲ್ಲಿ ಆಕೆ ಗೆದ್ದರೆ ಮಾತ್ರ, ಆಕೆ ತನ್ನ ತಂದೆತಾಯಿಯೊಡನೆ ಮನುಷ್ಯ ಲೋಕಕ್ಕೆ ಮರಳಬಹುದು ಎಂದು ಹೇಳುತ್ತಾಳೆ.

  ಪ್ರಯಾಸದಿಂದ ಜೆನಿಬಾ ಮನೆ ತಲುಪುವ ಚಿಹಿರೊ, ಜೆನಿಬಾಳಿಗೆ ಆಕೆಯ ಚಿನ್ನದ ಮುದ್ರೆ ಹಿಂದಿರುಗಿಸಿ ಹಾಕುನಿಗೆ ಅಪಾಯ ಮಾಡದಂತೆ ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪುವ ಜೆನಿಬಾ, ಚಿಹಿರೊ ಮತ್ತು ಆಕೆಯ ಗೆಳೆಯರಿಗೆ ತಿನ್ನಲು ತಿಂಡಿ ಕೊಟ್ಟು ಉಪಚರಿಸುತ್ತಾಳೆ. ಹೇಗೆ ಯುಬಾಬಾ ಮತ್ತು ತಾನು ಅವಳಿ ಸಹೋದರಿಯರಾಗಿದ್ದರೂ ಸ್ವಭಾವದಲ್ಲಿ ಭಿನ್ನ ಎಂದು ಜೆನಿಬಾ ಚಿಹಿರೊಳಿಗೆ ಹೇಳುತ್ತಾಳೆ. ಯುಬಾಬಾಳಿಂದ ತಪ್ಪಿಸಿಕೊಳ್ಳಲು ಏನಾದರೂ ಮಾರ್ಗವಿದೆಯೇ ಎಂದು ಚಿಹಿರೊ ಕೇಳಿದಾಗ, ಆ ವಿಷಯದಲ್ಲಿ ತಾನು ಏನೂ ಸಹಾಯ ಮಾಡಲಾಗದು ಎಂದು ಜೆನಿಬಾ ಹೇಳುತ್ತಾಳೆ. ಆದರೆ ಅಷ್ಟರಲ್ಲಿ ಚಿಹಿರೊ ಜೊತೆ ಬಂದಿದ್ದ ಭೂತ, ಇಲಿ ಮತ್ತು ಚಿಕ್ಕ ಪಕ್ಷಿ ಆಕೆಗೆಂದು ಮಾಡಿದ ಕೂದಲು ಕಟ್ಟುವ ದಾರವನ್ನು ಕೊಟ್ಟು ಅದು ಆಕೆಯನ್ನು ಕಾಪಾಡುತ್ತದೆ ಎಂದು ಜೆನಿಬಾ ಹೇಳುತ್ತಾಳೆ. ಹಾಕು ಸ್ಥಿತಿ ಏನಾಗಿರಬಹುದೋ ಎಂದು ಚಿಂತಿಸುತ್ತಾ ಚಿಹಿರೊ ಸಂಕಟ ಪಡುತ್ತಿರಬೇಕಾದರೆ, ಹಾಕು ಡ್ರ್ಯಾಗನ್ ರೂಪದಲ್ಲಿ ಜೆನಿಬಾ ಮನೆ ಬಾಗಿಲಿಗೇ ಬರುತ್ತಾನೆ. ಜೆನಿಬಾ ಹಾಕುವನ್ನು ಕ್ಷಮಿಸಿರುವುದಾಗಿ ಹೇಳಿದ ನಂತರ ಚಿಹಿರೊ ಮತ್ತು ಆಕೆಯ ಗೆಳೆಯರನ್ನು ಹಾಕು ಅಲ್ಲಿಂದ ಕರೆದೊಯ್ಯುತ್ತಾನೆ. ಜೆನಿಬಾ ಭೂತವನ್ನು ತನ್ನೊಡನೆ ಇರಲು ಹೇಳಿ ಅದನ್ನು ಅಲ್ಲಿಯೇ ಉಳಿಸಿಕೊಳ್ಳುತ್ತಾಳೆ. ಆಕಾಶದಲ್ಲಿ ಹಾರಾಡುತ್ತಾ ಹೋಗುತ್ತಿರಬೇಕಾದರೆ, ಚಿಹಿರೊ ತಾನು ಚಿಕ್ಕವಳಿದ್ದಾಗ ಒಮ್ಮೆ ನದಿಯಲ್ಲಿ ಬಿದ್ದಿದ್ದಾಗಿಯೂ, ಇನ್ನು ತಾನು ಮುಳುಗಿದೆ ಎಂದುಕೊಂಡ ವೇಳೆ ನದಿ ಆಕೆಯನ್ನು ದಡ ಸೇರಿಸಿತು ಎಂದು ಹೇಳುತ್ತಾಳೆ. ತನ್ನನ್ನು ಕಾಪಾಡಿದ ನದಿಯನ್ನು ಕೊಹಾಕು ನದಿಯೆಂದು ಕರೆಯುತ್ತಿದ್ದರೆಂದು ಮತ್ತು ಹಾಕುವಿನ ಮೂಲ ಹೆಸರು ಕೊಹಾಕು ಎಂದೇ ಆಗಿರಬೇಕೆಂದು ಹಾಕುವಿಗೆ ಹೇಳುತ್ತಾಳೆ. ಅದಕ್ಕಾಗಿಯೇ ಆತನಿಗೆ ತನ್ನ ಹೆಸರು ಸದಾ ನೆನಪಿದ್ದದ್ದು ಎಂದು ಹೇಳಿದೊಡನೆ, ಹಾಕು ಡ್ರ್ಯಾಗನ್ ರೂಪ ಕಳಚಿ ಮನುಷ್ಯ ರೂಪ ತಾಳಿ ಹಳೆಯದ್ದನ್ನೆಲ್ಲ ನೆನಪಿಸಿಕೊಂಡು ತನ್ನ ಹೆಸರು ಕೊಹಾಕು ಎಂದೂ ತಾನು ನದಿಯ ಭೂತ(spirit) ಎಂದು ಹೇಳುತ್ತಾನೆ ಮತ್ತು ಇದನ್ನೆಲ್ಲಾ ನೆನಪಿಸಿದ್ದಕ್ಕೆ ಧನ್ಯವಾದ ಹೇಳಿ ಯುಬಾಬಾ ಬಳಿ ಕರೆದೊಯ್ಯುತ್ತಾನೆ. ಯುಬಾಬಾ ಆಕೆಗೆ ಕರಾರಿನಂತೆ ಒಂದು ಕೊನೆಯ ಪರೀಕ್ಷೆ ಇಡುತ್ತಾಳೆ. ಅಲ್ಲಿ ನಿಂತ ಅನೇಕ ಹಂದಿಗಳಲ್ಲಿ ತನ್ನ ತಂದೆತಾಯಿಯನ್ನು ಗುರುತಿಸುವಂತೆ ಚಿಹಿರೊಗೆ ಸವಾಲು ಹಾಕುತ್ತಾಳೆ. ಅದರಲ್ಲಿ ಯಾವುದೂ ತನ್ನ ತಂದೆತಾಯಿಯಲ್ಲ ಎಂದು ಹೇಳಿದೊಡನೆ ಆ ಹಂದಿಗಳೆಲ್ಲ ಯುಬಾಬಾ ಸೇವಕರಾಗಿ ಪುನರ್ ರೂಪ ತಾಳಿ ಚಿಹಿರೊ ಗೆದ್ದದ್ದಕ್ಕೆ ಶುಭ ಹಾರೈಸುತ್ತಾರೆ. ಯುಬಾಬಾ ಒಲ್ಲದ ಮನಸ್ಸಿನಿಂದ ಚಿಹಿರೊಳನ್ನು ಕಳುಹಿಸಿ ಕೊಡುತ್ತಾಳೆ. ಹಾಕು ಆಕೆಯನ್ನು ಕರೆದುಕೊಂಡು ನದಿ ದಾಟಿಸಿ ಬರಲು ಹೋಗುತ್ತಾನೆ. ತನ್ನ ತಂದೆ ತಾಯಿ ಎಲ್ಲಿ ಎಂದು ಚಿಹಿರೊ ಕೇಳಿದಾಗ, ಚಿಹಿರೊ ಯುಬಾಬಾಳ ಪರೀಕ್ಷೆ ಗೆದ್ದ ತಕ್ಷಣ ಅವರಿಬ್ಬರೂ ನದಿಯ ಇನ್ನೊಂದು ಬದಿಯಲ್ಲಿ ಎಚ್ಚರಗೊಂಡಿರುತ್ತಾರೆ ಎಂದು ಕರೆದೊಯ್ಯುತ್ತಾನೆ. ಮತ್ತೆ ಸಿಗುವುದಾಗಿ ವಿದಾಯ ಹೇಳಿ ಹಾಕು ಚಿಹಿರೊಳನ್ನು ಕಳುಹಿಸಿ ಕೊಡುತ್ತಾನೆ. ಆದರೆ ಪೂರ್ತಿ ಸುರಂಗ ದಾಟುವವರೆಗೂ ಹಿಂತಿರುಗಿ ನೋಡದಂತೆ ಎಚ್ಚರಿಸುತ್ತಾನೆ. ಚಿಹಿರೊ ಅದರಂತೆಯೇ ಓಡಿ ಹೋಗಿ ತನ್ನ ತಂದೆತಾಯಿಯನ್ನು ಸೇರುತ್ತಾಳೆ. ಅವರು ಏನೂ ನಡೆದೇ ಇಲ್ಲದಂತೆ ಚಿಹಿರೊಳಿಗೆ ಹಾಗೆ ಎಲ್ಲೆಂದರಲ್ಲಿ ಸುತ್ತಾಡಲು ಹೋಗದಂತೆ ಹೇಳಿ ಅಲ್ಲಿಂದ ಹೊರಡುತ್ತಾರೆ. ಕೊನೆಯ ಬಾರಿ ಒಮ್ಮೆ ಹಿಂತಿರುಗಿ ನೋಡಿಬಿಡಲೆ ಎಂದು ಚಿಹಿರೊ ಕತ್ತು ತಿರುಗಿಸುವಷ್ಟರಲ್ಲಿ ಹಾಕು ಹೇಳಿದ್ದು ನೆನಪಿಸಿಕೊಂಡು ಸುಮ್ಮನೆ ಹೊರಹೋಗುತ್ತಾಳೆ.  

  ಈ ಚಿತ್ರದಲ್ಲಿ ಕೆಲವೆಡೆ ದೃಶ್ಯಗಳ ನಡುವೆ ಒಮ್ಮೊಮ್ಮೆ ಸಂಬಂಧ ಅಸ್ಪಷ್ಟ ಎನಿಸುತ್ತದೆ. ಅದಕ್ಕೆ ಕಾರಣವೂ ಇದೆ. ಹಯಾಒ ಮಿಯಜಾಕಿ ತನ್ನ ಚಿತ್ರ ನಿರ್ಮಾಣ ಪ್ರಾರಂಭಿಸಿದಾಗ, ಪೂರ್ತಿ ಕಥೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡುವುದಿಲ್ಲ. ಬದಲಿಗೆ, ಸ್ಥೂಲವಾಗಿ ಚಿತ್ರದ ಪಾತ್ರಗಳನ್ನು ಮೊದಲು ಸೃಷ್ಟಿಸಿ ಆನಂತರ ಅವುಗಳನ್ನು ಹೊಸೆದು ಕಥೆ ಹೆಣೆಯುತ್ತ, ಒಮ್ಮೆ ತಿದ್ದುತ್ತ ಅಥವಾ ಅಗತ್ಯ ಬಿದ್ದಲ್ಲಿ ಕಥೆಯನ್ನು ಮತ್ತೆ ಮತ್ತೆ ಬದಲಿಸುತ್ತ ತನಗೆ ಪೂರ್ತಿ ಸಮಾಧಾನವಾಗುವವರೆಗೂ ಕಥೆಯನ್ನು ಮುಗಿಸುವುದಿಲ್ಲ. ಆದರೆ ಇವೆಲ್ಲ ನ್ಯೂನತೆಗಳನ್ನು ಮೀರುವಂಥ ಕಲೆ ಆತನ ಚಿತ್ರದಲ್ಲಿ ಕಂಡುಬರುತ್ತದೆ. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಒಂದೊಂದು ಕಲಾಕೃತಿಯಂತೆ ಕಾಣಿಸುತ್ತದೆ.




  ಮಕ್ಕಳಿಗಾಗಿ ಈ ಚಿತ್ರ ಮಾಡಲಾಗಿದೆ ಎನ್ನಿಸಿದರೂ ದೊಡ್ಡವರೂ ಈ ಚಿತ್ರವನ್ನು ನೋಡತಕ್ಕದ್ದು. ನಮ್ಮ ಜೀವನದಲ್ಲಿನ ಬರುವ ಹಲವಾರು ಬದಲಾವಣೆಗಳನ್ನು ನೋಡಿ ನಾವು ಚಿಹಿರೊನ ರೀತಿ ಬೇಸರ ಪಟ್ಟುಕೊಳ್ಳುತ್ತೇವೆ. ಹೊಸ ಬದಲಾವಣೆಗಳಿಗೆ ಮನಸ್ಸು ಒಪ್ಪುವುದಿಲ್ಲ ಮತ್ತು ಹಳೆಯದೇ ಚೆನ್ನಾಗಿತ್ತು ಎಂದು ಮರುಗುತ್ತೇವೆ. ಆದರೆ ಒಮ್ಮೆ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಚಿಹಿರೊ ಎದುರಿಸಿದ ರೀತಿ ಎದುರಿಸಿದಾಗಲೇ ನಮಗೆ ಅದರಾಚೆಗಿನ ಜಗತ್ತು ಮತ್ತು ಜೀವನ ದರ್ಶನವಾಗುವುದು. ಇಲ್ಲಿ ನಾವು ಜೀವನದಲ್ಲಿ ಹಳೆಯದನ್ನು ಮರೆಯದೆ ಹೊಸತನ್ನು ಅಪ್ಪಿಕೊಳ್ಳುತ್ತ ತನ್ಮೂಲಕ ನಾವೂ ಬದಲಾಗುತ್ತ ಬೆಳೆಯುತ್ತ ಹೋಗುವುದನ್ನು ಮಾರ್ಮಿಕವಾಗಿ ಹೇಳಲಾಗಿದೆ.





Thursday, 11 January 2018

ನಾನು ನೋಡಿದ ಚಿತ್ರ- ಟೊರ, ಟೊರ, ಟೊರ


IMDb: Tora, Tora, Tora



  ಎರಡನೇ ವಿಶ್ವ ಯುದ್ಧದ ಪರ್ಲ್ ಹಾರ್ಬರ್ ದಾಳಿಯ ಬಗ್ಗೆ ಬಹುತೇಕರಿಗೆ ಗೊತ್ತಿದೆ- ಹೇಗೆ ಜಪಾನಿಗಳ ಈ ಒಂದು ದಾಳಿಯಿಂದ ಅಮೇರಿಕಾ ವಿಶ್ವ ಯುದ್ಧಕ್ಕೆ ಧುಮುಕಿತು ಮತ್ತು ವಿಶ್ವ ಯುದ್ಧದ ಚಿತ್ರಣವನ್ನು ಮತ್ತು ಭವಿಷ್ಯವನ್ನು ಬದಲಾಯಿಸಿತು. ಈ ಘಟನೆಯನ್ನೊಳಗೊಂಡ ಚಿತ್ರ ‘ಪರ್ಲ್ ಹಾರ್ಬರ್’ ಕೂಡ ಹಾಲಿವುಡ್ ನಲ್ಲಿ ನಿರ್ಮಾಣವಾಗಿತ್ತು. ಆದರೆ ಆ ಚಿತ್ರ ಪರ್ಲ್ ಹಾರ್ಬರ್ ನ ದಾಳಿಯನ್ನು ನೆಪವಾಗಿಟ್ಟುಕೊಂಡು ಆ ಘಟನೆಯಲ್ಲಿ ಭಾಗಿಯಾದ ಜನಗಳ ಕಥೆಯನ್ನಷ್ಟೇ ಹೇಳಿತ್ತು. ‘ಟೊರ, ಟೊರ, ಟೊರ’ ಆಂಗ್ಲೋ-ಜಾಪನೀಸ್ ಚಿತ್ರ. ಈ ಚಿತ್ರ ಪೂರ್ತಿಯಾಗಿ ಪರ್ಲ್ ಹಾರ್ಬರ್ ನಡೆದ ದಿನ ಮತ್ತು ಆ ದಾಳಿಗೆ ಎಡೆಮಾಡಿಕೊಟ್ಟ ಹಲವಾರು ಸಂಗತಿಗಳ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಡುತ್ತಾ ಹೋಗುತ್ತದೆ. ಹಾಗಾಗಿಯೇ ಈ ಚಿತ್ರದಲ್ಲಿ ಯಾರೊಬ್ಬರನ್ನೂ ನೀವು ಒಂದು ಸಾಂಪ್ರದಾಯಿಕ ಚಿತ್ರದಂತೆ ಪ್ರೊಟಾಗನಿಸ್ಟ್ ಎಂದು ಗುರುತಿಸಲಾರಿರಿ. ಆ ಎರಡು ದೇಶಗಳ ನಡುವೆ ನಡೆದ ಈ ಒಂದು ಘಟನೆಯ ಹಿನ್ನಲೆಯಲ್ಲಿ ಎರಡೂ ದೇಶಗಳಲ್ಲಿ ಏನೆಲ್ಲಾ ನಡೆದಿತ್ತು ಎಂದು ತಿಳಿಯಲು ಇದೊಂದು ತುಂಬಾ ಒಳ್ಳೆಯ ಐತಿಹಾಸಿಕ ಚಿತ್ರ.

  ಪಶ್ಚಿಮದಲ್ಲಿ ಯುಕೆ, ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳು ಜರ್ಮನಿಯ ವಿರುದ್ಧ ಹೋರಾಡುತ್ತಿದ್ದ ವೇಳೆಯಲ್ಲೇ, ಇತ್ತ ಪೂರ್ವದಲ್ಲಿ ಜಪಾನ್ ನ ಇಂಪೀರಿಯಲ್ ಆರ್ಮಿ ಚೀನಾದ ಮೇಲೆ ದಾಳಿ ನಡೆಸುತ್ತಿತ್ತು. ಈ ದಾಳಿಯನ್ನು ವಿರೋಧಿಸಿ ಅಮೇರಿಕ ಜಪಾನ್ ಗೆ ತಮ್ಮ ಪರಸ್ಪರ ಸಂಬಂಧವನ್ನು ಉಳಿಸಿಕೊಳ್ಳಲು ಈ ದಾಳಿಯಿಂದ ಜಪಾನ್ ಹಿಂದೆ ಸರಿಯಬೇಕೆಂದು ಕೇಳಿಕೊಳ್ಳುತ್ತದೆ. ತನಗೆ ಬೇಕಿದ್ದ ಅಗತ್ಯ ಕಚ್ಚಾ ವಸ್ತುಗಳ ಆಕರವಾಗಿದ್ದ ಚೀನಾ ಬಿಟ್ಟು ಕೊಡಲು ಜಪಾನ್ ತಯಾರಿರಲಿಲ್ಲ. ಹೀಗೆ ಹಿಂದೆ ಸರಿಯದಿದ್ದರೆ ತನ್ನ ಮೇಲೆ ಅಮೇರಿಕ ದಾಳಿ ಮಾಡಬಹುದು ಎಂದು ಜಪಾನ್ ಯೋಚಿಸಿ, ಹಾಗೇನಾದರೂ ಸಂಬಂಧ ಮುರಿದು ಬಿದ್ದರೆ ಇದನ್ನು ತಪ್ಪಿಸಲು ಒಂದೇ ಉಪಾಯ ಅಮೇರಿಕಾದ ಪೆಸಿಫಿಕ್ ಫ್ಲೀಟ್ ನ ಮೇಲೆ ದಾಳಿ ನಡೆಸಿ ಧ್ವಂಸಮಾಡುವುದು. ಇದೆ ಸಮಯದಲ್ಲಿ ಯುರೋಪಿಯನ್ ಸೇನೆಗಳು ಯುರೋಪಿಯನ್ ಯುದ್ಧಕ್ಕಾಗಿ ತಮ್ಮ ಆಗ್ನೇಯ ಏಶಿಯಾ ಭಾಗದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದರಿಂದ, ಜಪಾನ್ ಗೆ ಅಮೇರಿಕಾ ಮೇಲೆ ದಾಳಿ ಮಾಡಿ ಇಡೀ ಪೆಸಿಫಿಕ್ ಭಾಗವನ್ನು ನಿಯಂತ್ರಿಸುವುದೇ ಒಳ್ಳೆಯದೆನ್ನಿಸಿತು. ಈ ರೀತಿ ಅಮೆರಿಕಾಗೆ ಯುದ್ಧಕ್ಕೆ ಆಹ್ವಾನ ಕೊಡುವಂತ ನಿರ್ಣಯಗಳನ್ನು ಕೈಗೊಳ್ಳಲು ಜಪಾನ್ ಸರ್ಕಾರದಲ್ಲಿದ್ದ ಕೆಲವು ಯುದ್ಧೋನ್ಮಾದದಲ್ಲಿದ್ದ ನಾಯಕರೂ(ವಾರ್ ಮಿನಿಸ್ಟರ್- ಹಿದೇಕಿ ತೊಜೊ) ಕಾರಣ. ಈ ಹಂತದಲ್ಲೇ ಜಪಾನ್, ಜರ್ಮನಿ ಮತ್ತು ಇಟಲಿಯ ಜತೆ ‘ಟ್ರೈ- ಪಾರ್ಟೈಟ್’ ಒಪ್ಪಂದ ಮಾಡಿಕೊಳ್ಳುತ್ತದೆ. ಇತ್ತ ಅಮೆರಿಕಾದಲ್ಲಿ ಸೆಕ್ರೆಟರಿ ಆಫ್ ಸ್ಟೇಟ್- ಕಾರ್ಡೆಲ್ ಹಲ್ ಜಪಾನಿನ ರಾಯಭಾರಿ ನೊಮುರ ಜೊತೆ ಚರ್ಚಿಸಿ ಹೇಗಾದರೂ ಮಾಡಿ ಒಂದು ಒಪ್ಪಂದಕ್ಕೆ ಬರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ, ಜಪಾನಿ ಸರ್ಕಾರ ಯಾವುದೇ ಒಂದು ಒಪ್ಪಂದದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳದೆ ಸುಮ್ಮನೆ ಕಾಲ ತಳ್ಳುತ್ತಿದ್ದಾರೆ ಎಂದು ಕಾರ್ಡೆಲ್ ಭಾವಿಸುತ್ತಾನೆ.

 ಇಷ್ಟೆಲ್ಲಾ ನಡೆಯುತ್ತಿದ್ದರೂ ಅಮೇರಿಕ ಜಪಾನ್ ಮೇಲೆ ನಿಗಾ ಇಡಲು ಜಪಾನ್ ನ ಟೋಕಿಯೋದಿಂದ ಜಪಾನಿನ ಎಲ್ಲ ರಾಯಭಾರಿ ಕಚೇರಿಗಳಿಗೆ ತಲುಪುವ ಸಂದೇಶಗಳನ್ನು ಗುಪ್ತವಾಗಿ ಪಡೆದು ತನ್ನ ಎಲೆಕ್ಟ್ರಿಕಲ್ ಡಿಕೋಡರ್ ಮೂಲಕ ಓದುತ್ತಿರಿತ್ತದೆ. ಈ ವ್ಯವಸ್ಥೆ ಎಷ್ಟು ವೇಗವಾಗಿ ಕೆಲಸಮಾಡುತ್ತಿರುತ್ತದೆ ಎಂದರೆ, ಅಮೇರಿಕಾದ ರಯಾಭಾರಿ ಕಚೇರಿಯಲ್ಲಿ ಟೋಕಿಯೋದಿಂದ ಬಂದ ಗುಪ್ತ ಸಂದೇಶ ಬಿಡಿಸಿ ಓದುವ ಮುಂಚೆಯೇ ಅಮೆರಿಕಾದವರಿಗೆ ಅದರಲ್ಲೇನಿದೆ ಎಂದು ತಿಳಿದಿರುತ್ತಿತ್ತು. ಈ ವ್ಯವಸ್ಥೆಯನ್ನು ನೌಕಾದಳದ ಲೆಫ್ಟಿನಂಟ್ ಕಮಾಂಡರ್ ಆಲ್ವಿನ್ ಕ್ರೆಮರ್ ಮತ್ತು ಆರ್ಮಿಯ ಕರ್ನಲ್ ರೂಫಸ್ ಬ್ರಾಟ್ಟನ್ ನೋಡಿಕೊಳ್ಳುತ್ತಿರುತ್ತಾರೆ. ಇವರ ಬಳಿ ಇಲ್ಲಿ ಪತ್ತೆಯಾದ ಸಂದೇಶಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬ ನಿರ್ದಿಷ್ಟ ಪಟ್ಟಿಯೂ ಇರುತ್ತದೆ. ಆದರೆ ಮೊದಲ ಬಾರಿಗೆ ಈ ಪಟ್ಟಿಯನ್ನು ನೋಡಿದ ಕರ್ನಲ್ ಇದರಲ್ಲಿ ಏರ್ ಫೋರ್ಸ್ ನ ಕಮಾಂಡರ್ ಮತ್ತು ವಿದೇಶಗಳಲ್ಲಿನ ನೌಕಾ ಕಮಾಂಡರ್ ಹೆಸರು ಇಲ್ಲದ್ದನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ.  

  ಜಪಾನಿನ ನೌಕಾದಳಕ್ಕೆ ಹೊಸದಾಗಿ ನೇಮಕವಾದ ಅಡ್ಮಿರಲ್ ಯಾಮಮೊಟೊ ತನ್ನ ಹಿಂದಿನ ಅಧಿಕಾರಿ ನೇವಿ ವಾರ್ ಮಿನಿಸ್ಟ್ರಿಗೆ ವರ್ಗಾವಣೆಯಾಗುತ್ತಿದ್ದರಿಂದ ಆತನಿಗೆ ಹೇಗಾದರೂ ಮಾಡಿ ಅಲ್ಲಿ ಆರ್ಮಿಯವರ ಹುಂಬತನ ತಡೆಯುವಂತೆ ಕೇಳಿಕೊಳ್ಳುತ್ತಾನೆ. ಅಮೇರಿಕಾದ ಜೊತೆಗೆ ಯುದ್ಧಕ್ಕೆ ಇಳಿದರೆ ಅದು ತಮ್ಮ ದೇಶಕ್ಕೆ ಬಹಳ ನಷ್ಟ ಉಂಟುಮಾಡಲಿದೆ ಎಂಬ ಸತ್ಯ ಯಾಮಮೊಟೊಗೆ ತಿಳಿದಿತ್ತು. ಹಾಗೆ ಯುದ್ಧ ಒದಗಿಯೇ ಬಂದರೆ ಅಮೆರಿಕಾದ ಪೆಸಿಫಿಕ್ ಫ್ಲೀಟ್ ಮೇಲೆ ದಾಳಿ ಮಾಡಿದರೆ ಜಪಾನಿಗೆ ಯುದ್ಧದಲ್ಲಿ ಗೆಲ್ಲಲು ಒಂದು ಅವಕಾಶವಿದೆ ಎಂದು ತಯಾರಿಯೂ ಮಾಡಲು ತೊಡಗುತ್ತಾನೆ. ತನ್ನ ಟಾರ್ಪೀಡೊ ಬಾಂಬರ್ ಗಳು ಹಡಗುಗಳನ್ನು ಸರಿಯಾಗಿ ಗುರಿಯಿಟ್ಟು ಹೊಡೆಯಲು ಅನೇಕ ಬಾರಿ ಅಭ್ಯಾಸ ಮಾಡಿಸುತ್ತಾನೆ. ಪೆಸಿಫಿಕ್ ಫ್ಲೀಟ್ ಅನ್ನು ಧ್ವಂಸಮಾಡಲು ಪರ್ಲ್ ಹಾರ್ಬರ್ ಸರಿಯಾದ ಜಾಗ ಎಂದೂ ಗುರುತಿಸುತ್ತಾನೆ. ಇದಕ್ಕೆ ವಿಸ್ತೃತ ಯುದ್ಧ ತಂತ್ರ ಹೆಣೆಯಲು ಯಾಮಾಮೊಟೊ ತನ್ನ ಕಿರಿಯ ಅಧಿಕಾರಿ ಕಮ್ಯಾಂಡರ್. ಮಿನೊರು ಗೆಂಡಾಗೆ ವಹಿಸುತ್ತಾನೆ.

  ಪರ್ಲ್ ಹಾರ್ಬರ್ ನ ಉಸ್ತುವಾರಿ ನೋಡಿಕೊಳ್ಳಲು ಬರುವ ಹೊಸ ಅಡ್ಮಿರಲ್ ಹಸ್ಬಂಡ್ ಕಿಮ್ಮೆಲ್ ಹಿಂದಿನ ಅಧಿಕಾರಿಯೊಂದಿಗೆ ಪರ್ಲ್ ಹಾರ್ಬರ್ ಅನ್ನು ಇನ್ನಷ್ಟು ಭದ್ರಪಡಿಸಲು ಏನೇನು ಕ್ರಮ ಕೈಗೊಳ್ಳಬಹುದು ಎಂದು ವೈಮಾನಿಕ ಸರ್ವೇಕ್ಷಣೆಯನ್ನು ಮಾಡುತ್ತಾನೆ. ಇದರಲ್ಲಿ ಎದ್ದು ಕಾಣುವ ದೊಡ್ಡ ತೊಂದರೆಯೆಂದರೆ ಪರ್ಲ್ ಹಾರ್ಬರ್ ನ ಬಂದರಿಗೆ ಹಡಗುಗಳು ಹೋಗಿಬರಲು ಒಂದು ಕಂದಕದಂತ ಪ್ರವೇಶ ದಾರಿ ಬಿಟ್ಟರೆ ಬೇರೇನೂ ಇಲ್ಲ. ಇದರಿಂದ ಆ ಸಣ್ಣ ದಾರಿಯಲ್ಲಿ ಒಂದು ದೊಡ್ಡ ಹಡಗು ದಾಳಿಗೆ ಒಳಗಾಗಿ ಅಲ್ಲೇ ದಾರಿಗೆ ಅಡ್ಡವಾಗಿ ನಿಂತುಬಿಟ್ಟರೆ ಬಂದರಿನಲ್ಲಿರುವ ಎಲ್ಲ ಹಡಗುಗಳೂ ಬಂದರಿನಲ್ಲೇ ನಿಲ್ಲಬೇಕಾಗುತ್ತದೆ ಮತ್ತು ಇದರಿಂದ ಹಡಗುಗಳನ್ನು ಬಾಂಬರ್ ವಿಮಾನಗಳು ಹೊಡೆಯುವುದು ಬಹಳ ಸುಲಭವಾಗುತ್ತದೆ. ಈ ಸಂಗತಿ ಗೊತ್ತಿದ್ದರೂ ಟಾರ್ಪೀಡೊಗಳು ನೀರಿಗೆ ಬಿದ್ದ ನಂತರ 75 ಅಡಿಗಳವರೆಗೂ ಮುಳುಗಿ ಆನಂತರ ಸಮವಾಗಿ ಹಡಗಿನತ್ತ ಸಾಗುತ್ತದೆ ಮತ್ತು ಪರ್ಲ್ ಹಾರ್ಬರ್ ನ ಬಳಿಯ ಸಮುದ್ರ ಕೇವಲ 40 ಅಡಿಗಳಷ್ಟೆ ಇರುವುದರಿಂದ ದಾಳಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನೊಂದೆಡೆ ಹವಾಯಿ ದ್ವೀಪದ ಆರ್ಮಿ ಕಮ್ಯಾಂಡರ್ ಲೆ.ಜನರಲ್. ವಾಲ್ಟರ್ ಶಾರ್ಟ್ ಯುದ್ಧವಿಮಾನಗಳು ರನ್ವೇ ಸಮೀಪ ಓಡಿಸಲು ತಯಾರಾಗಿ ನಿಂತಿದ್ದನ್ನು ಕಂಡು ಹೀಗೆ ಯಾಕೆ ಈ ವಿಮಾನಗಳು ನಿಂತಿವೆ ಎಂದು ತನ್ನ ಕಿರಿಯ ಅಧಿಕಾರಿಗೆ ಕೇಳಿದಾಗ, ಅವು ದ್ವೀಪದ ಮೇಲೆ ದಾಳಿಯಾದರೆ, ತುರ್ತು ಪ್ರತಿದಾಳಿ ಮಾಡಲು ಸಿದ್ಧವಿರಲು ಎಂದು ಉತ್ತರಿಸುತ್ತಾನೆ. ಇದರಿಂದ ತೃಪ್ತನಾಗದ ಜನರಲ್ ಹವಾಯಿ ದ್ವೀಪದಲ್ಲಿ ಇರುವ ಅನೇಕ ಜಪಾನಿಗಳಲ್ಲಿ ಯಾರಾದರು ಬಂದು ಇವುಗಳನ್ನು ನಾಶಪಡಿಸುವುದು ಸುಲಭವಾಗಿವೆ, ಹಾಗಾಗಿ ಈ ವಿಮಾನಗಳನ್ನೆಲ್ಲ ಒಂದೆಡೆ ಸೇರಿಸಿ ಸದಾ ಕಾವಲು ಇರಿಸುವಂತೆ ಆದೇಶಿಸುತ್ತಾನೆ. ಅಡ್ಮಿರಲ್. ಹಾಲ್ಸೀ, ಅಡ್ಮಿರಲ್ ಕಿಮ್ಮೆಲ್ ಬಳಿ ಬಂದು ತನ್ನ ವಿಮಾನವಾಹಕ ಹಡಗುಗಳನ್ನು ಅಟ್ಲಾಂಟಿಕ್ ಸಾಗರಕ್ಕೆ ಕೊಂಡೊಯ್ಯುವಂತೆ ಆದೇಶಬಂದಿದ್ದರ ಬಗ್ಗೆ ತನ್ನ ಅಸಮಾಧಾನ ತೋಡಿಕೊಳ್ಳಲು ಬರುತ್ತಾನೆ. ಹಾಲ್ಸೀಯ ವಾದವೇನೆಂದರೆ ತನ್ನ ವಿಮಾನವಾಹಕ ಹಡಗುಗಳನ್ನು ಕೊಂಡೊಯ್ದಾಗ, ದ್ವೀಪದ ಮೇಲೆ ದಾಳಿಯಾದರೆ, ಬಂದರಿನಲ್ಲಿದ್ದ ಚಿಕ್ಕ ಹಡಗುಗಳು ಮತ್ತು ಹಳೆಯ ಯುದ್ಧಹಡಗುಗಳು ಸಾಲದಾಗುತ್ತವೆ ಎಂದು. ಇದಕ್ಕೆ ಕಿಮ್ಮೆಲ್, ಇದು ಸಾಲದು ಎಂದು ತನ್ನ ಬಳಿ ಇದ್ದ ಕೆಲವು (ಇಂಧನ ತುಂಬಿಸುವ) ಟ್ಯಾಂಕರ್ ಹಡಗುಗಳನ್ನೂ ಬೇರೆಡೆಗೆ ಕಳಿಸಲು ಆದೇಶ ಬಂದಿದೆ ಎಂದು ತನ್ನ ಅಸಹಾಯಕತೆ ತೋಡಿಕೊಳ್ಳುತ್ತಾನೆ. ಆದರೂ ಸಮಯ ಬಂದರೆ ರಾಷ್ಟ್ರಾಧ್ಯಕ್ಷನನ್ನು ಭೇಟಿಯಾದರೂ ಇದನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆಯನ್ನು ಕೊಟ್ಟು ಕಳಹುತ್ತಾನೆ. ಇಂತಹ ಹಲವಾರು ಘಟನೆಗಳು, ಹಲವಾರು ವ್ಯಕ್ತಿಗಳ ಅಚಾತುರ್ಯ, ಅಸಹಾಯಕತೆ ಮತ್ತು ಬೇಜವಾಬ್ದಾರಿತನಗಳು ಸೇರಿ ಪರ್ಲ್ ಹಾರ್ಬರ್ ಘಟನೆ ಅಷ್ಟು ದೊಡ್ಡ ದಾಳಿಯಾಗಲು ಕಾರಣವಾಯಿತು. ಇಂತಹ ಅಚಾತುರ್ಯ, ಹುಂಬತನಗಳು ಕೇವಲ ಅಮೆರಿಕನ್ನರ ಕಡೆಗಷ್ಟೇ ಇರಲಿಲ್ಲ, ಜಪಾನಿಗಳ ಕಡೆಯಲ್ಲಿ, ಯಾಮಾಮೋಟೋ ಅನೇಕ ಹಳೆಯ ಕಾಲದ ಯುದ್ಧನೀತಿಯ ಮೇಲೆ ನಂಬಿಕೆಯುಳ್ಳ ಅಧಿಕಾರಿಗಳನ್ನು ಎದುರಿಸಬೇಕಾಯ್ತು. ಇದರಲ್ಲಿ ತಮಾಷೆಯ ಸಂಗತಿಯೆಂದರೆ, ಅಮೆರಿಕನ್ನರು ತಮ್ಮೆಡೆಗೆ ಬರುವ ವಿಮಾನಗಳನ್ನು ಪತ್ತೆಹಚ್ಚಲು ಹೊಸ ರೇಡಾರ್ ಅನ್ನು ಹವಾಯಿ ದ್ವೀಪದ ಬೆಟ್ಟಗಳ ಮೇಲೆ ಸ್ಥಾಪಿಸಲು ನಿರ್ಧರಿಸಿದಾಗ ಅದಕ್ಕೆ ಮಿನಿಸ್ಟ್ರಿ ಆಫ್ ಇಂಟಿರಿಯರ್ ನ ನ್ಯಾಷನಲ್ ಪಾರ್ಕ್ ಸರ್ವಿಸ್ ನವರು ಪರವಾನಗಿ ಕೊಡಲು ಒಪ್ಪದಿರುವುದು. ಯುದ್ಧವನ್ನು ಯಾರುಯಾರು ಹೇಗೆಲ್ಲ ಗಂಭೀರವಾಗಿ ತೆಗೆದುಕೊಂಡಿದ್ದರು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಿದು. ಆನಂತರ ಆರ್ಮಿಯವರು ರೇಡಾರ್ ಅನ್ನು ಸ್ಥಾಪಿಸುತ್ತಾರೆಯಾದರೂ ಅದರ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ.


  ಅಮೇರಿಕಾ ತನಗೆ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಜಪಾನ್ ಸೇನೆ ಇಂಡೋ-ಚೀನಾ ಭಾಗವನ್ನು ತೊರೆಯದೆ ತನ್ನ ಆಕ್ರಮಣ ಮುಂದುವರೆಸುತ್ತದೆ. ಇದಕ್ಕೆ ಪ್ರತಿಯಾಗಿ ಅಮೇರಿಕಾ ಜಪಾನಿನೊಂದಿಗೆ ಇದ್ದ ಎಲ್ಲ ವ್ಯವಹಾರಗಳ ಮೇಲೆ ನಿರ್ಬಂಧ ಹೇರುತ್ತದೆ. ಸೈನ್ಯದ ಅತ್ಯಂತ ಹಿರಿಯ ಅಧಿಕಾರಿಗಳ ಕಚೇರಿಯಿಂದ ಎಲ್ಲ ಸಂಬಂಧಿತ ಹಿರಿಯ ಅಧಿಕಾರಿಗಳಿಗೆ ಈ ಹೊಸ ಬೆಳವಣಿಗೆಗಳ ಬಗ್ಗೆ ತಿಳಿಸುತ್ತ, ಜಪಾನಿನಿಂದ ಯಾವುದೇ ದಾಳಿಯನ್ನು ನಿರೀಕ್ಷೆ ಮಾಡುತ್ತಿಲ್ಲವಾದರೂ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂದೇಶ ಬರುತ್ತದೆ. ಈ ಸಂದೇಶವನ್ನು ಹೇಗೆ ಅರ್ಥೈಸಬೇಕೆಂದು ಗೊಂದಲಕ್ಕೀಡಾಗುವ ಅಧಿಕಾರಿಗಳು ಸುಮ್ಮನೆ ಫುಲ್ ಅಲರ್ಟ್ ಘೋಷಣೆ ಮಾಡಿ ಕೂರುತ್ತಾರೆ. ಈ ನಡುವೆ ಅಮೇರಿಕಾ ರಾಯಭಾರಿ ನೊಮುರ ಅಮೇರಿಕ ಜೊತೆಗಿನ ಸಂಬಂಧ ಸುಧಾರಿಸಲು ಎಷ್ಟು ಪ್ರಯತ್ನಿಸುತ್ತಿದ್ದರೂ ಟೊಕಿಯೋದಿಂದ ಎಲ್ಲಾ ಮಾತುಕತೆಯನ್ನು ನವೆಂಬರ್ 29ರ ಒಳಗೆ ಕೊನೆಗೊಳಿಸುವಂತೆ ತಾಕೀತು ಬರುತ್ತದೆ. ಇದನ್ನೇ ಗಮನಿಸುತ್ತಿದ್ದ ಕರ್ನಲ್ ಬ್ರಾಟ್ಟನ್ ಹೀಗೆ ಟೊಕಿಯೋದಿಂದ ಆದೇಶ ಬಂದಿರುವುದು ನೋಡಿದರೆ, ನವೆಂಬರ್ 30 ಭಾನುವಾರದ ದಿನ ಜಪಾನ್ ದಾಳಿ ಮಾಡಬಹುದು ಎಂದು ಅಂದಾಜಿಸುತ್ತಾನೆ. ಇದನ್ನು ಗಮನಿಸಿದ ಸರ್ಕಾರದ ಮಂತ್ರಿಗಳು ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಎಲ್ಲರೂ ಫುಲ್ ಅಲರ್ಟ್ ಗೆ ಹೋಗುವಂತೆ ಆದೇಶ ಹೊರಡಿಸುತ್ತಾರೆ. ಇದೆಲ್ಲದರ ಮಧ್ಯೆ ಯಾಮಾಮೋಟೋ ಎಂಪರರ್ ಹಿರೋಹಿತೋ ಗೆ ಯುದ್ಧದ ವರದಿ ಒಪ್ಪಿಸಲು ಇಂಪೀರಿಯಲ್ ಪ್ಯಾಲೇಸ್ ಗೆ ಹೋಗುತ್ತಾನೆ. ಪ್ಯಾಲೇಸ್ ನ ಉಸ್ತುವಾರಿ ಕೊಇಚಿ ಕಿಡೊ ಈ ಭೇಟಿಯನ್ನು ಅತ್ಯಂತ ದುಃಖದ ಸಂಗತಿ ಎಂದು ಯಾಮಾಮೋಟೋಗೆ ಹೇಳಿಕೊಳ್ಳುತ್ತಾನೆ. ಯುದ್ಧವನ್ನು ಇಷ್ಟಪಡದ ದೊರೆ ಮತ್ತು ಯುದ್ಧವನ್ನು ವಿರೋಧಿಸುತ್ತಿರುವ ಅಧಿಕಾರಿಯ ನಡುವಿನ ಈ ಔಪಚಾರಿಕ ಮಾತುಕತೆಗೆ ತಾನು ಸಾಕ್ಷಿಯಾಗದಿರುವುದು ತನ್ನ ಭಾಗ್ಯವೇ ಎಂದು ಕಿಡೊ ಹೇಳುತ್ತಾನೆ. ಏಕೆಂದರೆ, ಔಪಚಾರಿಕ ಮಾತುಕತೆಗಳಲ್ಲಿ ದೊರೆ ಸಾಂಪ್ರದಾಯಿಕ ಪ್ರಶ್ನೆಗಳನ್ನು ಬಿಟ್ಟು ಬೇರೇನನ್ನೂ ಕೇಳುವಂತಿಲ್ಲ ಮತ್ತು ಉತ್ತರಿಸುವವರು ಕೇಳಿದ ಪ್ರಶ್ನೆಗೆ ಉತ್ತರಿಸುವುದು ಬಿಟ್ಟು ಬೇರೇನೂ ಹೇಳುವಂತಿಲ್ಲ.

  ಹೀಗೆ ಬಂದ ಎಚ್ಚರಿಕೆ ಸಂದೇಶಗಳ ಪ್ರತಿಕ್ರಿಯೆಯ ರೂಪದಲ್ಲಿ ಅಡ್ಮಿರಲ್ ಕಿಮ್ಮೆಲ್ ಎಲ್ಲ ವಿಮಾನವಾಹಕ ಹಡಗುಗಳನ್ನು ಗಸ್ತು ತಿರುಗಿ ಬರಲು ಕಳಹುತ್ತಾನೆ. ಯುದ್ಧ ಹಡಗುಗಳು(ಬ್ಯಾಟಲ್ ಶಿಪ್) ತುಂಬಾ ನಿಧಾನವಾಗಿದ್ದರಿಂದ ಮತ್ತು ಯಾವುದೇ ವೈಮಾನಿಕ ಬೆಂಬಲವಿಲ್ಲದೆ ತುಂಬಾ ದಿನ ಹೀಗೆ ಯುದ್ಧ ಹಡಗುಗಳನ್ನು ಬಿಡಲು ಸಾಧ್ಯವಿಲ್ಲದಿರುವುದರಿಂದ, ಅವುಗಳನ್ನು ಜೊತೆಯಲ್ಲಿ ಕರೆದೊಯ್ಯದೆ ಬಂದರಿನಲ್ಲೇ ಬಿಟ್ಟು, ಆದಷ್ಟು ಬೇಗನೆ ವಿಮಾನವಾಹಕ ಹಡಗುಗಳನ್ನು ಗಸ್ತು ಮುಗಿಸಿ ಬರಲು ಆದೇಶಿಸುತ್ತಾನೆ. ಇಲ್ಲಿ ಅಮೆರಿಕಾದ ನೇತೃತ್ವ ವಹಿಸಿದ್ದವರ ಸಂದಿಗ್ಧವೂ ನೋಡಬೇಕು. ಅವರಿಗೆ ಜಪಾನ್ ದಾಳಿಗೂ ತಯಾರಾಗಬೇಕು ಆದರೆ ತಾವೇ ಯುದ್ಧ ಪ್ರಾರಂಭಿಸಿದೆವು ಎನ್ನುವ ಅಪವಾದವೂ ಬೇಡ. ಇಲ್ಲಿ ಹಿರಿಯ ಅಧಿಕಾರಿಗಳು ಸರಿಯಾದ ನಿಲುವು ತಾಳಲಾರದೆ ಹೋಗುವುದರಿಂದ ಕೆಳಮಟ್ಟದ ಅಧಿಕಾರಿಗಳಿಗೆ ತಾವು ಯುದ್ಧಕ್ಕೆ ತಯಾರಾದರೂ ಜಪಾನ್ ಹಡಗುಗಳು ಅಥವಾ ವಿಮಾನಗಳನ್ನು ತಮ್ಮ ಜಾಗದಲ್ಲಿ ಕಂಡರೆ ಅದಕ್ಕೆ ಪ್ರತಿಯಾಗಿ ಅವುಗಳ ಮೇಲೆ ದಾಳಿ ಮಾಡಬೇಕೋ ಬೇಡವೋ ಎನ್ನುವ ಗೊಂದಲ ನಿರ್ಮಾಣವಾಗುತ್ತದೆ. ಇಂತದೆ ಒಂದು ಗೊಂದಲದ ಪ್ರಶ್ನೆಯನ್ನು ಕಿಮ್ಮೆಲ್ ಗೆ ಅಡ್ಮಿರಲ್ ಹಾಲ್ಸೀ ಕೇಳಿದಾಗ “ನಿನ್ನ ಸಾಮಾನ್ಯ ಜ್ಞಾನ ಉಪಯೋಗಿಸು” ಎಂದಷ್ಟೇ ಹೇಳುತ್ತಾನೆ. ಹವಾಯಿ ದ್ವೀಪಗಳ ಸನಿಹ ತಲುಪುತ್ತಿದ್ದ ವೇಳೆ ಪರ್ಲ್ ಹಾರ್ಬರ್ ಬಂದರಿನ ಎಲ್ಲ ಚಲನವಲನಗಳ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದ ಜಪಾನ್ ನೌಕಾ ಸೇನೆಯ ಹಿರಿಯ ಅಧಿಕಾರಿಗಳು, ಒಂದು ವಿಮಾನವಾಹಕ ಹಡಗು ಬಿಟ್ಟರೆ ಉಳಿದೆಲ್ಲವೂ ಗಸ್ತು ತಿರುಗಲು ಹೋಗಿವೆ ಎಂಬ ಮಾಹಿತಿ ತಿಳಿದು ಬೇಸರಪಟ್ಟುಕೊಳ್ಳುತ್ತಾರೆ. ಅಮೆರಿಕಾದ ಪೆಸಿಫಿಕ್ ಫ್ಲೀಟ್ ನ ಬೆನ್ನೆಲುಬೇ ಈ ವಿಮಾನವಾಹಕ ಹಡಗುಗಳು. ಡಿಸೆಂಬರ್ 6 ಶನಿವಾರದ ರಾತ್ರಿ ಟೊಕಿಯೋದಿಂದ ತನ್ನ ರಾಯಭಾರಿ ಕಚೇರಿಗಳಿಗೆ ಗುಪ್ತ ಸಂದೇಶ ರವಾನಿಸಲಾಗುತ್ತದೆ. ಈ ಸಂದೇಶ 14 ಭಾಗಗಳಿಂದ ಕೂಡಿದ್ದು 13 ಭಾಗಗಳನ್ನು 6ರ ರಾತ್ರಿಯೇ ಕಳುಹಿಸಿ ಕೊನೆಯ ಭಾಗವನ್ನ ಮರುದಿನ ಬೆಳಗ್ಗೆ ಕಳುಹಿಸುವುದಾಗಿಯೂ ಸಂದೇಶ ಬರುತ್ತದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಲೆ.ಕಮ್ಯಾಂಡರ್. ಕ್ರೆಮರ್ ಈ ಸಂದೇಶಗಳ ಬಗ್ಗೆ ಏನು ಮಾಡುವುದು ಎಂದು ಯೋಚಿಸಿ ಕೊನೆಗೆ ಮೇಲಿನವರಿಗೆ ಎಚ್ಚರಿಕೆ ಕೊಡುವುದೇ ಒಳಿತು ಎಂದು ತಿಳಿದು ಕ್ರೆಮರ್ ನೇರ ವೈಟ್ ಹೌಸ್ ಗೆ ಹೊರಡುತ್ತಾನೆ. ಆದರೆ ಕೊನೆಯ ಭಾಗ ಏನು ಎಂದು ತಿಳಿಯದೆ ಮುಂದಿನ ನಡೆ ನಿರ್ಧರಿಸುವುದು ಬೇಡ ಎಂದು ಹಿರಿಯ ಅಧಿಕಾರಿಗಳು ನಿರ್ಧರಿಸುತ್ತಾರೆ. ಕೊನೆಗೆ ಈ ವಿಷಯ ರಾಷ್ಟ್ರಾಧ್ಯಕ್ಷರನ್ನು ತಲುಪಿದರೂ ಅವರು ಜಪಾನ್ ದೊರೆಗೆ ವೈಯಕ್ತಿಕ ಸಂದೇಶವೊಂದನ್ನಷ್ಟೇ ಕಳಿಸಿ ಪ್ರತಿಕ್ರಿಯೆ ಬರುವ ತನಕ ಕಾಯೋಣ ಎಂದು ನಿರ್ಧರಿಸುತ್ತಾರೆ.

  ಡಿಸೆಂಬರ್ 7ರ ಬೆಳಗ್ಗೆ ವಾಷಿಂಗ್ಟನ್ ನಲ್ಲಿ ಬ್ರಾಟ್ಟನ್ ರಾತ್ರಿಯೆಲ್ಲ ಕಾದಿದ್ದು ಕೊನೆಗೆ ಬಂದ ಸಂದೇಶದ 14ನೆ ಭಾಗದ ತಿರುಳು,”ರಾಯಭಾರಿಗಳು ದಯವಿಟ್ಟು ತಮಗೆ ದೊರಕುವ ಟೋಕಿಯೋದ ಪ್ರತ್ಯುತ್ತರದ ಸಂದೇಶವನ್ನು ಡಿಸೆಂಬರ್ 7 ಸರಿಯಾಗಿ 1 ಗಂಟೆಗೆ ಅಮೇರಿಕಾ ಸರ್ಕಾರಕ್ಕೆ ಸಲ್ಲಿಸತಕ್ಕದ್ದು” ಎಂದು ಕ್ರೆಮರ್ ಗೆ ಕರೆಮಾಡಿ ತಿಳಿಸುತ್ತಾನೆ. ಜಪಾನ್ ನಲ್ಲಿ ಅಧ್ಯಕ್ಷ ರೂಸವೆಲ್ಟ್ ಕಳಿಸಿದ ಸಂದೇಶ ಹಿಡಿದು ಜಪಾನ್ ನ ವಿದೇಶ ಮಂತ್ರಿ ಆಗಿನ ಪ್ರಧಾನ ಮಂತ್ರಿ ಹಿದೇಕಿ ತೊಜೊ ಬಳಿ ಅದಕ್ಕೆ ಪ್ರತ್ಯುತ್ತರ ಕೇಳಲು ಬರುತ್ತಾನೆ. ಅದಕ್ಕೆ ತೊಜೊ ಶಾಂತಿ ಮೂಡಲು ಕಾಲ ಮಿಂಚಿಹೋಗಿದೆ, ಯುದ್ಧ ಆಗಿಯೇ ತೀರುವುದು ಎನ್ನುವ ಧಾಟಿಯಲ್ಲಿ ಮಾತನಾಡಿ ಆ ಸಂದೇಶವನ್ನು ದೊರೆಗಳಿಗೆ ತಲುಪಿಸಿ ಸುಮ್ಮನಿರಲು ಹೇಳುತ್ತಾನೆ. ಇತ್ತ ಅಮೆರಿಕಾದಲ್ಲಿ ಟೊಕಿಯೋದಿಂದ ತನ್ನ ರಾಯಭಾರಿ ಕಚೇರಿಗೆ ಸಂದೇಶದ 14ನೆ ಭಾಗ ಪಡೆದ ನಂತರ ಎಲ್ಲ ಕೋಡ್ ಮೆಷಿನ್ ಮತ್ತು ಗುಪ್ತ ಕಡತಗಳನ್ನು ಧ್ವಂಸಮಾಡಲು ಆದೇಶ ಬರುತ್ತದೆ. ಇದನ್ನು ಓದಿದ ಬ್ರಾಟ್ಟನ್ ತಕ್ಷಣವೇ ಅದನ್ನು ಅನುವಾದಿಸಿ ಆರ್ಮಿ ಚೀಫ್ ಆಫ್ ಸ್ಟಾಫ್ ಮಾರ್ಷಲ್ ಗೆ ತಿಳಿಸಲು ಹೊರಡುತ್ತಾನೆ. ಅದರ ಇನ್ನೊಂದು ನಕಲನ್ನು ಕ್ರೆಮರ್ ಬಂದ ನಂತರ ಆತನಿಗೆ ಕೊಡಲು ಸಹಾಯಕನಿಗೆ ಹೇಳಿ ಹೊರಡುತ್ತಾನೆ. ಜಪಾನ್ ನೌಕಾ ಸೇನೆಯ ಪರ್ಲ್ ಹಾರ್ಬರ್ ದಾಳಿಗೆ ನಿಯೋಜನೆಗೊಂಡ ಎಲ್ಲ ಪೈಲೆಟ್ ಗಳು ತಮ್ಮ ಹಡಗುಗಳಲ್ಲಿ ಹೊರಡುವ ಮುನ್ನ ತಮ್ಮೆಲ್ಲ ತಯಾರಿಗಳನ್ನು ಮುಗಿಸಿಕೊಳ್ಳುತ್ತಾರೆ. ಜಪಾನ್ ರಾಯಭಾರಿ ಕಚೇರಿಯಲ್ಲಿ ಇನ್ನೂ 14ನೆ ಭಾಗದ ಸಂದೇಶವನ್ನು ಮಾತ್ರ ಬಿಡಿಸಿ ಓದುತ್ತಲೇ ಇರುತ್ತಾರೆ. ಕ್ರೆಮರ್ ಕಚೇರಿಗೆ ಬಂದ ನಂತರ ಗುಪ್ತ ಸಂದೇಶವನ್ನು ಪಡೆದು ನೇವಲ್ ಆಪರೇಷನ್ಸ್ ನ ಚೀಫ್, ಅಡ್ಮಿರಲ್ ಹಾರಲ್ಡ್ ಸ್ಟಾರ್ಕ್ ಗೆ ಮುಟ್ಟಿಸುತ್ತಾನೆ. ಸ್ಟಾರ್ಕ್ ತಕ್ಷಣವೇ ಈ ಮಾಹಿತಿಯನ್ನು ಹವಾಯಿ ದ್ವೀಪದ ಮುಖ್ಯಸ್ಥ ಅಡ್ಮಿರಲ್ ಕಿಮ್ಮೆಲ್ ಗೆ ತಿಳಿಸದೆ ಅಧ್ಯಕ್ಷ ರೂಸವೆಲ್ಟ್ ಗೆ ತಿಳಿಸಿ ಮುಂದಿನ ನಡೆ ನಡೆಸುವುದಾಗಿ ಕೂರುತ್ತಾನೆ.

  ಇಷ್ಟು ಹೊತ್ತಿಗಾಗಲೇ ಪರ್ಲ್ ಹಾರ್ಬರ್ ದಾಳಿ ಆಗಲು ಬೇಕಿರುವ ಎಲ್ಲ ಘಟನೆಗಳೂ ಆಗಿಹೋಗಿರುತ್ತವೆ. ಬ್ರಾಟ್ಟನ್ ಕೊಟ್ಟ ಮಾಹಿತಿ ಆಧರಿಸಿ ಆರ್ಮಿ ಚೀಫ್ ಮಾರ್ಷಲ್ ಒಂದು ತುರ್ತು ಫುಲ್ ಅಲರ್ಟ್ ಸಂದೇಶ ಬರೆದು ಅದನ್ನು ಮಾಹಿತಿ ರವಾನೆ ಕೇಂದ್ರಕ್ಕೆ ಕೊಟ್ಟು ಎಲ್ಲ ಸ್ಟೇಷನ್ ಗಳಿಗೆ ರೇಡಿಯೋ ಮೂಲಕ ತಲುಪಿಸಲು ಹೇಳುವಂತೆ ಬ್ರಾಟ್ಟನ್ ಗೆ ಆದೇಶಿಸುತ್ತಾನೆ. ಇದನ್ನು ಹಿಡಿದು ಬ್ರಾಟ್ಟನ್ ಕಮ್ಯುನಿಕೇಷನ್ಸ್ ಸೆಂಟರ್ ಗೆ ಹೋದಾಗ  ಅದರ ಮುಖ್ಯಸ್ಥ ಆರ್ಮಿ ಚೀಫ್ ರ ಬರವಣಿಗೆ ಅರ್ಥವಾಗುತ್ತಿಲ್ಲ ಹಾಗಾಗಿ ಕಳಿಸಲು ಬರುವುದಿಲ್ಲ ಎಂದಾಗ, ಬ್ರಾಟ್ಟನ್ ಅಲ್ಲಿಯೇ ಕುಳಿತು ಅದರಲ್ಲಿದ್ದನ್ನೆಲ್ಲ ಟೈಪ್ ಮಾಡಿಕೊಟ್ಟು ಹೊರಡುತ್ತಾನೆ. ಈ ಸಂದೇಶವನ್ನು ರೇಡಿಯೋ ಮೂಲಕ ಹವಾಯಿ ದ್ವೀಪಕ್ಕೆ ಕಳಿಸಲು ಹವಾಮಾನ ವೈಪರೀತ್ಯದಿಂದ ಆಗುತ್ತಿಲ್ಲ ಎಂದು ಕಿರಿಯ ಅಧಿಕಾರಿಯೋರ್ವ ಹೇಳಿದಾಗ ಅದನ್ನು ಟೆಲಿಗ್ರಾಂ ಮೂಲಕ ಕಳಿಸುವಂತೆ ಮುಖ್ಯಸ್ಥ ಆದೇಶಿಸುತ್ತಾನೆ. ಆದರೆ ಆ ಟೆಲಿಗ್ರಾಂಅನ್ನು ‘ಅರ್ಜೆಂಟ್’ ಎಂದು ಗುರುತು ಮಾಡದೆ ಕಳುಹಿಸುತ್ತಾನೆ. ಇದರೊಳಗಿನ ಮಹತ್ವ ತಿಳಿಯದ ಉಳಿದ ಕೆಲಸಗಾರರು ಅದನ್ನು ಲಕೋಟೆಯಲ್ಲಿಟ್ಟು ಮುಂದಿನ ಸಂದೇಶ ರವಾನೆಕಾರ ಬಂದಾಗ ಕೊಡಲು ತೆಗೆದಿಡುತ್ತಾರೆ. ಬೆಳಗಿನ ಜಾವ ರೇಡಾರ್ ಅನ್ನು ನೋಡುತ್ತಾ ಕೂತ ಇಬ್ಬರು ಅಧಿಕಾರಿಗಳು ದ್ವೀಪದೆಡೆಗೆ ಬರುತ್ತಿರುವ ಎರಡು ದೊಡ್ಡ ಚಿಕ್ಕೆಗಳನ್ನು(ಜಪಾನ್ ಯುದ್ಧ ವಿಮಾನಗಳ ಎರಡು ದೊಡ್ಡ ಗುಂಪು) ನೋಡಿ ಹೆಡ್ ಕ್ವಾರ್ಟರ್ಸ್ ಗೆ ಮಾಹಿತಿ ತಲುಪಿಸಿದರೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳದಿರಲು ಅಲ್ಲಿಂದ ಆದೇಶ ಬರುತ್ತದೆ. ಬೆಳಗಾಗುತ್ತಿದ್ದಂತೆ ತನ್ನ ವಿಮಾನದ ರೇಡಿಯೋದಲ್ಲಿ ಹವಾಯಿ ದ್ವೀಪದ ರೇಡಿಯೋ ಸಂಗೀತ ಕೇಳುತ್ತ ದ್ವೀಪಕ್ಕೆ ಸಮೀಪಿಸುವ ಫುಚಿದ ಮತ್ತು ಅವನ ನೇತೃತ್ವದ ಗುಂಪು ತನ್ನ ಕಮ್ಯಾಂಡ್ ಗೆ “ಟೊರ, ಟೊರ, ಟೊರ” ಎನ್ನುವು ಗುಪ್ತ ಸಂದೇಶ ಕಳಿಸುವ ಮೂಲಕ ತಾವು ದಾಳಿ ಪ್ರಾರಂಭಿಸುತ್ತಿದ್ದೇವೆ ಎಂದು ಮಾಹಿತಿ ಕಳಿಸುತ್ತಾರೆ. ಚದುರಿದ ಜೇನುಹುಳುಗಳ ಗುಂಪಂತೆ ಜಪಾನ್ ನ ಯುದ್ಧ ವಿಮಾನಗಳು ದ್ವೀಪದ ಎಲ್ಲರನ್ನೂ ಎಚ್ಚರಿಸುವಂತೆ ಸದ್ದು ಮಾಡುತ್ತಾ ಪರ್ಲ್ ಹಾರ್ಬರ್ ಬಂದರಿನ ಮೇಲೆ ದಾಳಿ ಪ್ರಾರಂಭಿಸುತ್ತವೆ. ದಾಳಿ ಇಂದು ಆಗುವುದೋ ನಾಳೆ ಆಗುವುದೋ ಎಂದು ಎದುರುನೋಡುತ್ತಿದ್ದ ಅಡ್ಮಿರಲ್ ಕಿಮ್ಮೆಲ್ ತನ್ನ ಮನೆಯ ಅಂಗಳದಿಂದ ಪರ್ಲ್ ಹಾರ್ಬರ್ ಮೇಲೆ ನಡೆಯುತ್ತಿರುವ ದಾಳಿ ನೋಡಿ ಅಲ್ಲೇ ಅವಾಕ್ಕಾಗಿ ನಿಲ್ಲುತ್ತಾನೆ. ಗುಪ್ತ ಸಂದೇಶ ಬಿಡಿಸಿ ಸೆಕ್ರೆಟರಿ ಹಲ್ ಗೆ ಎಲ್ಲ ಸಂಬಂಧ ಕಡೆದುಕೊಳ್ಳುತ್ತಿರುವುದರ ಬಗ್ಗೆ ಹೇಳಲು ನೋಮುರ ಎರಡು ಗಂಟೆಗೆ ಬರುತ್ತಾನೆ. ಅಷ್ಟು ಹೊತ್ತಿಗಾಗಲೇ ಪರ್ಲ್ ಹಾರ್ಬರ್ ಮೇಲೆ ದಾಳಿಯಾಗಿರುವ ಬಗ್ಗೆ ಹಲ್ ಗೆ ಮಾಹಿತಿ ಬಂದಿರುತ್ತದೆ. ಔಪಚಾರಿಕವಾಗಿ ನೋಮುರನಿಂದ ಕಡತಗಳನ್ನು ಪಡೆದು ಹೊರಡುವಂತೆ ಹೇಳುತ್ತಾನೆ. ಅಡ್ಮಿರಲ್ ಕಿಮ್ಮೆಲ್ ಕಚೇರಿಗೆ ಮರಳಿ ದಾಳಿಯ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಪ್ರತಿಕ್ರಿಯೆಯನ್ನು ನಿರ್ದೇಶಿಸುತ್ತಾನೆ. ದಾಳಿ ಪ್ರಾರಂಭಿಸಿದ ಮೇಲೆ ಬರುವ ಎಚ್ಚರಿಕೆ ಸಂದೇಶ ನೋಡಿ ತನ್ನ ಕಿರಿಯ ಅಧಿಕಾರಿಗಳಿಗೆ ಅದನ್ನು ಓದಿ ಸುಮ್ಮನಾಗುತ್ತಾನೆ. ಪರ್ಲ್ ಹಾರ್ಬರ್ ನಲ್ಲಿ ವಿಮಾನವಾಹಕ ಹಡಗುಗಳು ಇಲ್ಲದ್ದರಿಂದ ಇನ್ನೂ ದಾಳಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದು ವೈಸ್ ಅಡ್ಮಿರಲ್ ನಗುಮೊ ನಿರ್ಧರಿಸಿ ಯುದ್ಧ ವಿಮಾನಗಳು ದಾಳಿಯಿಂದ ಮರಳುತ್ತಿದ್ದಂತೆ ಹಡಗುಗಳು ಜಪಾನ್ ಗೆ ಮರಳುವಂತೆ ಆದೇಶಿಸುತ್ತಾನೆ. ತನ್ನ ಕಚೇರಿಯಲ್ಲಿ ಬರುತ್ತಿದ್ದ ಮಾಹಿತಿಯನ್ನೆಲ್ಲ ಆಲಿಸುತ್ತ ಕುಳಿತಿದ್ದ ಯಾಮಾಮೋಟೋ ದಾಳಿ ಯಶಸ್ವಿಯಾಯಿತು ಎಂದು ಎಲ್ಲ ಹರ್ಷ ವ್ಯಕ್ತಪಡಿಸಿದಾಗ, ಜಪಾನ್ ನ ಈ ದಾಳಿ ಅಮೆರಿಕದಂತ ಮಲಗಿದ್ದ ದೈತ್ಯನನ್ನು ಎಬ್ಬಿಸಿ ಅದರಲ್ಲಿ ಹೋರಾಡುವ ಛಲ ತುಂಬಿದೆ ಎಂದು ಹೇಳುತ್ತಾನೆ. ಹೊರಗೆ ಬಂದು ಸಾಗರದ ಅಲೆಗಳನ್ನು ನೋಡುತ್ತಾ ಮುಂದಾಗಲಿರುವ ಕೋಲಾಹಲದ ಭವಿಷ್ಯವನ್ನು ನೋಡುತ್ತಿರುವಂತೆ ಮೂಕನಾಗಿ ನಿಲ್ಲುತ್ತಾನೆ.

 ಈ ಚಿತ್ರವನ್ನು ಅತಿಯಾಗಿ ನಾಟಕೀಯಗೊಳಿಸಿಲ್ಲ, ಅಬ್ಬರವಿಲ್ಲ. ಹಾಗಾಗಿ ಸಂಭಾಷಣೆ ಆಧಾರಿತ ಚಿತ್ರಗಳಂತೆ ಇಲ್ಲಿ ಉದ್ದುದ್ದದ ಸಂಭಾಷಣೆಗಳು ಕಾಣಸಿಗುವುದಿಲ್ಲ. ಆದರೆ ಐತಿಹಾಸಿಕವಾಗಿ ದಾಳಿಯ ಪೂರ್ವಾಪರ ನಡೆದ ಎಲ್ಲ ಘಟನೆಗಳನ್ನು ಸೆರೆ ಹಿಡಿಯುವಲ್ಲಿ ಚಿತ್ರ ಯಶಸ್ವಿಯಾಗಿದೆ. 1970 ರ ಚಿತ್ರವಾದ್ದರಿಂದ ಗ್ರಾಫಿಕ್ಸ್ ಬಳಸದೆ ಸ್ಟಂಟ್ ಗಳನ್ನು ಅದೂ ಇಷ್ಟು ದೊಡ್ಡ ಮಟ್ಟದಲ್ಲಿ ಮಾಡಿರುವುದು ಶ್ಲಾಘನೀಯ. ಎಲ್ಲದಕ್ಕಿಂತ ಹೆಚ್ಚಾಗಿ ಐತಿಹಾಸಿಕ ಘಟನೆಗಳನ್ನು ಕಥೆಗೆ ತಕ್ಕಂತೆ ತಿರುಚದೆ, ಕಥೆಯನ್ನು ಐತಿಹಾಸಿಕ ಘಟನೆಗಳಿಗೆ ಬದ್ಧವಾಗಿ ರಚಿಸಿರುವುದು ಉಳಿದ ಚಿತ್ರಗಳಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ. ಯೂಟ್ಯೂಬ್ ನಲ್ಲಿ ‘History Buffs’ ಎಂಬ ಚಾನೆಲ್ ಇದೆ. ಅದರಲ್ಲಿ ಐತಿಹಾಸಿಕ ಚಿತ್ರಗಳನ್ನು ವಿಮರ್ಶೆ ಮಾಡಲಾಗುತ್ತದೆ. ಈ ಚಿತ್ರದಲ್ಲಿನ ಐತಿಹಾಸಿಕ ಸಂಗತಿಗಳ ಬಗ್ಗೆ ಆ ಚಾನೆಲ್ ನಲ್ಲಿ ಇನ್ನೂ ವಿಸ್ತೃತವಾಗಿ ಹೇಳಲಾಗಿದೆ. ಇಷ್ಟಪಟ್ಟವರು ಅದನ್ನೂ ನೋಡಬಹುದು.


  ಈ ಚಿತ್ರದಲ್ಲಿ ಪರ್ಲ್ ಹಾರ್ಬರ್ ಬಂದರಿನ (40 ಅಡಿಗಳ) ಆಳದ ಬಗ್ಗೆ ಮತ್ತು ಆಗ ಚಾಲ್ತಿಯಲ್ಲಿದ್ದ (75 ಅಡಿಗಳಿಗೂ ಹೆಚ್ಚು ಆಳಕ್ಕೆ ಧುಮುಕುವ) ಟಾರ್ಪಿಡೋಗಳ ಬಗ್ಗೆ ಮಾತನಾಡಿದರೂ, ಜಪಾನಿಗಳು ಹೇಗೆ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರು ಎನ್ನುವುದನ್ನು ತಿಳಿಸುವುದಿಲ್ಲ. ಜಪಾನಿಗಳು ತಾವು ಆಗ ಉಪಯೋಗಿಸುತ್ತಿದ್ದ (ಟೈಪ್ 91 ಥಂಡರ್ ಫಿಶ್) ಏರಯಲ್ ಟಾರ್ಪಿಡೋಗಳ ಬಾಲಕ್ಕೆ ಮರದ ರೆಕ್ಕೆಗಳನ್ನು ಜೋಡಿಸುವುದರ ಮೂಲಕ (ಮಾಡಿಫಿಕೇಶನ್ 2) ಟಾರ್ಪಿಡೋಗಳು ನೀರಿಗೆ ಬಿದ್ದ ನಂತರ ಹೆಚ್ಚು ಆಳಕ್ಕೆ ಇಳಿಯದೆ ಹಡಗುಗಳತ್ತ ಸಾಗುವಂತೆ ಮಾರ್ಪಾಡುಮಾಡಿಕೊಂಡರು. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಜಾಲತಾಣ ನೋಡಬಹುದು.


  ಜಪಾನ್ ಮತ್ತು ಅಮೇರಿಕಾ ನಡುವಿನ ಯುದ್ಧದ ಬಗ್ಗೆ ಇನ್ನೊಂದು ಒಳ್ಳೆಯ ಜೋಡಿ ಚಿತ್ರ, ‘Flags of our fathers’ ಮತ್ತು ‘Letters from Iwo Jima’. ಎರಡೂ ಚಿತ್ರ ಕ್ಲಿಂಟ್ ಈಸ್ಟ್ ವುಡ್ ನಿರ್ದೇಶಿಸಿದ್ದು ಇವೋ ಜಿಮ ದ್ವೀಪದ ಮೇಲಿನ ಅಮೇರಿಕ ಸೇನೆಯ ದಾಳಿಯ ಬಗ್ಗೆ ಎರಡೂ ದೇಶಗಳ ದೃಷ್ಟಿಕೋನವನ್ನು ಬಿಂಬಿಸುವಂತೆ ಈ ಎರಡು ಚಿತ್ರಗಳನ್ನು ನಿರ್ಮಿಸಲಾಗಿದೆ. ಜಪಾನ್ ಮೇಲಿನ ಅಮೇರಿಕಾ ದಾಳಿಯ ಬಗ್ಗೆ ನಿರ್ಮಿಸಲಾದ ಮಿನಿ- ಸೀರಿಸ್ ‘The Pacific’ ಕೂಡ ನೋಡಬಹುದು. ಆದರೆ ಈ ಎಲ್ಲ ಚಿತ್ರಗಳು ಮತ್ತೆ ಇತಿಹಾಸವನ್ನು ಕೇಂದ್ರವಾಗಿಟ್ಟುಕೊಳ್ಳದೆ ಅದರಲ್ಲಿನ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿತವಾದವು. 

Friday, 24 November 2017

ಲೈಫ್ ಆಫ್ ಬ್ರಯಾನ್







ಎಪ್ಪತರ ದಶಕದಲ್ಲಿ ಇಂಗ್ಲೆಂಡಿನಲ್ಲಿ ಪ್ರಖ್ಯಾತಿ ಪಡೆದಿದ್ದ ಮೊಂಟಿ ಪೈಥಾನ್ ನ ತಂಡ ಬಹಳ ಕಷ್ಟದೊಂದಿಗೆ ಈ ಹಾಸ್ಯ ಚಿತ್ರವನ್ನು ನಿರ್ಮಿಸಿತು. ಆರು ಜನ ಮುಖ್ಯವಾಗಿ ಈ ತಂಡದಲ್ಲಿದ್ದರು- ಗ್ರೆಹಾಂ ಚಾಪ್ಮನ್, ಟೆರ್ರಿ ಜೋನ್ಸ್, ಟೆರ್ರಿ ವಿಲಿಯಮ್ಸ್, ಜಾನ್ ಕ್ಲೀಸ್, ಎರಿಕ್ ಐಡಲ್ ಮತ್ತು ಮೈಕಲ್ ಪೇಲಿನ್. ಇವರು ಈ ಚಿತ್ರದ ಮುನ್ನ ಮೊಂಟಿ ಪೈಥಾನ್ ನ ಫ್ಲೈಯಿಂಗ್ ಸರ್ಕಸ್(Monty Python’s Flying Circus) ಎಂಬ ಹಾಸ್ಯ ಪ್ರಹಸನಗಳ ಮಾಲಿಕೆಯನ್ನ ಬಿಬಿಸಿ ಟಿವಿಗಾಗಿ ಮಾಡಿ ಪ್ರಸಿದ್ಧರಾಗಿದ್ದರು. ಹಾಸ್ಯ ಮಾಡುವಾಗ ಯಾರನ್ನಾದರೂ ಹಾಸ್ಯ ಮಾಡಬಹುದಾದಂತಹ ಸ್ವಾತಂತ್ರ್ಯ ಒಬ್ಬ ಕಲಾವಿದನಿಗಿರಬೇಕು. ಆಗಷ್ಟೇ ಆತನ ಹಾಸ್ಯದ ಸಂಪೂರ್ಣ ಲಾಭ ಮತ್ತು ಮನರಂಜನೆ ನೋಡುಗರದ್ದಾಗುತ್ತದೆ. ಪೊಲಿಟಿಕಲ್ ಕರೆಕ್ಟ್ ನೆಸ್ ಎಂಬ ದೊಡ್ಡ ಪೆಡಂಭೂತ ಇನ್ನೂ ಕಾಲಿರಿಸದಿದ್ದ ಕಾಲದಲ್ಲಿ ರೂಪುಗೊಂಡ ಒಂದು ಅದ್ಭುತ ಹಾಸ್ಯ ಚಿತ್ರವಿದು. ವಿಪರ್ಯಾಸವೆಂದರೆ ಧರ್ಮ, ಸಿದ್ಧಾಂತ ಮತ್ತು ವ್ಯಕ್ತಿಗಳ ಬಗೆಗಿನ ಹಾಸ್ಯ ಇಂದು ಮುಟ್ಟಬಾರದಂತಹ ವಿಷಯಗಳು. ಎಂತಹ ಸಪ್ಪೆ ಮತ್ತು ನೀರಸ ಕಾಲ ನಮ್ಮದು.
 
  ಏಸುವಿನ ಕಥೆ ಬಹುತೇಕ ಎಲ್ಲರಿಗೂ ಪರಿಚಿತ. ಆತ ಹುಟ್ಟಿದ್ದು, ಬೆಳೆದದ್ದು, ಕ್ರಿಶ್ಚಿಯಾನಿಟಿ ಹುಟ್ಟು ಹಾಕಿದ್ದು ಮತ್ತು ಕೊನೆಗೆ ಶಿಲುಬೇಗೇರಿದ್ದು ಎಲ್ಲವೂ ಕೇಳಿರುವ ಕಥೆಗಳು. ಆದರೆ ಆತ ಹುಟ್ಟಿದ ದಿನದಂದೇ ಆತನ ಪಕ್ಕದ ಮನೆಯಲ್ಲಿ ಹುಟ್ಟಿದವನೇ ಈ ಕಾಲ್ಪನಿಕ ಬ್ರಯಾನ್. ಆತನ ಜೀವನ ಕಥೆಯೇ ಲೈಫ್ ಆಫ್ ಬ್ರಯಾನ್. ಏಸು ಹುಟ್ಟಿದ ದಿನದಂದು ಮೂರು ರಾಜರು ಏಸುವಿಗೆ ಕಾಣಿಕೆಯನ್ನಿತ್ತರು. ಆದರೆ ಅಲ್ಲಿಗೆ ಬರುವ ಮುನ್ನ ಆ ಮೂವರು ಬ್ರಯಾನ್ ಮನೆಗೆ ಹೋಗಿ ಅವನೇ ಏಸುವೆಂದು ಕಾಣಿಕೆ ನೀಡುತ್ತಾರೆ ಮತ್ತು ಆತ ಬೆಳೆದು ತನ್ನ ಜನರೆಲ್ಲರಿಗೂ ದೊಡ್ಡ ನಾಯಕನಾಗುತ್ತಾನೆ ಎಂದು ಭವಿಷ್ಯ ನುಡಿದು ಹೊರಗೆ ಹೋಗಿ ನೋಡಿ ನಿಜವಾದ ಏಸುವಿನ ಮನೆ ಸಿಕ್ಕ ಮೇಲೆ ಮತ್ತೆ ಬ್ರಯಾನ್ ಬಳಿಗೆ ಬಂದು ಕೊಟ್ಟ ಉಡುಗೊರೆಗಳನ್ನೆಲ್ಲ ವಾಪಸ್ ಪಡೆದು ಹೋಗುತ್ತಾರೆ. ಇದು ಚಿತ್ರ ತೆರೆಯುವ ರೀತಿ. ಇದರ ನಂತರ ಸಿನೆಮಾದ ಕ್ರೆಡಿಟ್ಸ್ ಜೊತೆಗೆ ಪರಿಚಯ ಗೀತೆ. ಈ ಗೀತೆ ನೀವು ಪೂರ್ತಿ ಕೇಳಬೇಕು. ಒಂದು ಪರಿಚಯ ಹಾಡನ್ನು ಯಾವ ವಿಶೇಷ ಪದಪ್ರಯೋಗವಿಲ್ಲದೆ ಹಾಸ್ಯಮಯವಾಗಿಸುವ ಬಗೆ ಬಹಳ ಚೆನ್ನಾಗಿದೆ.


  ಈಗ ಕಾಲ 33A.D. ಜುದೇಯ(Judea) ದೇಶದಲ್ಲಿ ಏಸು ಕ್ರೈಸ್ತ ಮತದ ಬಗ್ಗೆ ಎಲ್ಲೆಡೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾನೆ. ಹೀಗೆ ಒಂದು ಶನಿವಾರದ ಮಧ್ಯಾಹ್ನ ಆತನ ಸರ್ಮನ್ ಕೇಳುತ್ತ ಜನ ನಿಂತಿರಬೇಕಾದರೆ ಬ್ರಯಾನ್ ತನ್ನ ಅಮ್ಮನೊಂದಿಗೆ ದೂರದಲ್ಲಿ ಅಷ್ಟು ಸರಿಯಾಗಿ ಕೇಳದ ಜಾಗದಲ್ಲಿ ಬಂದು ನಿಂತು ಕೇಳಲು ಪ್ರಯತ್ನಿಸುತ್ತಾನೆ. ಆದರೆ ಆತನ ಅಮ್ಮನಿಗೆ ಸ್ಟೋನಿಂಗ್ ಗೆ(ಬಹಿರಂಗವಾಗಿ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ)  ಹೋಗಬೇಕೆಂಬ ಆಸೆ. ಬ್ರಯಾನ್ ಗೆ ಆತ ಏನು ಹೇಳುತ್ತಿದ್ದಾನೆ ಎಂದು ಕೇಳಬೇಕೆನ್ನುವ ಆಸೆ. ಆದರೆ ಅವನ ಸುತ್ತಲಿದ್ದ ಜನ ಮಾಡಿಕೊಳ್ಳುವ ಚಿಲ್ಲರೆ ಜಗಳದಿಂದ ಏನೂ ಕೇಳಿಸದೆ ಬೇಸತ್ತು ಅಮ್ಮನೊಟ್ಟಿಗೆ ಸ್ಟೋನಿಂಗ್ ಗೆ ಹೋಗುತ್ತಾನೆ. ಅಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ. ಆದರೆ ಈ ನಿಯಮವನ್ನು ಪಾಲಿಸದ ಹೆಂಗಸರು ಗಡ್ಡ ತೊಟ್ಟು ಗಂಡಸರಂತೆ ಕಲ್ಲು ಮಾರುವವನ ಬಳಿ ಕಲ್ಲು ಕೊಂಡುಕೊಂಡು ಬಂದು ಕಲ್ಲು ಹೊಡೆಯುವುದು ಎಂದಿನ ಪ್ರಹಸನ. ಕಲ್ಲು ಮಾರುವವನೂ ಕಲ್ಲು ಮಾರಲು ಅವುಗಳನ್ನು ಬಣ್ಣಿಸಿ ಅದರಲ್ಲಿ ಎಂತಹ ಕುಸುರಿ ಕೆಲಸವಿದೆ ನೋಡಿ ಎಂದೆಲ್ಲ ಪುಸಲಾಯಿಸುತ್ತಾನೆ. ಯಾರೋ ಓರ್ವ ಬಡಪಾಯಿಗೆ ಅನಗತ್ಯವಾಗಿ ದೇವರ ಹೆಸರನ್ನು ಬಳಸಿದ ಎಂಬ ಕಾರಣಕ್ಕೆ ಈ ಶಿಕ್ಷೆ. ಹೆಂಗಸರೆಲ್ಲ ಕಲ್ಲು ಹೊಡೆಯಲು ಕಾತರರಾಗಿರುತ್ತಾರೆ ಆದರೆ ಶಿಕ್ಷೆ ಜಾರಿ ಮಾಡುವವ ನಿಧಾನ ಮಾಡುವುದನ್ನು ತಾಳಲಾರದೆ ಹೆಂಗಸರೆಲ್ಲ ಸೇರಿ ಅವನ ಮೇಲೆಯೇ ಕಲ್ಲು ಎತ್ತಿ ಹಾಕಿ ಸಾಯಿಸುತ್ತಾರೆ. ಇಂತಹ ಅನೇಕ ಇತಿಹಾಸದ ನೈಜ ಘಟನೆಗಳು, ಪದ್ಧತಿಗಳ ಬಗ್ಗೆ ಚಿತ್ರ ಹಾಸ್ಯ ಮಾಡುತ್ತದೆ.

  ಮನೆಗೆ ಬಂದ ಮೇಲೆ ರೋಮನ್ ಸೈನಿಕನೋರ್ವ ತಮ್ಮ ಮನೆಯಲ್ಲಿ ಇದ್ದದ್ದು ಕಂಡು ಕೋಪಗೊಳ್ಳುವ ಬ್ರಯಾನ್ ಗೆ ಸಮಾಧಾನ ಹೇಳುವ ಆತನ ತಾಯಿ ಆತ ಓರ್ವ ರೋಮನ್ ಸೆಂಚೂರಿಯನ್ ನ ಮಗ ಆದರೆ ಆ ಸೆಂಚೂರಿಯನ್ ತನ್ನನ್ನು ಪ್ರೀತಿಸಿ ಕೈಕೊಟ್ಟ ಎಂದು ತನ್ನ ಗುಟ್ಟನ್ನು ಹೇಳುತ್ತಾಳೆ. ಹಾಗಾಗಿ ಬ್ರಯಾನ್ ರೋಮನ್ ರನ್ನು ಅಷ್ಟು ಬೈಯುವುದರಲ್ಲಿ ಅರ್ಥವಿಲ್ಲ ಏಕೆಂದರೆ ಆತನೂ ರೋಮನ್ ಎಂದು ಆತನ ತಾಯಿ ಅಂದದ್ದಕ್ಕೆ ಆತ ತಾನೆಂದೂ ಒಬ್ಬ ಯಹೂದಿಯೇ, ಎಂದೆಂದಿಗೂ ರೋಮನ್ ಆಗಲಾರ ಎಂದು ಸಿಟ್ಟು ಮಾಡಿಕೊಂಡು ಕೋಣೆ ಸೇರುತ್ತಾನೆ. 
  
  ಒಂದು ದಿನ ರೋಮನ್ ಕಾಲೋಸ್ಸಿಯಂನಲ್ಲಿ ಗ್ಲಾಡಿಯೇಟರ್ ಗಳ ಕಾಳಗ ನಡೆಯುತ್ತಿದ್ದ ವೇಳೆ ಬ್ರಯಾನ್ ವೀಕ್ಷಕರಿಗೆ ತಿನ್ನಲು ವಿಧವಿಧದ ತಿಂಡಿಗಳನ್ನು ಮಾರುತ್ತಿರುತ್ತಾನೆ. ಅಲ್ಲೇ ತಾನು ಹಿಂದೆ ನೋಡಿದ ಹೆಣ್ಣೊಬ್ಬಳನ್ನು ಕಂಡು ಅವಳಿದ್ದ ಗುಂಪಿನ ಬಳಿ ಹೋಗುತ್ತಾನೆ. ಅವರು ಸಾಮ್ರಾಜ್ಯಶಾಹಿ ವಿರೋಧಿಯಾದ ಪೀಪಲ್ಸ್ ಫ್ರಂಟ್ ಆಫ್ ಜುದೇಯ(ಪಿ.ಎಫ್.ಜೆ) ಎಂಬ ಗುಂಪಿಗೆ ಸೇರಿದವರು ಎಂದು ತಿಳಿದು ತನ್ನನ್ನೂ ಸೇರಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಆ ಗುಂಪು ಒಪ್ಪಿ ಅವನನ್ನು ಸೇರಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ಗ್ಲಾಡಿಯೆಟರ್ ಗಳ ಕಾಳಗದಲ್ಲಿ ಓರ್ವ ಎದುರಾಳಿಗೆ ಓಡಿಸಿ ಓಡಿಸಿಯೇ ಹೃದಯಾಘಾತ ತರಿಸಿ ಸಾಯಿಸಿ ಗೆಲ್ಲುತ್ತಾನೆ. ಆ ಗುಂಪಿನ ನಾಯಕ ರೆಜ್ ಬ್ರಯಾನ್ ಗೆ ಗೋಡೆಗಳ ಮೇಲೆ “ರೋಮನ್ ಮನೆಗೆ ಹೋಗಿ” ಎಂದು ರಾತ್ರಿ ಬರೆಯುವಂತೆ ಕೆಲಸ ಕೊಡುತ್ತಾನೆ. ಹಾಗೆ ಮಾಡಲು ರಾತ್ರಿ ಹೋಗಿ ರೋಮನ್ ರಿಗೆ ಸಿಕ್ಕಿಬಿದ್ದು ಮತ್ತೆ ಅವರಿಂದ ತಪ್ಪಿಸಿಕೊಳ್ಳುತ್ತಿದ್ದಾಗ ಪಿ.ಎಫ್.ಜೆ ಗುಂಪಿನ ಜೂಡಿತ್ ಆತನನ್ನು ರಕ್ಷಿಸಿ ತಮ್ಮ ಅಡಗುತಾಣಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಪಿ.ಎಫ್.ಜೆ ಗುಂಪಿನ ಸದಸ್ಯರು ರೋಮನ್ ಸೀಸರ್ ಪೊಂಟಿಯಸ್ ಪೈಲೇಟ್ ನ ಹೆಂಡತಿಯನ್ನು ಅಪಹರಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉಪಾಯ ಮಾಡುತ್ತಿರುತ್ತಾರೆ. ಎಲ್ಲ ತಯಾರಾಗಿ ಅಪಹರಿಸಲು ರಾತ್ರಿ ಸೀಸರ್ ನ ಅರಮನೆಗೆ ಹೋದಾಗ ಅಲ್ಲಿ ಮತ್ತೊಂದು ಗುಂಪು ಅದೇ ಕೆಲಸಕ್ಕಾಗಿ ಅಲ್ಲಿಗೆ ಬಂದದ್ದು ತಿಳಿದು ಆ ಎರಡೂ ಗುಂಪಿನ ನಡುವೆ ಪೈಲೇಟ್ ನ ಹೆಂಡತಿ ಯಾರಿಗೆ ಸೇರಬೇಕೆಂಬ ವಿಷಯದಲ್ಲಿ  ಜಗಳವಾಗುತ್ತದೆ. ಇದರಿಂದ ಎಚ್ಚೆತ್ತುಕೊಳ್ಳುವ ರೋಮನ್ ಸೈನಿಕರು ಇವರೆಲ್ಲ ಬಡಿದಾಡಿಕೊಂಡು ಬಿದ್ದ ನಂತರ ಉಳಿದ ಬ್ರಯಾನ್ ನನ್ನು ಸೆರೆ ಹಿಡಿದು ಸೆರೆಮನೆಗೆ ತಳ್ಳುತ್ತಾರೆ.


  ಅಲ್ಲಿ ಕೊಂಚ ಕಾಲ ಕಳೆದ ನಂತರ ಸೀಸರ್ ನ ಬಳಿಗೆ ಬ್ರಯಾನ್ ನನ್ನು ಕೊಂಡೊಯ್ಯುತ್ತಾರೆ. ಪೈಲೇಟ್ ಗೆ ‘ರ’ ಅಕ್ಷರ ಉಚ್ಛಾರ ಮಾಡಲು ಬಾರದು. ಆತನ ಈ ‘ರ’ ಇಲ್ಲದ ಮಾತು ಕೇಳಿ ಅಲ್ಲಿ ನೆರೆದಿದ್ದ ಸೈನಿಕರಿಗೆ ಸರಿಯಾಗಿ ಈತ ಹೇಳುವ ಮಾತು ಅರ್ಥವಾಗುವುದಿಲ್ಲ. ಈ ಎಲ್ಲ ಗೊಂದಲದಲ್ಲಿ ಬ್ರಯಾನ್ ಮತ್ತೆ ತಪ್ಪಿಸಿಕೊಳುತ್ತಾನೆ. ರೋಮನ್ ಸೈನಿಕರಿಂದ ತಪ್ಪಿಸಿಕೊಳ್ಳಲು ಗಡ್ಡದ ಅಂಗಡಿಗೆ ಹೋಗಿ ಒಂದು ಗಡ್ಡ ಕೇಳಿ ಅಂಗಡಿಯವ ಹೇಳಿದ ದರ ಕೊಡಲು ಮುಂದಾಗುತ್ತಾನೆ. ಅದಕ್ಕೆ ಒಪ್ಪದ ಅಂಗಡಿಯವ ಚೌಕಾಸಿ ಮಾಡದೆ ತಾನು ಮಾರುವುದಿಲ್ಲ, ಬ್ರಯಾನ್ ಚೌಕಾಸಿ ಮಾಡಿದರೆ ಮಾತ್ರ ಗಡ್ಡ ಕೊಡುವುದಾಗಿ ಪಟ್ಟು ಹಿಡಿಯುತ್ತಾನೆ. ಬ್ರಯಾನ್ ಗೆ ಆ ಪರಿಸ್ಥಿತಿಯಲ್ಲಿ ಸರಿಯಾಗಿ ಚೌಕಾಸಿ ಬರದಿದ್ದನ್ನು ನೋಡಿ ಅಂಗಡಿಯವನೇ ಆತನಿಗೆ ಹೇಗೆ ಚೌಕಾಸಿ ಮಾಡಬೇಕೆಂದು ಹೇಳಿಕೊಡುತ್ತಾನೆ. ಕಡೆಗೆ ಗಡ್ಡದ ಜೊತೆ ಒಂದು ಸೋರೆಕಾಯಿ ಕೊಡುತ್ತಾನೆ. ಅದನ್ನು ಪಡೆದು ಅಂಗಡಿಯವ ಮತ್ತೆ ಚೌಕಾಸಿಯ ಪಾಠ ಹೇಳುವುದರಲ್ಲಿ ಕಾಲು ಕೀಳುತ್ತಾನೆ. ಅಲ್ಲಿಂದ ನೇರವಾಗಿ ಪಿ.ಎಫ್.ಜೆ ಗುಂಪಿನ ಗುಪ್ತ ಮುಖ್ಯ ಕಚೇರಿಗೆ ಹೋಗುತ್ತಾನೆ. ಅಲ್ಲಿಗೆ ಇವನನ್ನು ಬೆನ್ನಟ್ಟಿ ಬರುವ ರೋಮನ್ ಸೈನಿಕರು ಅವರಿದ್ದ ಮನೆ ಬಾಗಿಲಿಗೇ ಬರುತ್ತಾರೆ. ತಕ್ಷಣ ಅಡಗಿಕೊಳ್ಳುವ ಎಲ್ಲರೂ ಮನೆಯ ಒಡೆಯ ಮತ್ತಾಯಸ್ ಸೈನಿಕರಿಗೆ ಮನೆಯನ್ನು ಶೋಧಿಸಲು ಅವಕಾಶ ಕೊಟ್ಟು ಅವರೆಲ್ಲ ಏನೂ ಸಿಗದೆ ವಾಪಸಾದ ಮೇಲೆ ಬ್ರಯಾನ್ ಗೆ ಅವರನ್ನು ನೇರವಾಗಿ ಅಲ್ಲಿಗೆ ಕರೆತಂದದ್ದಕ್ಕೆ ಬಯ್ಯುತ್ತಾರೆ. ಇನ್ನೂ ಮಾತಾಡುತ್ತಿದ್ದಂತೆ ಮತ್ತೆ ಸೈನಿಕರು ಶೋಧಿಸಲು ಬರುತ್ತಾರೆ. ಮತ್ತೆ ಬಚ್ಚಿಟ್ಟುಕೊಳ್ಳುವ ಎಲ್ಲರೂ ಏನೂ ಸಿಗದೆ ಸೈನಿಕರು ಮರಳಿದ್ದನ್ನು ಗಮನಿಸಿ ಇನ್ನೇನು ಹೊರಬರುತ್ತಿದ್ದಂತೆ ಮೂರನೇ ಬಾರಿ ಸೈನಿಕರು ಪ್ರತ್ಯಕ್ಷವಾಗುತ್ತಾರೆ. ಮತ್ತೆ ಎಲ್ಲರೂ ಬಚ್ಚಿಟ್ಟುಕೊಳ್ಳುತ್ತಾರೆ. ಅಷ್ಟರವರೆಗೂ ಬ್ರಯಾನ್ ಬಚ್ಚಿಟ್ಟುಕೊಂಡಿದ್ದ ಕಿಟಕಿಯ ಭಾಗ ಮುರಿದು ಹೊಸ ಧರ್ಮ ಪ್ರಚಾರ ಮಾಡುವವರ ಬೀದಿಗೆ ಬೀಳುತ್ತಾನೆ. ಅವನು ಬಿದ್ದ ಸ್ಥಳದಲ್ಲಿ ಇನ್ನಾರೋ ಇದ್ದದ್ದರಿಂದ ಜನ ಇವನೂ ಧರ್ಮ ಪ್ರಚಾರಕನೇ ಇರಬೇಕೆಂದು ಇವನ ಕಡೆ ನೋಡುತ್ತಾರೆ. ಬ್ರಯಾನ್ ರೋಮನ್ ರಿಂದ ತಪ್ಪಿಸಿಕೊಳ್ಳಲು ಇದು ಸರಿಯಾದ ದಾರಿಯೆಂದು ಅರಿತು ಸುಮ್ಮನೆ ಕಥೆ ಹೇಳುತ್ತಾ ಹೋಗುತ್ತಾನೆ. ಕಥೆಯ ಬಗ್ಗೆ ಪ್ರಶ್ನೆ ಕೇಳಿ ಇವನ ಕಥೆ ಹೇಳುವ ಶೈಲಿ ಇಷ್ಟವಾಗದ ಜನ ಮರಳಿ ಹೋಗುತ್ತಿದ್ದನ್ನು ಮತ್ತು ರೋಮನ್ ಸೇನೆಯ ಪಡೆಯೊಂದು ಅತ್ತಲೇ ಧಾವಿಸುತ್ತಿದ್ದನ್ನು ಗಮನಿಸಿ ಏನೇನೋ ತಡವರಿಸುತ್ತಾನೆ. ಸೈನಿಕರು ಅಲ್ಲಿಂದ ಹೋದ ನಂತರ ತನ್ನ ತಡವರಿಕೆ ನಿಲ್ಲಿಸಿ ತಾನು ನಿಂತಿದ್ದ ಕಟ್ಟೆಯಿಂದ ಕೆಳಗಿಳಿದು ಹೊರಡಲು ಸಿದ್ಧವಾಗುತ್ತಾನೆ. ಇವನು ಮಾತು ಅರ್ಧಕ್ಕೆ ನಿಲ್ಲಿಸಿದ್ದು ಜನರಲ್ಲಿ ಕುತೂಹಲ ಹುಟ್ಟಿಸುತ್ತದೆ. ಜನ ಏನದು ಪೂರ್ತಿ ಹೇಳೆಂದು ಇವನಿಗೆ ದುಂಬಾಲು ಬೀಳುತ್ತಾರೆ. ಏಕೆ ಹೀಗೆ ಪೂರ್ತಿ ಹೇಳದೆ ಗುಟ್ಟು ಮಾಡುತ್ತಿದ್ದಾನೆ ಎಂದು ತಮ್ಮಲ್ಲಿ ತಾವೇ ಇನ್ನಷ್ಟು ಕುತೂಹಲ ಹುಟ್ಟಿಸಿಕೊಂಡು ಇವನು ಮರಣವನ್ನು ಗೆಲ್ಲುವ ಗುಟ್ಟು ತಿಳಿದಿದ್ದಾನೆ ಹಾಗಾಗಿ ಹೇಳುತ್ತಿಲ್ಲ ಎಂದು ತಮ್ಮಲ್ಲೇ ಮಾತಾಡಿಕೊಂಡು ನೋಡನೋಡುತ್ತಿದ್ದಂತೆಯೇ ಆತನನ್ನು ಗುರು ಎಂದು ಕರೆದು ಆತನನ್ನು ಒಂದು ಹಿಂಡು ಜನ ಹಿಂಬಾಲಿಸಲು ಪ್ರಾರಂಭಿಸುತ್ತಾರೆ. ಆತ ಬಿಟ್ಟು ಹೋದ ಸೋರೆಕಾಯಿಯನ್ನು ಪವಿತ್ರ ಎಂದು ಕರೆದು ಅದನ್ನು ಗೌರವಿಸಲು ಮುಂದಾಗುತ್ತಾರೆ. ಈ ಜನರಿಂದ ತಪ್ಪಿಸಿಕೊಂಡು ಓಡುವ ಭರದಲ್ಲಿ ಚಪ್ಪಲಿ ಕಿತ್ತರೂ ಅದನ್ನು ಅಲ್ಲೇ ಬಿಟ್ಟು ಓಡುತ್ತಾನೆ. ಆ ಕಿತ್ತ ಚಪ್ಪಲಿಯನ್ನೂ ತಮ್ಮ ಗುರು ಅದರಲ್ಲಿ ಏನೋ ಸಂಕೇತ ಬಿಟ್ಟಿದ್ದಾನೆಂದು ಅದನ್ನೂ ಗೌರವಿಸುತ್ತಾ ಬ್ರಯಾನ್ ನನ್ನು ಹಿಂಬಾಲಿಸುತ್ತಾರೆ. ಹಾಗೆ ಹಿಂಬಾಲಿಸುವಾಗ ಜನರ ಗುಂಪಿನಲ್ಲಿ ಸೋರೆಕಾಯಿಗೆ ನಡೆಕೊಳ್ಳುವ ಗುಂಪು, ಚಪ್ಪಲಿಗೆ ನಡೆಕೊಳ್ಳುವ ಗುಂಪು, ಇವು ಯಾವಕ್ಕೂ ನಡೆದುಕೊಳ್ಳದ ಗುಂಪು ಹೀಗೆ ಹಲವಾರು ಗುಂಪುಗಳಾಗಿ ಒಡೆದು ಬ್ರಯಾನ್ ನನ್ನು ಹಿಂಬಾಲಿಸುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಒಂದು ಗುಂಡಿಗೆ ಹಾರುವ ಬ್ರಯಾನ್ ಅಲ್ಲಿ ತಪಸ್ಸಿಗೆ ಕೂತಿದ್ದ ಒಬ್ಬ ಮುದುಕನ ಮೇಲೆ ಬೀಳುತ್ತಾನೆ. ಆ ಮುದುಕ ತನ್ನ ತಪೋಭಂಗ ಮಾಡಿದ ಬ್ರಯಾನ್ ಗೆ ಬಯ್ಯುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಜನ ಬ್ರಯಾನ್ ನನ್ನು ಒಂದು ಪವಾಡ ಮಾಡುವಂತೆ ಪೀಡಿಸುತ್ತಾರೆ. ಬ್ರಯಾನ್ ಅದಕ್ಕೆ ಏನೋ ಹೇಳಿದಕ್ಕೆ ಪವಾಡ ಮಾಡಿದ ಎಂದು ಸಂತೋಷ ಪಡುತ್ತಾರೆ. ಅಷ್ಟರಲ್ಲಿ ಮುದುಕ ಬ್ರಯಾನ್ ಮೇಲಿನ ಸಿಟ್ಟಿನಿಂದ ಅವನಿಗೆ ಹೊಡೆಯಲು ಮುಂದಾದಾಗ ಆತ ಒಬ್ಬ ಧರ್ಮವನ್ನು ನಂಬದವನು ಎಂದು ಆ ಮುದುಕನನ್ನು ಅಲ್ಲಿದ್ದ ಜನ ಹೊಡೆದು ಸಾಯಿಸುತ್ತಾರೆ.



  ಇದೆಲ್ಲರದರಿಂದ ತಪ್ಪಿಸಿಕೊಂಡು ಮನೆಗೆ ಬಂದು ಜೂಡಿತ್ ಜೊತೆಗೆ ಇದ್ದ ಬ್ರಯಾನ್ ಬೆಳಗೆದ್ದು ಮನೆ ಮುಂದೆ ರಾಶಿ ರಾಶಿ ಜನ ಸೇರಿದ್ದು ನೋಡಿ ಗಾಬರಿಗೊಳ್ಳುತ್ತಾನೆ. ಅಷ್ಟರಲ್ಲಿ ಮನೆಗೆ ಬರುವ ಆತನ ತಾಯಿ ಈಗ ಇವನು  ಇನ್ನೇನು ಅನಾಹುತ ಮಾಡಿರಬಹುದೆಂದು ಸಿಟ್ಟು ಮಾಡಿಕೊಂಡು ಬ್ರಯಾನ್ ಗೆ ಚೆನ್ನಾಗಿ ಹೊಡೆಯುತ್ತಾಳೆ. ಆಕೆಯನ್ನು ತಡೆಯುವ ಜೂಡಿತ್ ಬ್ರಯಾನ್ ಒಬ್ಬ ಒಳ್ಳೆಯ ನಾಯಕ ಎಂದೆಲ್ಲ ಆತನನ್ನು ಹೊಗಳಲು ಶುರು ಮಾಡುತ್ತಾಳೆ. ಹೊರಗಡೆ ನೆರೆದಿದ್ದ ಜನ ಆತನನ್ನು ನೋಡಲೇಬೇಕೆಂದು ಹಠ ಮಾಡಿದ್ದು ನೋಡಿ ಆತನಿಗೆ ಜನರನ್ನು ನೋಡಲು ಕಳಿಸುತ್ತಾಳೆ. ಜನರಿಗೆ ಬ್ರಯಾನ್ ಎಷ್ಟು ಹೇಳಿದರೂ ಕೇಳದಿದ್ದಾಗ ಬೇಸತ್ತು ಮನೆಯಿಂದ ಹೊರಬಂದರೆ ಮತ್ತೆ ಅಲ್ಲಿ ಜನ. ಕೆಲವರು ಇವನನ್ನು ಬಳಸಿ ಜನರಿಗೆ ದರ್ಶನ ಭಾಗ್ಯ ಕರುಣಿಸಲು ದುಡ್ಡು ಪೀಕುತ್ತಿರುತ್ತಾರೆ. ಇವರಿಂದ ಬೇಜಾರಾಗಿ ಒಂಟಿಯಾಗಿ ಕೂತಿದ್ದಾಗ ರೋಮನ್ ಸೈನಿಕರು ಕಡೆಗೂ ಈತನನ್ನು ಸೆರೆಹಿಡಿದು ಶಿಲುಬೆಗೇರಿಸುವ ಶಿಕ್ಷೆ ಕೊಡುತ್ತಾರೆ. ಪಿ.ಎಫ್.ಜೆ ಯ ಸದಸ್ಯರು ಸುಮ್ಮನೆ ತಮ್ಮ ಕಚೇರಿಯಲ್ಲಿ ಕೂತು ಯೋಜನೆ ಹಾಕುತ್ತ ಕುಳಿತಿದ್ದಾಗ ಜೂಡಿತ್ ಬಂದು ಬ್ರಯಾನ್ ನನ್ನು ಸೆರೆ ಹಿಡಿದ ವಿಷಯ ಹೇಳಿದರೂ ಸದಸ್ಯರು ಬ್ರಯಾನ್ ನನ್ನು ಉಳಿಸಬೇಕೋ ಬೇಡವೋ ಎಂದು ನಿರ್ಣಯ ಕೈಗೊಳ್ಳುವ ಬಗ್ಗೆ ಚರ್ಚಿಸಲು ನಿರ್ಧರಿಸುತ್ತಾರಷ್ಟೇ. ಇವರಿಂದ ಏನೂ ಆಗದು ಎಂದು ಜೂಡಿತ್ ಪೈಲೇಟ್ ವಿಶೇಷ ದಿನವಾದ ಅಂದು ಒಬ್ಬ ಖೈದಿಯನ್ನು ಬಂಧಮುಕ್ತಗೊಳಿಸುತ್ತಾನೆಂದು ತಿಳಿದು ಅವನು ಘೋಷಣೆ ಮಾಡುವ ಸ್ಥಳಕ್ಕೆ ಹೋಗಿ ಬ್ರಯಾನ್ ನನ್ನು ಉಳಿಸಲು ಕೇಳುತ್ತಾಳೆ. ಅದಕ್ಕೆ ಒಪ್ಪುವ ಪೈಲೇಟ್ ಹಾಗೆಯೇ ಆಜ್ಞೆಯನ್ನು ಕೊಡುತ್ತಾನೆ. ಅಷ್ಟರಲ್ಲಿ ಶಿಲುಬೆಗೇರಿಸುವ ಜನರನ್ನು ಶಿಕ್ಷೆ ಕೊಡುವ ಜಾಗಕ್ಕೆ ಕರೆದೊಯ್ದಿರುತ್ತಾರೆ. ಅಲ್ಲಿಗೆ ಬರುವ ಪಿ.ಎಫ್.ಜೆ ಸದಸ್ಯರನ್ನು ನೋಡಿ ತನ್ನನ್ನು ರಕ್ಷಿಸಲು ಬಂದಿದ್ದಾರೆಂದು ಬ್ರಯಾನ್ ಸಂತೋಷಗೊಳ್ಳುತ್ತಾನೆ. ಆದರೆ ಅವರೆಲ್ಲ ಒಂದು ಉದ್ದದ ಭಾಷವನ್ನಷ್ಟೇ ಕೊಟ್ಟು ಅವನು ತಮಗಾಗಿ ಮಾಡುತಿದ್ದ ತ್ಯಾಗವನ್ನು ತಾವೆಲ್ಲ ಮೆಚ್ಚುತ್ತೇವೆಂದು ಹೇಳಿ ಹೊರಟು ಹೋಗುತ್ತಾರೆ. ಕೊನೆಗೂ ಬ್ರಯಾನ್ ರಕ್ಷಿಸಲು ಅಲ್ಲಿಗೆ ಬರುವ ರೋಮನ್ ಸೈನಿಕರು ಬ್ರಯಾನ್ ಯಾರೆಂದು ಕೇಳಿದಾಗ ಯಾರೋ ಒಬ್ಬ ತಮಾಷೆ ಮಾಡಲು ತಾನೇ ಬ್ರಯಾನ್ ಎಂದು ಕೂಗುತ್ತಾನೆ. ಆಗ ಬ್ರಯಾನ್, ಅವನಲ್ಲ ತಾನು ನಿಜವಾದ ಬ್ರಯಾನ್ ಎಂದು ಎಷ್ಟು ಕೂಗಿ ಹೇಳಿದರೂ ಯಾರೂ ಕೇಳದೆ ಅವನನ್ನು ಅಲ್ಲೇ ಬಿಡುತ್ತಾರೆ. ಜೂಡಿತ್ ಅಲ್ಲಿಗೆ ಬಂದು ರೆಜ್ ತನಗೆ ಎಲ್ಲ ಬಿಡಿಸಿ ಹೇಳಿದ್ದು ಬ್ರಯಾನ್ ಮಾಡಲು ಹೊರಟಿದ್ದ ಕೆಲಸವನ್ನು ತಾನು ಶ್ಲಾಘಿಸುವುದಾಗಿ ಹೇಳಿ ಹೊರಟು ಹೋಗುತ್ತಾಳೆ. ಬ್ರಯಾನ್ ತಾಯಿ ಬಂದು ತನ್ನ ಜೀವನದ ಅಂತ್ಯಕಾಲದಲ್ಲಿ ಹೀಗೆ ಬ್ರಯಾನ್ ಬಿಟ್ಟು ಹೋಗುತ್ತಿದ್ದಾನೆಂದು ಚೆನ್ನಾಗಿ ಬೈದು ಹೊರಟು ಹೋಗುತ್ತಾಳೆ. ಎಲ್ಲ ಕಳೆದುಕೊಂಡೆ ಎಂದು ಹತಾಶನಾಗುವ ಬ್ರಯಾನ್ ಗೆ ಮತ್ತೆ ಹುರಿದುಂಬಿಸಲು ಹಿಂದಿನಿಂದ ಒಬ್ಬ ಹಾಡು ಹಾಡಲು ಪ್ರಾರಂಭಿಸುತ್ತಾನೆ, “Always look on the bright side of life”. ಈ ಹಾಡು ಕೇವಲ ಬ್ರಯಾನ್ ಗಷ್ಟೇ ಅಲ್ಲ ನಮಗೆಲ್ಲರಿಗೂ. ಜೀವನದಲ್ಲಿ ಏನೆಲ್ಲಾ ಕಂಡು ಏನೆಲ್ಲಾ ಮಾಡಿ ಕೊನೆಗೆ ಸಾವು ಹತ್ತಿರಾದಾಗ ಹಾಗೆ ಮಾಡಲಿಲ್ಲವಲ್ಲ, ಹೀಗೆ ಆಗಲಿಲ್ಲವಲ್ಲ ಎಂದು ನಮ್ಮನ್ನು ನಾವೇ ಶಪಿಸುತ್ತೇವೆ, ಹತಾಶರಾಗುತ್ತೇವೆ. ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಹೀಗೆ ವ್ಯಥೆ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನುವುದರಲ್ಲಿ ಸತ್ಯವಿದೆ. ನಮ್ಮ ನಾಟಕಕ್ಕೆ ತೆರೆಯೆಳಿಯುವ ಸಮಯ ಬಂದಾಗ ಒಮ್ಮೆ ಪ್ರೇಕ್ಷರೆಡೆಗೆ ಬಾಗಿ ನಮಿಸಿ ಒಂದು ನಗೆ ಕೊಟ್ಟು ನೇಪಥ್ಯಕ್ಕೆ ಸರಿಯಬೇಕು ಎಂದು ಬಹಳ ಸೊಗಸಾಗಿ ಈ ಹಾಡಲ್ಲಿ ಹಾಡಲಾಗಿದೆ. ಆದರೆ ಈ ಹಾಡಲ್ಲೂ ತಮಾಷೆ ಬಿಟ್ಟಿಲ್ಲ. ಹಾಗಾಗಿ ಈ ಹಾಡು ಸದಾ ಕಾಲ ಮನದಲ್ಲಿ ಉಳಿಯುವಂತಹ ಕೆಲವಲ್ಲಿ ಒಂದು.



  ಧರ್ಮವನ್ನು ಟೀಕಿಸುತ್ತ ಅದನ್ನು ಹಿಂಬಾಲಿಸುವ ಭರದಲ್ಲಿ ಮನುಷ್ಯ ಏನೆಲ್ಲಾ ಮಾಡಿ ಕೂರುತ್ತಾನೆ ಎಂದು ಹಾಸ್ಯಮಯವಾಗಿ ಈ ಚಿತ್ರದಲ್ಲಿ ತೋರಿದ್ದಾರೆ. ಹಾಗೆಯೇ ಸುಮ್ಮನೆ ಕ್ರಾಂತಿ ಕ್ರಾಂತಿ ಎಂದು ಒಣ ಸಿದ್ಧಾಂತಗಳನ್ನು ಇಟ್ಟುಕೊಂಡು ಬಡಿದಾಡುವ ಜನರನ್ನೂ ಅಷ್ಟೇ ಆಡಿಕೊಂಡಿದ್ದಾರೆ. ಈ ಚಿತ್ರವನ್ನು ಮಾಡುವಾಗಿನಿಂದಲೂ ಈ ಚಿತ್ರಕ್ಕೆ ಅನೇಕ ತೊಂದರೆಗಳಾದವು. ನಿರ್ಮಾಪಕರು ಬದಲಾದರು. ಚಿತ್ರ ಬಿಡುಗಡೆಗೆ ತೊಂದರೆಯಾಯಿತು. ಐರ್ಲೆಂಡ್ ನಲ್ಲಿ ಈ ಚಿತ್ರವನ್ನು ಸಾಕಷ್ಟು ವರ್ಷ ಬ್ಯಾನ್ ಮಾಡಲಾಗಿತ್ತು. ಇವೆಲ್ಲದರ ನಡುವೆ ಕೂಡ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ಆದರೆ ಅವರಿಗೆ ಎಂದೂ ಜೀವದ ಭಯ ಇರಲಿಲ್ಲ ಅಥವಾ ಅಂತಹ ಸಂದರ್ಭ ಒದಗಲಿಲ್ಲ. ಇದರ ಬಗ್ಗೆ ಪ್ರತಿಭಟನೆ ಮಾಡುವವರು ಟಿವಿಯಲ್ಲಿ ಇವರೊಡನೆ ಚರ್ಚೆಗೆ ಕೂತರು. ಆ ಚರ್ಚೆಗಳನ್ನು ನೋಡಿ ಇನ್ನಷ್ಟು ಜನ ಚಿತ್ರ ನೋಡಲು ಮುಂದಾದರು. ಈ ಚಿತ್ರ ಏಸು ಕ್ರಿಸ್ತನ ಬಗ್ಗೆ ಅಲ್ಲ. ಅದರಲ್ಲಿ ಅವನ ಬಗ್ಗೆ ಟೀಕೆ ಮಾಡಿಲ್ಲ ಎಂದು ಸಾರಿ ಸಾರಿ ಹೇಳಿದ ನಂತರ ಎಲ್ಲವೂ ಸರಿಹೋಯಿತು. ಈ ಚಿತ್ರ ಮಾಡಿದ ಬಗೆಗಿನ ಒಂದು ಡಾಕ್ಯುಮೆಂಟರಿ ಕೂಡ ಇದೆ. ಇಷ್ಟವಿದ್ದವರು ಅದನ್ನೂ ನೋಡಬಹುದು.



ವಿ.ಸೂ: ಚಿತ್ರದಲ್ಲಿ ಭಾಷೆ ಸ್ವಲ್ಪ ಒರಟು ಅನ್ನಿಸಬಹುದು ಮತ್ತು ಒಂದು ನಗ್ನ ದೃಶ್ಯವೂ ಕೆಲವು ಸೆಕೆಂಡುಗಳ ಕಾಲ ಇದೆ. ಇವನ್ನು ಸಹಿಸುವವರಾದರೆ ಇದೊಂದು ಒಳ್ಳೆಯ ಚಿತ್ರ.

ಫನ್ ಫ್ಯಾಕ್ಟ್: ಪೈಥಾನ್ ಕಂಪ್ಯೂಟರ್ ಭಾಷೆಯನ್ನು ಕಂಡುಹಿಡಿದವ ಮೊಂಟಿ ಪೈಥಾನ್ ತಂಡವನ್ನು ಇಷ್ಟಪಡುತ್ತಿದ್ದರಿಂದಲೇ ಅದಕ್ಕೆ ಹಾಗೆ ಹೆಸರಿಟ್ಟ.

-ವಿಶ್ವನಾಥ್

Friday, 10 November 2017

ದಿ ಪಿಯನಿಸ್ಟ್



IMDb: http://www.imdb.com/title/tt0253474/?ref_=nv_sr_1




     ಇಂಗ್ಲಿಶ್ ಸಿನೆಮಾ ನೋಡುವವರಿಗೆ ಚಿರಪರಿಚಿತ ಎನ್ನಬಹುದಾದ ನಿರ್ದೇಶಕ ಸ್ಟಿವೆನ್ ಸ್ಪಿಲ್ಬರ್ಗ್. ಅವರ "ದಿ ಶಿನ್ದ್ಲರ್ಸ್ ಲಿಸ್ಟ್" ಎರಡನೇ ವಿಶ್ವ ಯುದ್ಧದ ಅವಧಿಯಲ್ಲಿ ಯಹೂದಿಗಳ ಮೇಲಾದ ಕ್ರೌರ್ಯದ ಬಗೆಗಿನ ಚಿತ್ರ. ಅಂತಹದ್ದೇ ಅಷ್ಟೇ ಮಹತ್ತರವಾದ ಚಿತ್ರ "ದಿ ಪಿಯನಿಸ್ಟ್". ರೋಮನ್ ಪೋಲಾನ್ಸ್ಕಿನಿರ್ದೇಶಿರುವ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಏಡ್ರಿಯನ್ ಬ್ರೋಡಿ ಇದ್ದಾರೆ.

    ಈ ಚಿತ್ರ, 1939ರ ಮತ್ತು ನಂತರದ ಅವಧಿಯಲ್ಲಿ ಪೋಲೆಂಡ್ ದೇಶದಲ್ಲಿ ನಾಜಿ ಆರ್ಮಿಯ ಕ್ರೌರ್ಯ, ಅತ್ಯಾಚಾರಗಳ ಬಗ್ಗೆ ಅದರಲ್ಲೇ ಇದ್ದು ನೋವು ಸಂಕಟ ಅನುಭವಿಸಿ ಜೀವ ಉಳಿಸಿಕೊಂಡ ಒಬ್ಬ ಪಿಯಾನಿಸ್ಟ್, ವ್ಲಾಡಿಸ್ಲಾವ್ ಸ್ಪಿಲ್ಮನ್ ರ(Wladyslaw Szpilman) ಕಥೆ. 1939ರ ಆಗಿನ ಪೋಲೆಂಡ್ ಜೀವನದ ವಿಡಿಯೋ ಕ್ಲಿಪ್ ಗಳಿಂದ ಪ್ರಾರಂಭವಾಗುವ ಚಿತ್ರ, ವ್ಲಾಡಿಸ್ಲಾವ್ ರವರು ರೇಡಿಯೋ ಕಾರ್ಯಕ್ರಮ ಕೊಡುತ್ತಿದ್ದ ಸಂದರ್ಭದಿಂದ ತೆರೆದುಕೊಳ್ಳುತ್ತದೆ. ನಾಜಿ ಆರ್ಮಿಯ ಬಾಂಬ್ ದಾಳಿಯ ಕಾರಣದಿಂದ ವಾರ್ಸಾ(Warsaw) ರೇಡಿಯೋ ಕೇಂದ್ರ ಸ್ಥಗಿತಗೊಳಿಸಿ ಅಲ್ಲಿದ್ದ ಎಲ್ಲರೂ ಹೊರಗೆ ಬರುತ್ತಿರುವಾಗ ಸ್ಪಿಲ್ಮನ್ ತನ್ನ ಸ್ನೇಹಿತ ಯೂರೆಕ್ ನ ಸುಂದರ ತಂಗಿ ಡೋರೊಟಳನ್ನು ಭೇಟಿಯಾಗುತ್ತಾನೆ. ಆಕೆಯ ಸೌಂದರ್ಯಕ್ಕೆ ಮನಸೋಲುವ ಸ್ಪಿಲ್ಮನ್ ಆಕೆಯನ್ನು ಸರಿಯಾಗಿ ಮಾತನಾಡಿಸಬೇಕು ಎನ್ನುವಷ್ಟರಲ್ಲಿ ಆಕೆಯ ಅಣ್ಣ ಅದು ಸರಿಯಾದ ಸಮಯವಲ್ಲ ಎಂದು ಹೇಳಿ ಆಕೆಯನ್ನು ಕರೆದೊಯ್ಯುತ್ತಾನೆ.

    ನಾಜಿ ಆರ್ಮಿಯನ್ನು ಹಿಮ್ಮೆಟ್ಟಿಸಲು ಎಲ್ಲ ಪೋಲೆಂಡ್ ನಾಗರಿಕರಿಗೆ ಕರೆ ನೀಡಲಾಗಿರುತ್ತದೆ. ಇದಕ್ಕೆ ಓಗೊಟ್ಟು ಬಹಳಷ್ಟು ಜನ ಮನೆ ಬಿಟ್ಟು ಸುರಕ್ಷಿತ ಜಾಗಗಳಿಗೆ ಹೋಗಿ ಯುದ್ಧ ಮುಂದುವರೆಸಲು ನಿರ್ಧಾರ ಮಾಡಿರುತ್ತಾರೆ. ಆದರೆ ಸ್ಪಿಲ್ಮನ್ ಕುಟುಂಬ ರೇಡಿಯೋದಲ್ಲಿ ಬ್ರಿಟನ್ ದೇಶ ಜರ್ಮನಿಯ ಮೇಲೆ ಯುದ್ಧ ಘೋಷಿಸುವುದನ್ನು ಕೇಳಿ ತಾವಿದ್ದ ಮನೆಯಲ್ಲೇ ಉಳಿದು ಕಾದು ನೋಡಲು ನಿರ್ಧರಿಸುತ್ತಾರೆ. ನಿಧಾನವಾಗಿ ಪರಿಸ್ಥಿತಿ ತಿಳಿಯಾಗಬಹುದು ಎಂದು. ಆದರೆ ಅವರು ಎಣಿಸಿದಂತೆ ನಡೆಯದೆ ನಾಜಿ ಸೇನೆಯು ನಿಧಾನವಾಗಿ ಯಹೂದಿಗಳ ಮೇಲೆ ಒಂದೊಂದೇ ಕಟ್ಟಲೆಗಳನ್ನು ಹೇರಲು ತೊಡಗುತ್ತಾರೆ.

  ಮೊದಲು ತೋಳುಗಳ ಮೇಲೆ ಯಹೂದಿ ಚಿಹ್ನೆಯಾದ ಡೇವಿಡ್ ನ ನಕ್ಷತ್ರವನ್ನು ಧರಿಸುವಂತೆ ಕಾನೂನು ಮಾಡಲಾಗುತ್ತದೆ. ಬಡವರು ಶ್ರೀಮಂತರು ಎನ್ನದೆ ಎಲ್ಲ ಯಹೂದಿಗಳನ್ನು ಕಂಡಲ್ಲಿ ಅವಮಾನಿಸುವುದು ಕೆಟ್ಟದಾಗಿ ನಡೆಸಿಕೊಳ್ಳುವುದು ಪ್ರಾರಂಭವಾಗುತ್ತದೆ. ನಂತರ ನಿಧಾನವಾಗಿ ಎಲ್ಲ ಯಹೂದಿಗಳನ್ನು ಅವರಿಗಾಗಿಯೇ ಬೇರ್ಪಡಿಸಲಾದ ಒಂದು ಕಾಲೋನಿಗೆ(Jewish Ghetto) ಕಡ್ಡಾಯವಾಗಿ ಸ್ಥಳಾಂತರಿಸಲು ಕಾನೂನು ಹೊರಡಿಸಲಾಗುತ್ತದೆ. ತನ್ನ ಕುಟುಂಬ ಅತ್ಯಗತ್ಯ ವಸ್ತುಗಳನ್ನೆಲ್ಲ ತೆಗೆದುಕೊಂಡು ಸ್ಥಳಾಂತರಿಸುವಾಗ ಸ್ಪಿಲ್ಮನ್  ಡೋರೊಟಳನ್ನು ಮತ್ತೆ ಭೇಟಿಯಾಗುತ್ತಾನೆ. ಆಕೆಗೆ ಇವರ ಮೇಲೆ ನಡೆಸಲಾಗುತ್ತಿರುವ ಅನ್ಯಾಯದ ಬಗ್ಗೆ ಸಿಟ್ಟು ಬೇಸರ ಎರಡೂ ಆದರೂ ಇಬ್ಬರೂ ಏನೂ ಮಾಡಲಾಗದೆ ಕೊನೆಯ ಬಾರಿ ವಿದಾಯ ಹೇಳಿ ಅವರವರ ದಾರಿ ಹಿಡಿಯುತ್ತಾರೆ.

    ಸ್ಪಿಲ್ಮನ್ ಮತ್ತು ಆತನ ತಮ್ಮ, ತಮ್ಮ ಬಳಿ ಇರುವ ಪುಸ್ತಕಗಳನ್ನು ಮಾರಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿರುತ್ತಾರೆ. ಒಂದು ದಿನ ಇವರ ಸ್ನೇಹಿತನೊಬ್ಬ ಯಹೂದಿಗಳನ್ನು ನಿಯಂತ್ರಿಸಲು ಯಹೂದಿಗಳಲ್ಲೇ ಕೆಲವರನ್ನು ಪೋಲಿಸ್ ಆಗಿ ನಾಜಿ ಸೇನೆ ನೇಮಿಸುತ್ತಿರುವುದಾಗಿ, ತಾನು ಸ್ಪಿಲ್ಮನ್ ಮತ್ತು ಆತನ ತಮ್ಮನನ್ನು ಶಿಫಾರಸು ಮಾಡಿ ಆ ಕೆಲಸಕ್ಕೆ ಹಚ್ಚಬಹುದು ಎಂದು ಹೇಳುತ್ತಾನೆ. ಆದರೆ ಇದಕ್ಕೊಪ್ಪದ ಸ್ಪಿಲ್ಮನ್ ಮತ್ತು ಆತನ ತಮ್ಮ, ಅವನಿಗೆ ಬೈದು ಕಳುಹಿಸುತ್ತಾರೆ. ಅಲ್ಲಿಂದ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಾ ಸ್ಪಿಲ್ಮನ್ ಕುಟುಂಬ ಬಹಳ ಕಷ್ಟ ಅನುಭವಿಸುತ್ತಾರೆ. ಕೊನೆಗೆ ಒಂದು ದಿನ ಎಲ್ಲರನ್ನೂ ದೂರದ ಊರೊಂದಕ್ಕೆ ಕರೆದೊಯ್ಯುತ್ತಿರುವುದಾಗಿ ಎಲ್ಲ ಯಹೂದಿಗಳು ತಮ್ಮ ವಸ್ತುಗಳನ್ನು ಇದ್ದಲ್ಲೇ ಬಿಟ್ಟು ಹೊರಡಬೇಕು ಎಂದು ನಾಜಿ ಸೇನೆ ಆದೇಶಿಸುತ್ತದೆ. ಹೀಗೆ ರೈಲು ಹತ್ತಲು ಒಟ್ಟು ಸೇರಿಸಿದ್ದ ಗುಂಪಲ್ಲಿ ಅಲ್ಲಿಯ ತನಕ ಬೇರೆ ಬೇರೆಯಾಗಿದ್ದ ಸ್ಪಿಲ್ಮನ್ ಕುಟುಂಬ ಮತ್ತೆ ಸೇರುತ್ತದೆ. ತಮ್ಮ ಬಳಿ ಇದ್ದ ಕೊಂಚವೇ ದುಡ್ಡಿನಲ್ಲಿ ಒಂದು ಸಿಹಿ ತಿಂಡಿಯನ್ನು ಕೊಂಡು ಎಲ್ಲರೂ ಹಂಚಿಕೊಂಡು ಕಡೆಯ ಬಾರಿ ತಿನ್ನುತ್ತಾರೆ. ಎಲ್ಲರೂ ರೈಲು ಹತ್ತಲು ಬಂದಾಗ ಸ್ಪಿಲ್ಮನ್ ನನ್ನು ನೋಡಿದ ಪೋಲಿಸ್ ಸ್ನೇಹಿತ ಆತನನ್ನು ರೈಲು ಹತ್ತದಂತೆ ಹೊರಗೆಳೆದು ಬದಿಗೆ ತಳ್ಳುತ್ತಾನೆ ಮತ್ತು ತಪ್ಪಿಸಿಕೊಳ್ಳಲು ಹೇಳುತ್ತಾನೆ. ಆದರೆ ಕುಟುಂಬದವರನ್ನು ಬಿಟ್ಟು ಹೋಗಲು ಮನಸ್ಸಾಗದ ಸ್ಪಿಲ್ಮನ್ ಮತ್ತೆ ಅವರೊಟ್ಟಿಗೆ ಸೇರಲು ಹೋದಾಗ ಆತನನ್ನು ಮತ್ತೆ ಹೊರಗೆಳುಯುವ ಸ್ನೇಹಿತ ತಾನು ಆತನ ಜೀವ ಉಳಿಸಿದ್ದೇನೆಂದೂ, ಅಲ್ಲಿಂದ ತಪ್ಪಿಸಿ ಕೊಳ್ಳಲು ಹೇಳುತ್ತಾನೆ. ಮನಸ್ಸಿಲ್ಲದ ಮನಸ್ಸಿನಿಂದ ಹೊರಡುವ ಸ್ಪಿಲ್ಮನ್ ತನ್ನ ಕುಟುಂಬವನ್ನು ಕಳೆದುಕೊಂಡ ದುಃಖದೊಂದಿಗೆ ಅಳುತ್ತ ಮತ್ತೆ ನಗರಕ್ಕೆ ಬರುತ್ತಾನೆ.

    ಅಳಿದುಳಿದಿದ್ದ ಪೋಲಿಶ್ ಮತ್ತು ಯಹೂದಿಗಳ ಒಂದು ಸಣ್ಣ ಕ್ಯಾಂಪ್ ಗೆ ಸೇರುವ ಸ್ಪಿಲ್ಮನ್ ಅಲ್ಲಿ ಕೂಲಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಅಲ್ಲೂ ದಿನವೂ ಸಾವಿನ ಭಯ ಇದ್ದದ್ದೇ. ಅಷ್ಟರಲ್ಲೇ ಒಂದು ದಿನ ಕ್ಯಾಂಪಿನಲ್ಲಿ ತನ್ನ ಹಳೆ ಪರಿಚಿತನೊಬ್ಬನ ಭೇಟಿಯಾಗುತ್ತದೆ. ಆತನ ಸಹಾಯ ಪಡೆದು ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಹವಣಿಸುವ ಸ್ಪಿಲ್ಮನ್ ಒಂದು ದಿನ ಆತನ ಸಹಾಯ ಪಡೆದು ಕ್ಯಾಂಪಿನಿಂದ ತಪ್ಪಿಸಿಕೊಂಡು ಆತನ ಪರಿಚಯಸ್ತ ಪೋಲಿಶ್ ಮಹಿಳೆ ಜನೀನ್ ಳ ಬಳಿ ಸಹಾಯ ಕೇಳಿ ಹೋಗುತ್ತಾನೆ. ಆತನನ್ನು ಮನೆಗೆ ಕರೆದುಕೊಂಡು ಹೋಗುವ ಜನೀನ್ ಆತನಿಗೆ ಉಪಚಾರ ಮಾಡಿ ಆಕೆಯ ಗಂಡನ ಸಹಾಯದಿಂದ ತಮ್ಮ ಮತ್ತೊಬ್ಬ ಪರಿಚಿತ ಗೆಬ್ಚಿನ್ಸ್ಕಿ ಮನೆಗೆ ಕಳಿಸಿ ಅಲ್ಲಿ ಸ್ಪಿಲ್ಮನ್ ಗೆ ಅಂದು ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡುತ್ತಾಳೆ. ಗೆಬ್ಚಿನ್ಸ್ಕಿಈತನನ್ನು ಬರಮಾಡಿಕೊಂಡು ಬೇರೊಂದು ಮನೆಯಲ್ಲಿ ಉಳಿದುಕೊಳ್ಳಲು ಸಹಾಯ ಮಾಡುತ್ತಾನೆ. ಆ ಮನೆಗೆ ಗುಟ್ಟಾಗಿ ಸ್ಪಿಲ್ಮನ್ ನನ್ನು ಭೇಟಿಯಾಗಲು ಜನೀನ್ ಆಗಾಗ ಬರುತ್ತಿರುತ್ತಾಳೆ ಮತ್ತು  ಹಾಗೆ ಬಂದಾಗಲೆಲ್ಲ ಆತನ ಊಟದ ವ್ಯವಸ್ಥೆ ಮಾಡಿಯೂ ಹೋಗುತ್ತಿರುತ್ತಾಳೆ. ಹೀಗೇ ನಡೆಯುತ್ತಿರುವಾಗ ಒಂದು ದಿನ ತಾನಿದ್ದ ಮನೆಯ ಎದುರು ಕಟ್ಟಡದಲ್ಲಿ ಕೆಲವು ಕ್ರಾಂತಿಕಾರಿ ಯಹೂದಿಗಳು ಅಡಗಿದ್ದಾರೆ ಎಂಬ ಮಾಹಿತಿ ತಿಳಿದು ಜರ್ಮನ್ ಸೇನೆ ದಾಳಿ ಮಾಡುತ್ತದೆ. ಆದರೆ ಬಹಳ ದೃಢಸಂಕಲ್ಪ ಹೊಂದಿದ್ದ ಆ ಕ್ರಾಂತಿಕಾರಿಗಳು ಕೊನೆಗೂ ಜರ್ಮನ್ ಸೇನೆಗೆ ಸಾಕಷ್ಟು ಘಾಸಿ ಮಾಡಿ 3 ದಿನ ನಂತರ ಸಾಯುತ್ತಾರೆ. ಇದನ್ನು ತಾನಿದ್ದ ಮನೆಯಿಂದಲೇ ಮೂಕನಂತೆ ನೋಡುತ್ತಿದ್ದ ಸ್ಪಿಲ್ಮನ್ ಜನೀನ್ ಬಂದಾಗ ಆ ಕ್ರಾಂತಿಕಾರಿಗಳು ಸತ್ತದ್ದರಿಂದ ಏನು ಪ್ರಯೋಜನವೋ ಎಂದು ಬೇಸರದಿಂದ ನುಡಿಯುತ್ತಾನೆ. ಅದಕ್ಕೆ ಜನೀನ್ ಈ ಕ್ರಾಂತಿಕಾರಿಗಳ ಹೋರಾಟ ಜರ್ಮನ್ ರನ್ನು ಆಶ್ಚರ್ಯಗೊಳಿಸಿದೆ ಮತ್ತು ಇದರಿಂದ ಪ್ರೇರಿತಗೊಂದು ಪೋಲಿಶ್ ಜನ ಕೂಡ ಜರ್ಮನ್ ರ ವಿರುದ್ಧ ದಂಗೆಯೇಳುತ್ತಾರೆ ಎಂದು ಹೇಳುತ್ತಾಳೆ.
  
  ಒಂದು ದಿನ ಇದ್ದಕ್ಕಿದ್ದಂತೆ ಗೆಬ್ಚಿನ್ಸ್ಕಿಜರ್ಮನ್ ಸೇನೆ ಜನೀನ್ ಮತ್ತವಳ ಗಂಡನನ್ನು ಸೆರೆಹಿಡಿದಿರುವುದಾಗಿಯೂ ತನ್ನನ್ನೂ ಸೆರೆಹಿಡಿಯಬಹುದು ಎಂಬ ಮಾಹಿತಿ ಸಿಕ್ಕಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಿರುವುದಾಗಿಯೂ ಸ್ಪಿಲ್ಮನ್ಗೂ ತಪ್ಪಿಸಿಕೊಳ್ಳುವಂತೆ ಹೇಳಿ ಹೊರಟು ಹೋಗುತ್ತಾನೆ. ತಾನು ಕಂಡುಕೊಂಡ ಆ ಜಾಗವನ್ನು ಬಿಡಲು ಮನಸ್ಸಿಲ್ಲದೆ ಸ್ಪಿಲ್ಮನ್ ಅಲ್ಲಿಯೇ ಉಳಿಯುತ್ತಾನೆ. ಅಷ್ಟರಲ್ಲೇ ಜರ್ಮನ್ ಸೈನಿಕರು ಆತನ ಅಪಾರ್ಟ್ಮೆಂಟ್ ಬಿಲ್ಡಿಂಗ್ ಗೆ ದಾಳಿಯಿಟ್ಟು ಕೆಲವರನ್ನು ಸೆರೆ ಹಿಡಿದುಕೊಂದು ಹೋಗುತ್ತಾರೆ. ಸ್ಪಿಲ್ಮನ್ ಈ ಮನೆಯಲ್ಲಿ ಇರುವುದು ಹೊರಗಿನವರಿಗೆ ತಿಳಿಯಬಾರದಾದ್ದರಿಂದ ಆತ ತುಂಬಾ ನಿಶಬ್ಧವಾಗಿರಬೇಕಾಗಿರುತ್ತದೆ. ಹಸಿವಿನಿಂದ ಮನೆಯಲ್ಲಿ ಏನಿದೆ ಎಂದು ಹುಡುಕುತ್ತಿರುವ ಸಂದರ್ಭದಲ್ಲಿ ತಟ್ಟೆಗಳನ್ನು ಬೀಳಿಸಿ ದೊಡ್ಡ ಸದ್ದು ಮಾಡಿಬಿಡುತ್ತಾನೆ. ಇದರಿಂದ ಈ ಮನೆಯಲ್ಲಿ ಯಾರೋ ಇದ್ದಾರೆ ಎಂದು ತಿಳಿದ ಪಕ್ಕದ ಮನೆಯಾಕೆ ಈತನ ಮನೆ ಬಾಗಿಲು ತಟ್ಟುತ್ತಾಳೆ. ತಾನಿನ್ನು ಸಿಕ್ಕಿಬಿದ್ದೆ ಎಂದು ಗಾಬರಿಗೊಂಡ ಸ್ಪಿಲ್ಮನ್ ತನ್ನ ಸಾಮಾನುಗಳನ್ನೆಲ್ಲಾ ತೆಗೆದುಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ.

   ಗೆಬ್ಚಿನ್ಸ್ಕಿ ಒಮ್ಮೆ ಕೊಟ್ಟಿದ್ದ ಮಾಹಿತಿ ಬಳಸಿ ಆತ ಹೇಳಿದ ಮಿ||ಜೀಕೇವಿಚ್ ನನ್ನು ಸಂಪರ್ಕ ಮಾಡಲು ಸ್ಪಿಲ್ಮನ್ ಮುಂದಾಗುತ್ತಾನೆ. ಅವರ ಮನೆಗೆ ಹೋದಾಗ ಅಲ್ಲಿ ರೇಡಿಯೋ ಕೇಂದ್ರದಲ್ಲಿ ಭೇಟಿಯಾಗಿದ್ದ ತನ್ನ ಸ್ನೇಹಿತ ಯೂರೆಕ್ ನ ತಂಗಿ ಡೋರೊಟಳನ್ನು ನೋಡುತ್ತಾನೆ. ಗೆಬ್ಚಿನ್ಸ್ಕಿ ಸಂಪರ್ಕಿಸಲು ಹೇಳಿದ ವ್ಯಕ್ತಿ ಆಕೆಯ ಗಂಡನಾಗಿರುತ್ತಾನೆ. ತನ್ನ ಪರಿಸ್ಥಿತಿಯನ್ನೆಲ್ಲಾ ವಿವರಿಸಿದ ಮೇಲೆ ಆಕೆಯ ಗಂಡನೂ ಬಂದು ಆತನನ್ನು ಅಂದು ಅಲ್ಲೇ ಉಳಿಸಿಕೊಂಡು ಬೇರೊಂದು ಕಡೆ ಉಳಿಯುವ ವ್ಯವಸ್ಥೆ ಮಾಡಿಕೊಡುತ್ತಾನೆ. ಆ ಮನೆ ಎದುರಲ್ಲೇ ಜರ್ಮನ್ ಸೈನಿಕರನ್ನು ಶುಶ್ರೂಷೆ ಮಾಡುತ್ತಿದ್ದ ಆಸ್ಪತ್ರೆಯು ಮತ್ತು ಪೋಲಿಸ್ ಸ್ಟೇಷನ್ ಇರುತ್ತದೆ. ಜರ್ಮನ್ ರಿಂದ ತಪ್ಪಿಸಿಕೊಳ್ಳಬೇಕಾದರೆ ಅವರ ಮಧ್ಯೆಯೇ ಇದ್ದರೆ ಯಾರಿಗೂ ತಿಳಿಯದು ಎಂದು ಜೀಕೇವಿಚ್ ಹೇಳುತ್ತಾನೆ. ಹಾಗೆ ಹೇಳಿ ಆಗಾಗ ಸ್ಪಿಲ್ಮನ್ ಯೋಗಕ್ಷೇಮ ವಿಚಾರಿಸಲು ಬರುವುದಾಗಿಯೂ ಹೇಳಿ ಮನೆಗೆ ಹೊರಗಡೆಯಿಂದ ಬೀಗ ಹಾಕಿ ಹೋಗುತ್ತಾನೆ. ಅವನು ಹೋದಮೇಲೆ ಸ್ಪಿಲ್ಮನ್ ಕಣ್ಣು ಆ ಮನೆಯಲ್ಲಿ ಇದ್ದ ಪಿಯಾನೋ ಮೇಲೆ ಬೀಳುತ್ತದೆ. ಬಹಳ ದಿನದಿಂದ ಪಿಯಾನೋ ನುಡಿಸಿಲ್ಲದ್ದರಿಂದ ತಡೆಯಲಾಗದೆ ಅದರ ಮುಚ್ಚಳಿಕೆ ತೆರೆದು ಕೂರುತ್ತಾನೆ. ಮನದಲ್ಲೇ ಸಂಗೀತವನ್ನು ನೆನೆಯುತ್ತ ಪಿಯಾನೋ ಮೇಲೆ ನುಡಿಸುತ್ತಿರುವಂತೆ ಸುಮ್ಮನೆ ಕೈಯಾಡಿಸುತ್ತಾನೆ. ನಮ್ಮ ಜೀವನದಲ್ಲಿ ಅದಮ್ಯವಾಗಿ ಇಷ್ಟ ಪಡುವ ಒಂದೇ ಒಂದು ವಸ್ತುವಿಂದ ನಮ್ಮನ್ನು ದೂರವಿರಿಸಿದರೆ ಆ ಒದ್ದಾಟ ಮತ್ತು ಸಂಕಟ ಅತೀವವಾದದ್ದು. ಸ್ಪಿಲ್ಮನ್ ನದ್ದು ಇಲ್ಲಿ ಅದೇ ಪರಿಸ್ಥಿತಿ.
 
  ಕೆಲವು ದಿನಗಳ ನಂತರ ಜೀಕೇವಿಚ್ ತನ್ನೊಂದಿಗೆ ಆಂಟೆಕ್ ಶಾಲಾಸ್ ಎಂಬುವವನನ್ನು ಕರೆತಂದು ಇನ್ನು ಮುಂದೆ ಸ್ಪಿಲ್ಮನ್ ನನ್ನು ಆತ ನೋಡಿಕೊಳ್ಳುವುದಾಗಿ ಹೇಳುತ್ತಾನೆ. ಆದರೆ ಆಂಟೆಕ್, ಸ್ಪಿಲ್ಮನ್ ಹಸಿದುಕೊಂಡು ಬಳಲುತ್ತಿದ್ದರೂ ಎರಡು ವಾರದ ನಂತರ ಕೊಂಚ ಆಹಾರದೊಂದಿಗೆ ಬರುತ್ತಾನೆ. ಯಾಕಿಷ್ಟು ನಿಧಾನ ಮಾಡಿದೆ ಎಂದು ಸ್ಪಿಲ್ಮನ್ ಕೇಳಿದಾಗ ದುಡ್ಡಿನ ಅಡಚಣೆಯಾಗಿತ್ತು ಎಂದು ನೆವ ಹೇಳಿ ಸ್ಪಿಲ್ಮನ್ ನಿಂದ ದುಡ್ಡಿಗಾಗಿ ಮಾರಲು ಸ್ಪಿಲ್ಮನ್ ನ ಕೈಗಡಿಯಾರ ಕೂಡ ಕೊಂಡೊಯ್ದಿರುತ್ತಾನೆ. ಇಷ್ಟರಲ್ಲಿ ಸ್ಪಿಲ್ಮನ್ ಜಾಂಡಿಸ್ ಆಗಿ, ಸರಿಯಾದ ಆಹಾರವಿಲ್ಲದೆ ಬಳಲಿ ಮನೆಯಲ್ಲಿ ಒಬ್ಬನೇ ಹಿಂಸೆ ಅನುಭವಿಸುತ್ತಿರುತ್ತಾನೆ. ಒಂದು ದಿನ ಡೋರೋಟ ಮತ್ತು ಜೀಕೇವಿಚ್ ದಂಪತಿ ತಾವು ಬೇರೆಯ ಊರಿಗೆ ಹೋಗುವ ಮುನ್ನ ಕಡೆಯ ಬಾರಿ ಸ್ಪಿಲ್ಮನ್ ಯೋಗಕ್ಷೇಮ ವಿಚಾರಿಸಿ ಹೋಗುವ ಎಂದು ಸ್ಪಿಲ್ಮನ್ ಮನೆಗೆ ಬರುತ್ತಾರೆ. ಸ್ಪಿಲ್ಮನ್ ಸ್ಥಿತಿ ನೋಡಿ ಬೇಸರಗೊಳ್ಳುವ ಡೋರೋಟ ತನ್ನ ಗಂಡನಿಗೆ ಹೇಳಿ ವೈದ್ಯರೊಬ್ಬರನ್ನು ಕರೆಸಿ ಚಿಕಿತ್ಸೆ ಮಾಡಿಸುತ್ತಾಳೆ. ಆಂಟೆಕ್ ಸ್ಪಿಲ್ಮನ್ ಹೆಸರು ಹೇಳಿ ವಾರ್ಸಾ ಊರಿನ ತುಂಬಾ ದುಡ್ಡು ಎತ್ತಿ ಪರಾರಿಯಾಗಿದ್ದಾನೆ ಎಂದು ಡೋರೋಟ ಹೇಳುತ್ತಾಳೆ. ಸ್ಪಿಲ್ಮನ್ ಗಾಗಿ ಕೊಂಚ ಅಡಿಗೆ ಮಾಡಿಕೊಟ್ಟು ಕಡೆಯ ಬಾರಿ ವಿದಾಯ ಹೇಳಿ ಹೊರಡುತ್ತಾಳೆ.

  ಕೆಲವು ದಿನಗಳ ನಂತರ ಸ್ಪಿಲ್ಮನ್ ಮನೆ ಎದುರಲ್ಲಿದ್ದ ಪೋಲಿಸ್ ಸ್ಟೇಷನ್ ಮತ್ತು ಆಸ್ಪತ್ರೆಗೆ ಕೆಲವು ಕ್ರಾಂತಿಕಾರಿಗಳು ದಾಳಿ ಮಾಡುತ್ತಾರೆ. ದಾಳಿ ಮಾಡಿದ ಕ್ರಾಂತಿಕಾರಿಗಳು ಕೆಲವು ಜನ ಈತ ಇದ್ದ ಅಪಾರ್ಟ್ಮೆಂಟಿನಲ್ಲಿ ಕೂಡ ಇದ್ದದ್ದರಿಂದ ಜರ್ಮನ್ ಸೇನೆ ಸ್ಪಿಲ್ಮನ್ ಇದ್ದ ಕಟ್ಟಡದ ಮೇಲೂ ದಾಳಿ ಮಾಡುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಸ್ಪಿಲ್ಮನ್ ಅಡಗಲು ಮತ್ತೊಂದು ಜಾಗವನ್ನು ಹುಡುಕುತ್ತ ಯಾರೂ ಇಲ್ಲದ ಒಂದು ಬಂಗಲೆಗೆ ಹೋಗುತ್ತಾನೆ. ಆ ಬಂಗಲೆಯ ಅಡಿಗೆ ಮನೆಯಲ್ಲಿ ಏನಾದರೂ ಸಿಗುವುದ ಎಂದು ಹುಡುಕುತ್ತಿದ್ದಾಗ  ಒಂದು ಟಿನ್ ಕಲ್ಲಂಗಡಿ ಹಣ್ಣಿನ ರಸ ಸಿಗುತ್ತದೆ. ಅದನ್ನು ತೆಗೆದುಕೊಂಡು ಹೊರಬರುತ್ತಿದ್ದಾಗ ಯಾರೋ ಜರ್ಮನ್ ಭಾಷೆಯಲ್ಲಿ ಮಾತಾಡುತ್ತಿದ್ದನ್ನು ಕೇಳಿ ಅಡಗಿಕೊಳ್ಳಲು ಅಟ್ಟಕ್ಕೆ ಹೋಗುತ್ತಾನೆ. ಹಾಗೆ ಹೋಗುವಾಗ ಯಾರೋ ಆ ಮನೆಯಲ್ಲಿ ಇದ್ದ ಪಿಯಾನೋ ನುಡಿಸುತ್ತಿದ್ದನ್ನು ಕೇಳುತ್ತ ಒಳಗೆ ಸೇರಿಕೊಳ್ಳುತ್ತಾನೆ. ಎಲ್ಲ ಸದ್ದಡಗಿದ ನಂತರ ಕೆಳಗಿಳಿದು ಬಂದು ಆ ಹಣ್ಣಿನ ರಸದ ಟಿನ್ ಒಡೆಯಲು ಪ್ರಯತ್ನಿಸುತ್ತಿದ್ದಾಗ ಅಲ್ಲಿ ಜರ್ಮನ್ ಸೇನೆಯ ಒಬ್ಬ ಕ್ಯಾಪ್ಟನ್ ಆಗಮಿಸುತ್ತಾನೆ. ಆತನನ್ನು ನೋಡಿ ದಿಗಿಲಾಗುವ ಸ್ಪಿಲ್ಮನ್ ಆತ ಕೇಳುವ ಪ್ರಶ್ನೆಗೆಲ್ಲ ಉತ್ತರಿಸಿ ತಾನೊಬ್ಬ ಪಿಯನಿಸ್ಟ್ “ಆಗಿದ್ದೆ” ಎಂದು ಪರಿಚಯಿಸಿಕೊಳ್ಳುತ್ತಾನೆ. ಆ ಕಾಪ್ಟನ್ ಸ್ಪಿಲ್ಮನ್ ನನ್ನು ಕರೆದು ಆ ಬಂಗಲೆಯಲ್ಲಿ ಇದ್ದ ಪಿಯಾನೋ ನುಡಿಸಲು ಹೇಳುತ್ತಾನೆ. ಈ ಸನ್ನಿವೇಶ ತುಂಬಾ ವಿಚಿತ್ರವಾಗಿದೆ. ಆ ಕಾಪ್ಟನ್ ಕೇವಲ ಇನ್ನೊಬ್ಬ ಪಿಯಾನೋ ವಾದಕನ ನುಡಿಸುವಿಕೆಯನ್ನು ಕೇಳಲಷ್ಟೇ ಸ್ಪಿಲ್ಮನ್ ಗೆ ಪಿಯಾನೋ ನುಡಿಸಲು ಹೇಳಿದರೂ, ಸ್ಪಿಲ್ಮನ್ ಗೆ ಇದು ಜೀವನ್ಮರಣದ ಪ್ರಶ್ನೆ. ತಾನು ಸರಿಯಾಗಿ ನುಡಿಸದಿದ್ದರೆ ಎಲ್ಲಿ ಆ ಕಾಪ್ಟನ್ ತನ್ನನ್ನು ಸೆರೆ ಹಿಡಿದು ಜೈಲಿಗೆ ತಳ್ಳುತ್ತಾನೋ ಎಂಬ ಭಯ. ಆದರೂ ಸ್ಪಿಲ್ಮನ್, ಫ್ರೆಡೆರಿಕ್ ಶೋಪಿನ್ ನ ಒಂದು ಬ್ಯಾಲೆಯನ್ನು(Ballade) ಅದ್ಭುತವಾಗಿ ನುಡಿಸುತ್ತಾನೆ. ಇದನ್ನು ಕೇಳುತ್ತಾ ಗಮನಿಸುತ್ತಾ ಹೋಗುವ ಕಾಪ್ಟನ್ ಮುಖ ಸಂಗೀತವನ್ನು ಆಸ್ವಾದಿಸುವವನಂತೆ ಕಂಡರೂ ಒಂದು ಪಶ್ಚಾತಾಪದ ಛಾಯೆ ಹೊತ್ತಿರುತ್ತದೆ. ಸ್ಪಿಲ್ಮನ್ ನುಡಿಸುವ ಸಂಗೀತ ಜನರೇ ಇಲ್ಲದೆ ಬೆಂಗಾಡಾದಂತೆ ಇದ್ದ ವಾರ್ಸಾ ಸಿಟಿಯಲ್ಲಿ ಮೆಲ್ಲಗೆ ಭರವಸೆಯ ಗಾಳಿ ಬೀಸಿದಂತೆ ಭಾಸವಾಗುತ್ತದೆ. ಇದಾದ ನಂತರ ಕಾಪ್ಟನ್, ಸ್ಪಿಲ್ಮನ್ ಅಲ್ಲಿ ಬಚ್ಚಿಟ್ಟುಕೊಂಡಿದ್ದಾನೆಯೇ ಮತ್ತು ಆತ ಯಹೂದಿಯೇ ಎಂದು ಪ್ರಶ್ನಿಸಿದಾಗ ಸ್ಪಿಲ್ಮನ್ ತಾನು ಇನ್ನು ಸತ್ತೆ ಎಂದೇ ಭಾವಿಸುತ್ತಾನೆ. ಆದರೆ ಆ ಕಾಪ್ಟನ್ ಸ್ಪಿಲ್ಮನ್ ಗೆ ಅಟ್ಟದ ಮೇಲೆ ಬಚ್ಚಿಟ್ಟುಕೊಳ್ಳಲು ಹೇಳಿ ಹೋಗುತ್ತಾನೆ.

  ಆ ಕಾಪ್ಟನ್ ಅದೇ ಬಂಗಲೆಯಲ್ಲಿ ಕಛೇರಿ ಸ್ಥಾಪಿಸುತ್ತಾನೆ. ಯಾರಿಗೂ ತಿಳಿಯದಂತೆ ಸ್ಪಿಲ್ಮನ್ ಗೆ ಬ್ರೆಡ್ ಮತ್ತು ಜ್ಯಾಮ್ ತಂದು ಕೊಡುತ್ತಾನೆ; ಜೊತೆಗೆ ಟಿನ್ ಒಡೆಯಲು ಒಂದು ಟಿನ್ ಓಪೆನರ್ ಕೂಡ. ಕೊಂಚ ದಿನಗಳ ನಂತರ ರಷ್ಯಾ ದಾಳಿಗೆ ಹಿಮ್ಮೆಟ್ಟಿ ಜರ್ಮನ್ ವಾಪಾಸಾಗುವ ಸಂದರ್ಭ ಬಂದಾಗ ಆ ಕಾಪ್ಟನ್ ಹೊರಡುವ ಮುನ್ನ ಮತ್ತೆ ಸ್ಪಿಲ್ಮನ್ ಗೆ ಬ್ರೆಡ್ ಕೊಟ್ಟು ತಾನುಟ್ಟಿದ್ದ ಕೋಟ್ ಕೂಡ ಕೊಡುತ್ತಾನೆ. ಕಡೆಗೆ ಸ್ಪಿಲ್ಮನ್ ನ ಹೆಸರು ಕೇಳಿ ಮತ್ತೆ ಶಾಂತಿ ನೆಲೆಸಿದಾಗ ರೇಡಿಯೋದಲ್ಲಿ ಈತನ ಸಂಗೀತ ಕೇಳುವುದಾಗಿಯು ಹೇಳಿ ಹೊರಡುತ್ತಾನೆ.

  ಕೆಲವು ದಿನಗಳ ನಂತರ ರಷ್ಯಾ ಸೇನೆ ವಿಜಯದ ಘೋಷಣೆ ಕೂಗುತ್ತ ಅಡಗಿದ್ದ ಪೋಲಿಶ್ ಜನಗಳಿಗೆ ನಿರ್ಭಯವಾಗಿ ಹೊರಬರಲು ಕರೆಕೊಡುತ್ತಾರೆ. ಕರೆಗೆ ಓಗೊಟ್ಟು ಸ್ಪಿಲ್ಮನ್ ಹೊರಬಂದು ಅಲ್ಲಿ ನಡೆದು ಬರುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಆನಂದದಿಂದ ತಬ್ಬಿಕೊಳ್ಳಲು ಹೋಗುತ್ತಾನೆ. ಆದರೆ ಸ್ಪಿಲ್ಮನ್ ಧರಿಸಿದ್ದ ಜರ್ಮನ್ ಸೇನೆಯ ಕೋಟ್ ನೋಡಿ ಅವರು ಗಾಬರಿಗೊಂಡು ಕಿರುಚಿಕೊಂಡಾಗ ರಷ್ಯಾ ಸೈನಿಕರು ಈತನ ಮೇಲೆ ಗುಂಡು ಹಾರಿಸಲು ತೊಡಗುತ್ತಾರೆ. ಗುಂಡು ಹೊಡೆಯಬೇಡಿ ತಾನೊಬ್ಬ ಪೋಲಿಶ್ ಎಂದು ಕೂಗಿ ಹೇಳಿ ಶರಣಾಗುತ್ತಾನೆ. ಆಗ ರಷ್ಯಾ ಸೈನಿಕನೊಬ್ಬ ಜರ್ಮನ್ ಸೇನೆಯ ಕೋಟ್ ಏಕೆ ಧರಿಸಿದ್ದೆ ಎಂದು ಕೇಳಿದಾಗ “ ಚಳಿಯಾಗಿತ್ತು” ಎಂದು ಸ್ಪಿಲ್ಮನ್ ಉತ್ತರಿಸುತ್ತಾನೆ.

  ಎಲ್ಲ ಕಳೆದು ಮತ್ತೆ ಮೊದಲಿನ ಜೀವನಕ್ಕೆ ಮರಳಿದ ನಂತರ ತನ್ನ ಹಳೆಯ ಸಹೋದ್ಯೋಗಿ/ಸ್ನೇಹಿತ ಸಿಗುತ್ತಾನೆ. ಆತನಿಗೆ ತನ್ನೆಲ್ಲ ಕಥೆ ಹೇಳಿದ ನಂತರ ತನ್ನನ್ನು ರಕ್ಷಿಸಿದ ಅಧಿಕಾರಿಯನ್ನು ತನ್ನ ಸ್ನೇಹಿತ ನೋಡಿದ್ದ ಎಂದು ತಿಳಿದು ಆ ಅಧಿಕಾರಿಯನ್ನು ಹುಡುಕಲು ಪ್ರಯತ್ನಿಸುತ್ತಾನೆ. ಆದರೆ ಪ್ರಯೋಜನವಾಗುವುದಿಲ್ಲ. ಕಡೆಗೆ ಮತ್ತೆ ರೇಡಿಯೋದಲ್ಲಿ ಪಿಯಾನೋ ನುಡಿಸುವ ಕಲಾವಿದನಾಗಿ ತನ್ನ ಜೀವನ ಮುಂದುವರೆಸುತ್ತಾನೆ.

  ಈ ಚಿತ್ರಕ್ಕಾಗಿ ಏಡ್ರಿಯನ್ ಬ್ರೋಡಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿತು. ರೋಮನ್ ಪೋಲನ್ಸ್ಕಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ರೊನಾಲ್ಡ್ ಹಾರ್ವುಡ್ ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ದೊರಕಿತು. ಚಿತ್ರ ಕೇವಲ ಒಬ್ಬ ವ್ಯಕ್ತಿಯದ್ದು ಅನ್ನಿಸಿದರೂ ಒಂದು ಜನಾಂಗ ಅನುಭವಿಸಿದ ಕ್ರೌರ್ಯ, ಹಿಂಸೆಯ ಸಂಕೇತವಾಗಿ ಗಟ್ಟಿಯಾಗಿ ನಿಲ್ಲುತ್ತದೆ.


ವ್ಲಾಡಿಸ್ಲಾವ್ ಸ್ಪಿಲ್ಮನ್


ಸ್ಪಿಲ್ಮನ್ ಗೆ ರಕ್ಷಣೆ ನೀಡಿದ ಕಾಪ್ಟನ್ ವಿಲ್ಮ್ ಹೊಸೆನ್ಫೆಲ್ದ್

 
- ವಿಶ್ವನಾಥ್ 






Wednesday, 8 November 2017

ವ್ಯಾಗ್ ದಿ ಡಾಗ್



IMDb: http://www.imdb.com/title/tt0120885/

  “ನಾಯಿ ತನ್ನ ಬಾಲವನ್ನು ಏಕೆ ಆಡಿಸುತ್ತದೆ? ಏಕೆಂದರೆ ನಾಯಿ ತನ್ನ ಬಾಲಕ್ಕಿಂತ ಚುರುಕಾಗಿದೆ.”
“ಬಾಲ ನಾಯಿಗಿಂತ ಚುರುಕಾಗಿದ್ದಿದ್ದರೆ, ಬಾಲವೇ ನಾಯಿಯನ್ನು ಆಡಿಸುತ್ತಿತ್ತು.”

  90ರ ದಶಕದಲ್ಲಿ ಬಿಲ್ ಕ್ಲಿಂಟನ್ ಮಾಡಿಕೊಂಡ ಲೆವಿನ್ಸ್ಕಿ ಹಗರಣ ಜ್ಞಾಪಿಸಿಕೊಳ್ಳಿ. ಅದೊಂದು ಹಗರಣದಿಂದ ಕ್ಲಿಂಟನ್ ನ ಘನತೆಗೆ ಅಪಾರ ಧಕ್ಕೆಯಾಯಿತು. ತನ್ನ ವೃತ್ತಿ ಜೀವನಕ್ಕೆ ಒಂದು ದೊಡ್ಡ ಕಳಂಕ ಅಂಟಿಸಿಕೊಂಡು ಆತ ಸೇವೆಯಿಂದ ನಿವೃತ್ತಿಯಾದ. ಇಂತಹ ಒಂದು ಸನ್ನಿವೇಶದ ಬಗ್ಗೆಯೇ ಈ ಚಿತ್ರ.

 ಈ ಕಾಲ್ಪನಿಕ ಕಥೆಯಲ್ಲಿ ಬರುವ ಅಮೇರಿಕ ಅಧ್ಯಕ್ಷ ಕೂಡ ತನ್ನ ವೈಟ್ ಹೌಸ್ ಗೆ ಆಗಮಿಸಿದ ಗರ್ಲ್ ಸ್ಕೌಟ್ ಗಳ ಪೈಕಿ ಓರ್ವ ಹುಡುಗಿಯ ಜೊತೆ ಅಸಭ್ಯವಾಗಿ ನಡೆದುಕೊಂಡ ಎನ್ನುವ ಸುದ್ದಿ ಎಲ್ಲೆಡೆ ಹಬ್ಬುವುದರಲ್ಲಿರುತ್ತದೆ. ಇದೂ ಚುನಾವಣೆಗೆ ಕೇವಲ ಸುಮಾರು 10-11 ದಿನಗಳಿರುವಾಗ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷರ ಶಿಫಾರಸಿನ ಮೇರೆಗೆ ಇದನ್ನು ಸಂಭಾಳಿಸಲು ‘ಮಿ. ಫಿಕ್ಸ್ ಇಟ್’ ಕಾನ್ರಾಡ್ ಬ್ರೀಯನ್(ರಾಬರ್ಟ್ ಡಿ ನಿರೋ) ನನ್ನು ಕರೆಸಲಾಗುತ್ತದೆ. ಬಂದು ವಿಷಯ ಪೂರ್ತಿ ತಿಳಿದ ನಂತರ ಅವನು ನಿರ್ಧಾರ ಮಾಡುವುದಿಷ್ಟೇ- ರಾಜಕೀಯ ಸ್ಫೋಟಕ್ಕೆ ಕಾರಣವಾಗಬಲ್ಲಂತಹ ಇಂತಹ ವಿಷಯವನ್ನು ಮುಚ್ಚಿಹಾಕಬೇಕಾದರೆ, ಇದಕ್ಕಿಂತ ಸ್ಫೋಟಕ ವಿಷಯವೊಂದು ಉದ್ಭವಿಸಬೇಕು. ಹಾಗಾಗದಿದ್ದರೆ, ಉದ್ಭವಿಸುವ ಹಾಗೆ ಮಾಡಿ ಜನರ ಗಮನ ಅದರೆಡೆಗೆ ಸೆಳೆಯಬೇಕು.
 ಅಂತಹ ಬಲವಾದ ವಿಷಯ ಏನಿದೆ? ಎಲ್ಲಿಂದ ಸೃಷ್ಟಿಸುವುದು? ಹೀಗೆ ಮಾತನಾಡುತ್ತಲೇ ಬ್ರೀಯನ್, ಚೀನಾ ದೇಶ ಪ್ರವಾಸದಲ್ಲಿ ಇರುವ ಅಧ್ಯಕ್ಷ ಆರೋಗ್ಯದ ನೆಪ ಹೇಳಿ ಒಂದೆರೆಡು ದಿನ ಅಲ್ಲಿಯೇ ಇರುವಂತೆ ಏರ್ಪಾಡು ಮಾಡಲು ಸೂಚಿಸುತ್ತಾನೆ. ಪತ್ರಿಕೆಗಳಿಗೆ ಸುದ್ದಿ ಸೋರಿಕೆಯಾಗುವ ಅನಧಿಕೃತ ಮೂಲಗಳಿಂದ “ಅಧ್ಯಕ್ಷ B-3 ಬಾಂಬರ್ ಬಗ್ಗೆ ಮಾತಾಡಲು ಚೀನಾಗೆ ಹೋಗಿಲ್ಲ” ಎಂದು ಬೇಕೆಂದೇ ಸುದ್ದಿ ಸೋರಿಕೆ ಮಾಡುವುದು. ಯಾರಾದರು ಕೇಳಿದರೆ “B-3 ಬಾಂಬರ್ ಬಗ್ಗೆ ತಮಗೆ ಗೊತ್ತಿಲ್ಲ” ಎಂದು ಈ ವಿಷಯದ ಸುತ್ತ ಇಲ್ಲದ ನಿಗೂಢತೆ ಸೃಷ್ಟಿಸುವುದು. ಇದಕ್ಕೆ ಪುಷ್ಟಿ ಕೊಡಲು ಮಿಲಿಟರಿ ಜನರಲ್ ಗಳನ್ನು ಬೋಯಿಂಗ್ ಕಂಪನಿಗೆ ಸುಮ್ಮನೆ ಕಳಿಸುವುದು. ಇದನ್ನು ಖಂಡಿತ ಗಮನಿಸುವ ಪತ್ರಕರ್ತರು ಏನಾದರು ಪ್ರಶ್ನೆ ಮಾಡಿದರೆ ಅದನ್ನು ಅಲ್ಲಗಳೆದು ಹಿನ್ನಲೆಯಲ್ಲಿ ಏನೋ ನಡೆಯುತ್ತಿದೆ ಎಂದು ಪತ್ರಕರ್ತರ ಗಮನವನ್ನ ಒಂದೆರಡು ದಿನಗಳ ಮಟ್ಟಿಗೆ ಹಗರಣದಿಂದ ಬೇರೆಡೆಗೆ ಸೆಳೆಯುವುದು ಆತನ ಉಪಾಯ.
 ಇದು ಕೇವಲ ಒಂದೆರಡು ದಿನಗಳ ಮಟ್ಟಿಗೆ ಸಮಯ ಕೊಟ್ಟರೂ ಇದರ ಮುಂದುವರಿದ ಭಾಗವಾಗಿ ಒಂದು ಯುದ್ಧ ಸೃಷ್ಟಿಸಬೇಕು. ಅಮೇರಿಕ ಯಾವುದಾದರೂ ದೇಶದ ಜೊತೆ ಯುದ್ಧಕ್ಕೆ ಹೋಗುವುದರ ಅಥವಾ ಸಿದ್ಧವಾಗುತ್ತಿರುವುದರ ಬಗ್ಗೆ ಕಥೆಯನ್ನು ಬೆಳೆಸಬೇಕು. ಮತ್ತು ಆ ದೇಶ ಅಷ್ಟು ಪರಿಚಿತವಲ್ಲದ ದೇಶವಾಗಿರಬೇಕು. ಆ ದೇಶದ ಇರುವಿಕೆಯ ಬಗ್ಗೆಯೇ ಜನರಿಗೆ ಅಷ್ಟು ಗೊತ್ತಿಲ್ಲದಿದ್ದರೆ, ಆ ದೇಶದ ಬಗ್ಗೆ ಏನು ಸುದ್ದಿ ಹರಡಿದರೂ ಅದರ ನಿಜ ಹೊರಬರಲು ಒಂದು 15-20 ದಿನಗಳಾದರೂ ಬೇಕು. ಇಷ್ಟು ದಿನ ಚುನಾವಣೆಯವರೆಗು ಅಧ್ಯಕ್ಷನನ್ನು ಹಗರಣದ ಅಪಪ್ರಚಾರವಿಲ್ಲದೆ ಕರೆದುಕೊಂದು ಹೋಗುವಲ್ಲಿ ಸಾಕು. ಆದರೆ ಯಾವ ದೇಶದ ಮೇಲೆ ಈ ತೋರಿಕೆಯ ಯುದ್ಧಕ್ಕೆ ತೆರಳುವುದು? ಅಲ್ಬೇನಿಯಾದ ಮೇಲೆ ಯುದ್ಧಕ್ಕೆ ಹೋದರೆ ಹೇಗೆ ಎಂದು ಬ್ರೀಯನ್ ಯೋಚಿಸುತ್ತಾನೆ. ಏಕೆಂದು ಪ್ರಶ್ನಿಸಿದ ಸಹಾಯಕಿ ಏಮಿಸ್ ಗೆ ಆ ದೇಶದ ಬಗ್ಗೆ ಜನಕ್ಕೆ ಗೊತ್ತಿಲ್ಲ ಮತ್ತು ಆ ದೇಶ ನಮ್ಮ ಮೇಲೆ ಯುದ್ಧಕ್ಕೆ ಸಿದ್ಧವಾಗಿದ್ದಕ್ಕೆ ನಾವು ಅದರ ಮೇಲೆ ಯುದ್ಧಕ್ಕೆ ಹೋಗುತ್ತಿದ್ದೇವೆ ಎಂದು ವಿವರಿಸುತ್ತಾನೆ. ಹಾಗೆ ಸಿ.ಐ.ಎ ಮತ್ತು ಇತರ ಏಜೆನ್ಸಿಗಳ ಅಲ್ಬೇನಿಯಾ ಪರಿಣತರನ್ನು ಕೂಡಲೇ ಈ ಬಗ್ಗೆ ಸುದ್ದಿ ಕೊಟ್ಟು ಅವರನ್ನು ಜಾಗೃತಗೊಳಿಸುವಂತೆ ಹೇಳುತ್ತಾನೆ. ಆದರೆ ಪತ್ರಿಕೆಯ ಮುಂದೆ ಮಾತ್ರ ಇವೆಲ್ಲಾ ನಡೆಯುತ್ತಿಲ್ಲ ಎಂದೇ ಹೇಳಬೇಕು.
 ಇದೆ ಹಾದಿಯಲ್ಲಿ ಯೋಚಿಸುತ್ತ ಬ್ರೀಯನ್ ಒಬ್ಬ ಹಾಲಿವುಡ್ ನಿರ್ಮಾಪಕನನ್ನು ಭೇಟಿಯಾಗಿ ಅವನಿಂದ ಇದರ ಬಗ್ಗೆ ಸಹಾಯ ಪಡೆಯಲು ಯೋಚಿಸಿ ಲಾಸ್ ಏಂಜಲಿಸ್ ಗೆ ಹೊರಡುತ್ತಾನೆ. ಅಲ್ಲಿ ನಿರ್ಮಾಪಕ ಮೊಟ್ಸ್(ಡಸ್ಟಿನ್ ಹಾಫ್ಮನ್) ನನ್ನು ಭೇಟಿಯಾಗಿ ಆಗಿರುವ ಸಮಸ್ಯೆಯನ್ನೆಲ್ಲ ವಿವರಿಸಿ ಅಲ್ಬೇನಿಯದಲ್ಲಿ ಭಯೋತ್ಪಾದಕ ದಾಳಿ ಶುರುವಾಗಿದ್ದು ಅದರಿಂದ ತಪ್ಪಿಸಿಕೊಂಡು ಹೊರಬರುತ್ತಿರುವ ಹುಡುಗಿಯ ವಿಡಿಯೋ ಚಿತ್ರಿಸಿಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇವರ ವಿವರವನ್ನೆಲ್ಲಾ ಕೇಳಿ ವಿಷಯದ ಗಾಂಭೀರ್ಯ ಅರಿತ ಮೊಟ್ಸ್, ಅದಕ್ಕೆ ಬೇಕಾದ ಕಲಾವಿದರನ್ನು ಕರೆಸಿ ವಿಡಿಯೋ ನಿರ್ಮಿಸಿ ಕೊಡುತ್ತಾನೆ. ಈ ವಿಡಿಯೋ ಚಿತ್ರೀಕರಣ ಪ್ರಹಸನ ಮುಗಿದ ನಂತರ ಬ್ರೀಯನ್ ಮುಂದಿನ ಹಂತದ ಕಥೆ ಸೃಷ್ಟಿಸಲು ಬೇರೆಯ ಊರಿಗೆ ಹೋಗುವ ಸಂದರ್ಭದಲ್ಲಿ ಸಿ.ಐ.ಎ ಬ್ರೀಯನ್ ಮತ್ತು ಏಮಿಸ್ ರನ್ನು ವಿಚಾರಣೆಗೆಂದು ಕರೆದೊಯ್ಯುತ್ತಾರೆ. ಸಿ.ಐ.ಎ ಅಧಿಕಾರಿ ತಮಗೆ ಬಂದ ಎಲ್ಲ ಮಾಹಿತಿಗಳ ಪ್ರಕಾರ ಯಾವ ಯುದ್ಧದ ಪರಿಸ್ಥಿತಿ ಇಲ್ಲದಿದ್ದರೂ ಏಕೆ ಈ ಇಬ್ಬರು ಹೀಗೆ ಸುಳ್ಳು ಸುದ್ದಿ ಪ್ರಸಾರವಾಗುವಂತೆ ಮಾಡುತ್ತಿದ್ದಾರೆ ಎಂದು ವಿಚಾರಿಸುತ್ತಾನೆ. ಈ ವಿಚಾರಣೆಯಿಂದ ಏಮಿಸ್ ಹೆದರಿದರೂ, ಬ್ರೀಯನ್ ಮಾತ್ರ ಮಾತನ್ನು ಹೇಗೆ ತಿರುಗಿಸುತ್ತಾನೆ ಎಂದರೆ ಸಿ.ಐ.ಎ ಅಧಿಕಾರಿ ಇವರನ್ನು ವಿಚಾರಣೆಗೆ ಒಳಪಡಿಸಿ ತಪ್ಪು ಮಾಡಿದ್ದೀನೇನೋ ಎಂದುಕೊಳ್ಳುವಂತೆ ಮಾಡುತ್ತಾನೆ. ಕಡೆಗೆ ಸಿ.ಐ.ಎ ಅಧಿಕಾರಿಗಳೇ ಇವರಿಗೆ ಹೋಗಲು ಅನುವು ಮಾಡಿಕೊಡುತ್ತಾರೆ.

 ಇದಾದ ನಂತರ ಮುಂದಿನ ಹಂತಕ್ಕೆ ಬ್ರೀಯನ್, ಏಮಿಸ್ ಮತ್ತು ನಿರ್ಮಾಪಕ ಸಿದ್ಧರಾಗುತ್ತಿದಂತೆ, ಸುದ್ದಿ ವಾಹಿನಿಗಳಲ್ಲಿ ಅಲ್ಬೇನಿಯಾದ ಜೊತೆಗಿನ ಬಿಕ್ಕಟ್ಟು ಪರಿಹಾರಗೊಂಡಿದ್ದು ಪರಿಸ್ಥಿತಿ ಎಲ್ಲ ಶಾಂತವಾಗಿದೆ ಎಂದು ಸಿ.ಐ.ಎ ಹೇಳಿದ್ದಾರೆ ಎಂದು ಸುದ್ದಿ ಪ್ರಕಟವಾಗುತ್ತದೆ. ತಮಗೆ ಸಿಕ್ಕ ಸಿ.ಐ.ಎ ಅಧಿಕಾರಿ ತಮ್ಮ ಮುಂದೆ ಮಾತ್ರ ಭಯ ಪ್ರದರ್ಶಿಸಿದರೂ ಎಲ್ಲೋ ಕೈ ಕೊಟ್ಟಿದ್ದಾನೆ ಮತ್ತು ಈ ಸುದ್ದಿಯನ್ನು ಸೋರಿಕೆ ಮಾಡಿದ್ದಾನೆ ಎಂದೂ, ಮುಂದೇನು ಮಾಡುವುದು ಎಂದು ಬ್ರೀಯನ್, ಏಮಿಸ್ ಮತ್ತು ಮೊಟ್ಸ್ ಯೋಚಿಸುತ್ತಾ ಕೂರುತ್ತಾರೆ. ಆಗ ಹೊಳೆಯುವುದೇ ಹಿಂದೆ ಅಮೇರಿಕಾ ನಡೆಸಿದ ಯಾವುದೋ ಗುಪ್ತ ಸೈನಿಕ ಕಾರ್ಯಾಚರಣೆಯಲ್ಲಿ ಒಬ್ಬ ಸೈನಿಕ ಮರಳಿ ಬಂದಿಲ್ಲವೆಂದೂ, ಆತ ಇನ್ನೂ ಬದುಕಿದ್ದು ಮರಳಿ ಬರಲು ಪ್ರಯತ್ನಿಸುತ್ತಿದ್ದಾನೆ ಎಂದು ಸುದ್ದಿಯಾದರೆ ಜನರ ಗಮನ ಖಂಡಿತ ಸೆಳೆಯಬಹುದು ಎಂದು ಯೋಚಿಸುತ್ತಾರೆ. ಹೀಗೆ ಯೋಚಿಸಿ ಪೆಂಟಗಾನ್ ನಲ್ಲಿ ಯಾರನ್ನೋ ಸಂಪರ್ಕಿಸಿ ವಿಶೇಷ ಕಾರ್ಯಕ್ರಮದ ಅಡಿಯ ಯಾವ ಸಂಬಂಧಿಕರೂ ಇಲ್ಲದ ಯಾವುದಾದರೂ ಸೈನಿಕನ ಹೆಸರನ್ನು ಸೂಚಿಸಲು ಹೇಳಿ ಶೂಮನ್ ಎನ್ನುವನನ್ನು ಆಯ್ಕೆ ಮಾಡಿ ತಮ್ಮ ಸುಪರ್ದಿಗೆ ಒಪ್ಪಿಸಲು ಕೇಳಿಕೊಳ್ಳುತ್ತಾರೆ. ಇವರ ಉಪಾಯ ಆತನನ್ನು ಬೇರೆ ದೇಶದಿಂದ ಬಿಡುಗಡೆ ಮಾಡಿಸಿ ನಮ್ಮ ರಾಷ್ಟ್ರಾಧ್ಯಕ್ಷರು ಕರೆತಂದಿದ್ದಾರೆ ಎಂದು ಬಿಂಬಿಸಿ ಪ್ರಚಾರ ಗಿಟ್ಟಿಸುವುದು.
  ಆದರೆ ಆಗುವುದೇ ಬೇರೆ. ಆತನನ್ನು ಕರೆತರಲು ಹೋದಾಗಲೇ ತಿಳಿಯುವುದು ಆತ ಸೈನ್ಯದಲ್ಲಿ ಮಾನಸಿಕ ಅಸ್ವಸ್ಥರಾದವರನ್ನು ಇಟ್ಟಿದ್ದ ವಿಶೇಷ ಆಸ್ಪತ್ರೆಯಿಂದ ಕರೆತಂದು ಇವರಿಗೆ ಒಪ್ಪಿಸಿದ್ದಾರೆ ಎಂದು. ಆತ ಒಬ್ಬಾಕೆಯ ಮಾನಭಂಗ ಮಾಡಿ ಆಸ್ಪತ್ರೆ ಸೇರಿದ್ದ ಹುಚ್ಚ. ಇವರಿಗೆ ಏನು ಮಾಡುವುದೋ ತಿಳಿಯದೆ ಶೂಮನ್ ನನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೊರಡುತ್ತಾರೆ, ಮಾರ್ಗ ಮಧ್ಯೆ ವಿಮಾನದಲ್ಲಿ ಹವಾಮಾನ ವೈಪರಿತ್ಯದ ಕಾರಣದಿಂದ ತಾಂತ್ರಿಕ ತೊಂದರೆಯಾಗಿ ವಿಮಾನ ನೆಲಕ್ಕಪ್ಪಳಿಸುತ್ತದೆ. ಪವಾಡವೆಂಬಂತೆ ಎಲ್ಲರೂ ಬದುಕುಳಿದರೂ ಯಾವುದೊ ದೂರದ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದರಿಂದ ಬ್ರೀಯನ್, ಏಮಿಸ್, ಮೊಟ್ಸ್ ಮತ್ತು ಶೂಮನ್ ಅಲ್ಲೇ ತಮ್ಮ ಇತರೆ ಸಹೋದ್ಯೋಗಿಗಳು ಬಂದು ಕರೆದೊಯ್ಯುವವರೆಗೂ ಕಾಯುತ್ತ ಕೂರುತ್ತಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಅಂಗಡಿಯವನ ಮಗಳನ್ನು ನೋಡಿದ ಶೂಮನ್ ಆಕೆಯ ಹಿಂದೆ ಓಡುತ್ತಾನೆ. ತನ್ನನ್ನು ಹಿಂಬಾಲಿಸಿದ ಈತನನ್ನು ನೋಡಿದ ಆ ಹುಡುಗಿ ಹೆದರಿ ಚೀರಿಕೊಂಡಾಗ ಅಂಗಡಿಯವ ತನ್ನ ಗನ್ ನಿಂದ ಶೂಮನ್ ನನ್ನು ಕೊಲ್ಲುತ್ತಾನೆ. ಕಥೆ ಮುಗಿಯುವ ಹಂತದಲ್ಲಿ ಮತ್ತೆ ಸಮಸ್ಯೆಯಾಗಿದ್ದಕ್ಕೆ ತಲೆಕೆಡಿಸಿಕೊಂಡ ಬ್ರೀಯನ್ ಮತ್ತು ಏಮಿಸ್ ಗೆ ಸಮಾಧಾನ ಹೇಳುತ್ತಾ ಮೊಟ್ಸ್ ವಿಮಾನ ಅಪಘಾತದಲ್ಲಿ ಆತ ಮೃತಪಟ್ಟ ಎಂದು ಹೇಳಿ ವಿಷಯ ಮುಚ್ಚಿಹಾಕುವ ಸಲಹೆ ಕೊಡುತ್ತಾನೆ. ಕೊನೆಗೆ ಎಲ್ಲಾ ಮುಗಿದು ಶೂಮನ್ ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುತ್ತಾರೆ.
  ಇಷ್ಟು ದೊಡ್ಡ ಜವಾಬ್ದಾರಿಯನ್ನು ಮುಗಿಸಿ ಸಮಧಾನಪಟ್ಟುಕೊಳ್ಳುತ್ತಾ ಒಬ್ಬರಿಗೊಬ್ಬರು ಶುಭಾಶಯ ಹೇಳಿಕೊಳ್ಳುತ್ತಾ ಇರುವಾಗ ಮೊಟ್ಸ್ ತನ್ನ ಈ ಸಾಹಸಕ್ಕೆ ತನಗೆ ದಕ್ಕಬೇಕಾದ್ದ ಕೀರ್ತಿ ಸಿಗದೆ ಹೋಗುತ್ತದಲ್ಲ ಎಂದು ಚಡಪಡಿಸುತ್ತಾ ಟಿವಿ ಕಾರ್ಯಕ್ರಮವೊಂದಕ್ಕೆ ಕರೆ ಮಾಡಿ ಎಲ್ಲ ವಿಷಯ ತಿಳಿಸುವುದಾಗಿ ಬ್ರೀಯನ್ ಗೆ ಹೇಳುತ್ತಾನೆ. ಮೊಟ್ಸ್ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಬ್ರೀಯನ್ ಎಷ್ಟು ಹೇಳಿದರೂ ಮೊಟ್ಸ್ ಕೇಳದೆ ಹೊರನಡೆದಾಗ ಬ್ರೀಯನ್ ಸೀಕ್ರೆಟ್ ಸರ್ವಿಸ್ ನವರಿಗೆ ಏನೋ ಸಂಜ್ಞೆ ಮಾಡುತ್ತಾನೆ. ಇದಾದ ನಂತರ ಸುದ್ದಿವಾಹಿನಿಗಳಲ್ಲಿ ಖ್ಯಾತ ನಿರ್ಮಾಪಕ ಸ್ಟಾನ್ಲಿ ಮೊಟ್ಸ್ ಧಿಡೀರನೆ ಹೃದಯಾಘಾತವಾಗಿ ತಮ್ಮ ಈಜುಕೊಳದ ಬಳಿ ಸತ್ತರು ಎಂದು ಸುದ್ದಿ ಪ್ರಕಟವಾಗುತ್ತದೆ. ಅದೇ ಸುದ್ದಿ ಮುಂದುವರೆದು ಅಲ್ಬೇನಿಯಾದ ಹಳ್ಳಿಯೊಂದರಲ್ಲಿ ನಡೆದ ಬಾಂಬ್ ದಾಳಿಯ ಜವಾಬ್ದಾರಿಯನ್ನು ‘ಅಲ್ಬೇನಿಯಾ ಯುನೈಟ್’ ಎಂಬ ಗುಂಪು ಹೊತ್ತಿದೆ ಎಂದು ಸುದ್ದಿ ಪ್ರಕಟವಾಗುತ್ತದೆ. ಇದಕ್ಕೆ ಪ್ರತಿಯಾಗಿ ಅಮೇರಿಕಾ ತನ್ನ ಸೈನ್ಯವನ್ನು ಶೀಘ್ರದಲ್ಲಿ ಅಲ್ಬೇನಿಯಾ ಬಿಕ್ಕಟ್ಟನ್ನು ಪೂರ್ತಿ ಬಗೆ ಹರಿಸಲು ಕಳಿಸುತ್ತದೆ ಎಂದು ಅಮೇರಿಕಾ ಸೇನೆಯ ಜನರಲ್ ಹೇಳಿಕೆ ಕೊಟ್ಟಿದ್ದಾರೆಂದು ಸುದ್ದಿ ವಾಹಿನಿ ಪ್ರಕಟಿಸುತ್ತದೆ.

  ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಗುವ ಅದೆಷ್ಟು ಸುದ್ದಿಗಳು ಹೀಗೆ ಇರಬಹುದು ಎಂದು ಯೋಚಿಸಿದರೆ ಯಾರನ್ನು ನಂಬುವುದೋ ಎಂದು ಕಳವಳವಾಗುತ್ತದೆ. ಇದೆ ತರಹದ ಎಷ್ಟೋ ಚಿತ್ರಗಳು ಬಂದಿದ್ದರೂ ಈ ರೀತಿ ಗಂಭೀರ ವಿಷಯವನ್ನು ಹಾಸ್ಯದ ಲೇಪನದೊಂದಿಗೆ ಹೇಳುವಂತಹವು ಕೆಲವೇ ಕೆಲವು. ‘ಯೆಸ್ ಮಿನಿಸ್ಟರ್’ ಮತ್ತು ‘ಯೆಸ್ ಪ್ರೈಮ್ ಮಿನಿಸ್ಟರ್’ ಧಾರಾವಾಹಿಗಳು ಕೂಡ ಇಂತಹದ್ದೇ ರಾಜಕೀಯ ವಿಡಂಬನೆಯದ್ದು. ಈ ಚಿತ್ರವನ್ನು ಇಷ್ಟ ಪಟ್ಟವರು ಖಂಡಿತ ಆ ಧಾರಾವಾಹಿಯನ್ನು ಇಷ್ಟ ಪಡುತ್ತೀರಿ.

-ವಿಶ್ವನಾಥ್